Delhi Blast – ದೆಹಲಿಯ ಕೆಂಪು ಕೋಟೆಯ ಬಳಿ ಭೀಕರ ಸ್ಫೋಟ: 13 ಸಾವು

  • ಹೆಚ್ಚಿನ ಸಾವು-ನೋವು ಆಗಿರುವ ಸಾಧ್ಯತೆ

  • ಭಯೋತ್ಪಾದಕ ದಾಳಿಯ ಸಾಧ್ಯತೆ; ಆದರೆ ಸ್ಪಷ್ಟ ಇಲ್ಲ

  • ದೆಹಲಿ ಮತ್ತು ಮುಂಬಯಿನಲ್ಲಿ ಹೈ ಅಲರ್ಟ್ ಎಚ್ಚರಿಕೆ

ನವದೆಹಲಿ – ದೆಹಲಿಯ ಕೆಂಪು ಕೋಟೆಯ ಬಳಿಯ ಪ್ರಸಿದ್ಧ ಚಾಂದಿನಿ ಚೌಕ್‌ನಲ್ಲಿರುವ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ೧ ರ ಸಮೀಪ ಸಂಜೆ ೭ ಗಂಟೆ ಸುಮಾರಿಗೆ ಒಂದರ ನಂತರ ಒಂದರಂತೆ ಅನೇಕ ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟಗಳಿಂದಾಗಿ ಅಲ್ಲಿ ನಿಲ್ಲಿಸಿದ್ದ ೮ ನಾಲ್ಕು ವಾಹನಗಳು ಹೊತ್ತಿ ಉರಿದಿವೆ. ಇದರಲ್ಲಿ ಅನೇಕ ಜನರು ಮೃತಪಟ್ಟಿರುವ ಸಾಧ್ಯತೆ ಇದೆ. ಸದ್ಯ 13 ಜನರು ಮೃತಪಟ್ಟಿರುವುದು ಮತ್ತು ೮ ಜನ ಗಾಯಗೊಂಡಿರುವುದು ಅಧಿಕೃತವಾಗಿ ದೃಢಪಟ್ಟಿದೆ.

ಈ ಸ್ಫೋಟಗಳ ಶಬ್ದವು ಸುಮಾರು ಒಂದೂವರೆ ಕಿಲೋಮೀಟರ್ ದೂರದವರೆಗೆ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಾಗೆಯೇ, ಮೃತದೇಹಗಳ ಅಂಗಾಂಗಗಳು ೨೦ ಮೀಟರ್‌ಗಳಷ್ಟು ದೂರದವರೆಗೆ ಹಾರಿ ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕಟ್ಟಡಗಳ ಗೋಡೆಗಳು ಕೂಡ ಅಲುಗಾಡಿವೆ ಎಂದು ಹೇಳಲಾಗುತ್ತಿದೆ.

(ಸೌಜನ್ಯ – NDTV)

ಸ್ಫೋಟ ಸಂಭವಿಸಿದ ಸ್ಥಳದಿಂದ ಅತಿ ಸಮೀಪದಲ್ಲಿ ಗೌರಿಶಂಕರ ಮಂದಿರ ಮತ್ತು ದಿಗಂಬರ ಜೈನ ಮಂದಿರಗಳಿವೆ. ಈ ಮಂದಿರಗಳ ಕಿಟಕಿ ಗಾಜುಗಳು ಒಡೆದಿವೆ. ಇಲ್ಲಿನ ಒಂದು ಹಳೆಯ ಮಂದಿರದ ಗೋಡೆ ಕೂಡ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಮಂದಿರದ ಆವರಣದಲ್ಲಿ ಕೆಲವು ಮೃತದೇಹಗಳ ಅಂಗಾಂಗಗಳು ಪತ್ತೆಯಾಗಿವೆ. ಘಟನೆ ನಡೆದ ಕೂಡಲೇ ಅಗ್ನಿಶಮನ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ.

ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ! – ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸ್ಫೋಟದ ನಂತರ ರಾತ್ರಿ 9.30 ರ ಸುಮಾರಿಗೆ ಎಎನ್‌ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡುತ್ತಾ,

‘ಐ20’ ಹ್ಯುಂಡೈ ಕಾರಿನಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ದೆಹಲಿ ಪೊಲೀಸ್, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮುಂತಾದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿಯನ್ನು ಪಡೆಯಲಾಗುತ್ತಿದೆ. ಈ ಘಟನೆಯ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಈ ತನಿಖೆಯಿಂದ ಹೊರಬರುವ ಮಾಹಿತಿಯನ್ನು ನಂತರ ತಿಳಿಸಲಾಗುವುದು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಮೈಸೂರಿನಲ್ಲಿ ದಿಢೀರ್‌ ಸುದ್ದಿಗೋಷ್ಟಿ

ಘಟನೆ ಸಂಭವಿಸಿದ ಸುದ್ದಿ ತಿಳಿದ ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಮೈಸೂರಿನಲ್ಲಿ ದಿಢೀರ್‌ ಸುದ್ದಿಗೋಷ್ಟಿ ನಡೆಸಿ ಘಟನೆ ಕುರಿತು ಮಾತನಾಡಿದ್ದಾರೆ. ದೆಹಲಿಯಲ್ಲಿ ಸ್ಪೋಟ ನಡೆದಿದ್ದು, ಕೆಲವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಈ ಘಟನೆ ಬಗ್ಗೆ ನನಗೆ ಗೊತ್ತಾದ ಕೂಡಲೇ ಮೈಸೂರು ಪೊಲೀಸರ ಜತೆ ಮಾತನಾಡಿದ್ದೇನೆ, ಬೆಂಗಳೂರು ಪೊಲೀಸರ ಜತೆ ಸಹ ಮಾತನಾಡುತ್ತೇನೆ ಎಂದರು.

ರಾಜ್ಯ ಮಟ್ಟದ ಐಜಿಪಿ, ಡಿಜಿಪಿ ಜತೆ ಮಾತನಾಡುತ್ತೇನೆ. ಒಟ್ಟಾರೆಯಾಗಿ ಇಡೀ ರಾಜ್ಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸುವ ಕೆಲಸ ಮಾಡುತ್ತೇವೆ. ಎಲ್ಲ ಜಿಲ್ಲಾ ಕೇಂದ್ರಗಳು, ಬೆಂಗಳೂರು ನಗರ, ವಿಮಾನ ನಿಲ್ದಾಣಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು ಎನ್ನುವ ಸೂಚನೆಯನ್ನು ಈಗಾಗಲೇ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇನ್ನು ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ ಸಿದ್ದರಾಮಯ್ಯ ಕುಟುಂದವರಿಗೆ ಸಂತಾಪವನ್ನು ಸೂಚಿಸಿದರು.