ಪಾಕಿಸ್ತಾನದ ಅಣುಬಾಂಬ್‌ಗಳು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರ ನಿಯಂತ್ರಣಕ್ಕೆ ಹೋಗುವ ಸಾಧ್ಯತೆ

ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಆದಿಲ್ ರಾಜಾ ಅವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ದೇಶವನ್ನು ಅಪಾಯಕಾರಿ ತಿರುವಿಗೆ ಕೊಂಡೊಯ್ಯುವ ಯೋಜನೆಯನ್ನು ರೂಪಿಸಿದ್ದಾರೆ. ಮುನೀರ್ ಅವರ ಸೂಚನೆಯ ಮೇರೆಗೆ ಶೆಹಬಾಜ್ ಷರೀಫ್ ಸರಕಾರವು ಸಂವಿಧಾನದಲ್ಲಿ ಬದಲಾವಣೆಗಳನ್ನು ತರುತ್ತಿದೆ. ನವೆಂಬರ್ 10 ರಂದು ಪಾಕಿಸ್ತಾನದ ಸಂಸತ್ತಿನ ಹಿರಿಯ ಸಭೆಯು ತಿದ್ದುಪಡಿ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ಪಾಕಿಸ್ತಾನದಲ್ಲಿ 27ನೇ ತಿದ್ದುಪಡಿ ಕಾಯ್ದೆ ಜಾರಿಯಾದರೆ, ದೇಶದ ಮೇಲೆ ಸೇನಾ ನಿಯಂತ್ರಣವು ಕಾನೂನುಬದ್ಧವಾಗಲಿದೆ ಮತ್ತು ಪಾಕಿಸ್ತಾನವು ಸೇನಾ-ನಿಯಂತ್ರಿತ ನಾಗರಿಕ ಆಡಳಿತದ ಸ್ವರೂಪಕ್ಕೆ ಪರಿವರ್ತನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸಂವಿಧಾನದ 243ನೇ ವಿಧಿಯಲ್ಲಿನ ಬದಲಾವಣೆಯಿಂದಾಗಿ ಅಸೀಮ್ ಮುನೀರ್ ಅವರಿಗೆ ಮೂರು ಸೇನಾ ಪಡೆಗಳ ಆದೇಶದ ಜೊತೆಗೆ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಸಂಪೂರ್ಣ ನಿಯಂತ್ರಣ ಸಿಗಲಿದೆ ಎಂದು ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಆದಿಲ್ ರಾಜಾ ಬಹಿರಂಗಪಡಿಸಿದ್ದಾರೆ.

ಒಂದು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಆದಿಲ್ ರಾಜಾ ಅವರು,

1. 27ನೇ ತಿದ್ದುಪಡಿಯ ನಂತರ ಎಲ್ಲಾ ಅಧಿಕಾರವು ಅಸೀಮ್ ಮುನೀರ್ ಅವರ ನಿಯಂತ್ರಣದಲ್ಲಿರಲಿದೆ ಎಂದರು. ಪಾಕಿಸ್ತಾನದಲ್ಲಿ ಸೇನೆಯ ಆಡಳಿತ ಹೊಸತಲ್ಲ, ಆದರೆ ಸಂವಿಧಾನದಲ್ಲಿನ ಬದಲಾವಣೆಯಿಂದಾಗಿ ಈಗ ಅದು ಔಪಚಾರಿಕ ಸ್ವರೂಪ ಪಡೆಯುತ್ತಿದೆ. ಸಂವಿಧಾನದ 243ನೇ ವಿಧಿಯಲ್ಲಿನ ಬದಲಾವಣೆಯು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ನೌಕಾಪಡೆ ಮತ್ತು ವಾಯುಪಡೆಯ ಮೇಲೆ ಅಭೂತಪೂರ್ವ ಅಧಿಕಾರಗಳನ್ನು ನೀಡಲಿದೆ. ಅಸೀಮ್ ಮುನೀರ್ ಅವರು ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರ ಸಲಹೆಯಿಲ್ಲದೆ ಯಾವುದೇ ಕಾರ್ಯಾಚರಣೆಯನ್ನು ಮಾಡಬಹುದು ಮತ್ತು ಯಾರ ಮೇಲೆಯೂ ಆಕ್ರಮಣ ಮಾಡಬಹುದು. ಈ ಪರಿಸ್ಥಿತಿಯು ಭಾರತಕ್ಕೆ ಅತ್ಯಂತ ಅಪಾಯಕಾರಿಯಾಗಬಹುದು.

2. ‘ಫೀಲ್ಡ್ ಮಾರ್ಷಲ್’ ಮತ್ತು ‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ (ಮೂರು ಸೇನಾ ಪಡೆಗಳ ಮುಖ್ಯಸ್ಥ) ಆಗಿ ಅಸೀಮ್ ಮುನೀರ್ ಅವರು 5 ಸ್ಟಾರ್ ಜನರಲ್‌ನಂತೆ ನೇರವಾಗಿ ಆಜ್ಞೆಯನ್ನು ತೆಗೆದುಕೊಳ್ಳಬಹುದು. ಆದರೆ, ಅವರಿಗೆ ಇನ್ನೂ ಪಾಶ್ಚಿಮಾತ್ಯ ಶಕ್ತಿಗಳ ಬೆಂಬಲದ ಅಗತ್ಯವಿದೆ ಎಂದು ಆದಿಲ್ ರಾಜಾ ವಿವರಿಸಿದರು.

3. ಅಮೆರಿಕಾದ ಗುಪ್ತಚರ ಸಂಸ್ಥೆ ‘ಸಿಐಎ’ (ಸೆಂಟ್ರಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ಯ ಮಾಜಿ ಅಧಿಕಾರಿಗಳ ಅಭಿಪ್ರಾಯದಂತೆ, ಒಬ್ಬ ಅಮೆರಿಕನ್ ಸೇನಾ ಜನರಲ್ ಮೂಲಕ ‘ಸೆಂಟ್ರಕಾಮ್’ (ಅಮೆರಿಕಾದ ರಕ್ಷಣಾ ವಿಭಾಗದ ಒಂದು ಘಟಕ) ಪಾಕಿಸ್ತಾನದ ಅಣು ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡುತ್ತಿದೆ; ಆದರೆ ಮೂಲಭೂತವಾದಿ ಮನೋಭಾವ ಹೊಂದಿರುವ ಅಸೀಮ್ ಮುನೀರ್ ಅವರ ನಿಯಂತ್ರಣದಲ್ಲಿ ಅಣು ಅಸ್ತ್ರಗಳಿರುವುದು ಅತ್ಯಂತ ಅಪಾಯಕಾರಿಯಾಗಿದೆ.

4. ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ತಾನಿ ಮೂಲದ ಜನರನ್ನು ಉದ್ದೇಶಿಸಿ ಮಾತನಾಡಿದ ಅಸೀಮ್ ಮುನೀರ್, ನಮ್ಮ ಬಳಿ ಬಾಂಬ್ ಇದೆ. ನಾವು ಸೋತರೆ, ಜಗತ್ತಿನ ಅನ್ಯ ಭಾಗವನ್ನು ಅಥವಾ ಈ ಪ್ರದೇಶವನ್ನು ನಮ್ಮೊಂದಿಗೆ ತೆಗೆದುಕೊಂಡು ನಾವು ಕೆಳಗೆ ಹೋಗಬಹುದು ಎಂದು ಬಹಿರಂಗವಾಗಿ ಹೇಳಿದ್ದರು.

5. ಪಾಕಿಸ್ತಾನದ ಪ್ರಧಾನಮಂತ್ರಿ ಕೇವಲ ಹೆಸರಿಗೆ ಮಾತ್ರ. ಅವರು ಸೇನೆಯ ಬೆಂಬಲದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಆದಿಲ್ ರಾಜಾ ಹೇಳಿದರು. ಶೆಹಬಾಜ್ ನಂತರ (ಪ್ರಧಾನಿ ಹುದ್ದೆಗೆ) ಬೇರೆ ಯಾವುದೇ ಪರ್ಯಾಯ ಕಾಣುತ್ತಿಲ್ಲ. ಜನರ ಮನಸ್ಸಿನಲ್ಲಿ ಸೇನಾ ಮುಖ್ಯಸ್ಥರ ಬಗ್ಗೆ ಭಯವಿದೆ ಮತ್ತು ಅದಕ್ಕಾಗಿಯೇ ಅವರು ಬಹಿರಂಗವಾಗಿ ಮಾತನಾಡುವುದಿಲ್ಲ; ಆದರೆ ಮುನೀರ್ ಅವರ ಕೋಪದ ಅಂದಾಜು ಬಂದಿದ್ದರಿಂದ, ಅವರು ಸಾಂವಿಧಾನಿಕ ಬದಲಾವಣೆಗಳನ್ನು ಮಾಡಲು ಬಯಸುತ್ತಿದ್ದಾರೆ, ಇದರಿಂದಾಗಿ ಜನರ ಕೋಪದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಾನೂನುಬದ್ಧ ಸುರಕ್ಷತೆ ಸಿಗಬಹುದು.

ಸಂಪಾದಕೀಯ ನಿಲುವು

ಹಾಗಿದ್ದರೆ ಪಾಕಿಸ್ತಾನದ ವಿರುದ್ಧ ಭಾರತ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ!