ತೀರ್ಥಯಾತ್ರೆಯು ಭಾರತದ ಆತ್ಮವನ್ನು ಜೋಡಿಸುವ ಪವಿತ್ರ ಪರಂಪರೆ ! – ಪ್ರಧಾನ ಮಂತ್ರಿ

ವಾರಾಣಸಿಯಿಂದ 4 ‘ವಂದೇ ಭಾರತ’ ರೈಲುಗಳಿಗೆ ಹಸಿರು ನಿಶಾನೆ

ವಾರಾಣಸಿ – ಶತಮಾನಗಳಿಂದಲೂ ಭಾರತದಲ್ಲಿನ ತೀರ್ಥಯಾತ್ರೆಯನ್ನು ರಾಷ್ಟ್ರದ ಚೇತನದ ಸಾಧನವೆಂದು ಪರಿಗಣಿಸಲಾಗಿದೆ. ಈ ತೀರ್ಥಯಾತ್ರೆಗಳು ಕೇವಲ ದಿವ್ಯ ದೃಷ್ಟಿಯ ಮಾರ್ಗವಲ್ಲ, ಬದಲಿಗೆ ಭಾರತದ ಆತ್ಮವನ್ನು ಜೋಡಿಸುವ ಒಂದು ಪವಿತ್ರ ಪರಂಪರೆಯಾಗಿದೆ. ಪ್ರಯಾಗರಾಜ, ಅಯೋಧ್ಯೆ, ಹರಿದ್ವಾರ, ಚಿತ್ರಕೂಟ, ಕುರುಕ್ಷೇತ್ರ, ಮುಂತಾದ ಅಸಂಖ್ಯಾತ ತೀರ್ಥಕ್ಷೇತ್ರಗಳು ಆಧ್ಯಾತ್ಮಿಕತೆಯ ಕೇಂದ್ರಗಳಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘರಿಸಿದರು. ವಾರಾಣಸಿಯಿಂದ 4 ‘ವಂದೇ ಭಾರತ’ ವೇಗದ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಮಾತನಾಡುತ್ತಿದ್ದರು. ಪ್ರಧಾನ ಮಂತ್ರಿಗಳು ತಮ್ಮ ಮಾತು ಮುಂದುವರಿಸಿ, ಇಂದು ಈ ಪವಿತ್ರ ಸ್ಥಳಗಳು ‘ವಂದೇ ಭಾರತ’ ಮೂಲಕ ಜೋಡಣೆಗೊಳ್ಳುತ್ತಿರುವುದರಿಂದ, ಇದು ಭಾರತದ ಸಂಸ್ಕೃತಿ, ಶ್ರದ್ಧೆ ಮತ್ತು ಅಭಿವೃದ್ಧಿಯನ್ನು ಬೆಸೆಯುತ್ತಿದೆ. ಭಾರತದ ಪರಂಪರೆಯ ನಗರಗಳನ್ನು ದೇಶದ ಅಭಿವೃದ್ಧಿಯ ಸಂಕೇತಗಳನ್ನಾಗಿ ಮಾಡುವ ದಿಕ್ಕಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

1. ಪ್ರಧಾನ ಮಂತ್ರಿಗಳು ತಮ್ಮ ಮಾತನ್ನು ಮುಂದುವರಿಸಿ, ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಅತಿದೊಡ್ಡ ಕಾರಣವೆಂದರೆ ಅವುಗಳ ಮೂಲಭೂತ ಸೌಕರ್ಯ. ಯಾವ ಸ್ಥಳಗಳಿಗೆ ರೈಲುಗಳು ತಲುಪುವುದಿಲ್ಲವೋ, ಅಲ್ಲಿ ರೈಲು ಮಾರ್ಗಗಳನ್ನು ನಿರ್ಮಿಸಿ, ರೈಲುಗಳು ಓಡಲು ಪ್ರಾರಂಭಿಸಿದ ತಕ್ಷಣ, ಆ ಪ್ರದೇಶದ ಅಭಿವೃದ್ಧಿಯು ಪ್ರಾರಂಭವಾಗುತ್ತದೆ.

2. ವಂದೇ ಭಾರತ, ನಮೋ ಭಾರತ ಮತ್ತು ಅಮೃತ ಭಾರತನಂತಹ ರೈಲುಗಳು ಭಾರತೀಯ ರೈಲ್ವೆಯ ಮುಂದಿನ ಪೀಳಿಗೆಗೆ ಅಡಿಪಾಯ ಹಾಕುತ್ತಿವೆ. ಭಾರತೀಯ ರೈಲ್ವೆಯನ್ನು ಪರಿವರ್ತಿಸಲು ಇದೊಂದು ದೊಡ್ಡ ಅಭಿಯಾನವಾಗಿದೆ.

3. ಈಗ ವಿದೇಶಿ ಪ್ರಯಾಣಿಕರು ಸಹ ‘ವಂದೇ ಭಾರತ’ ರೈಲನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ‘ವಂದೇ ಭಾರತ’ ಎಂದರೆ ಭಾರತೀಯರ, ಭಾರತೀಯರಿಂದ, ಭಾರತೀಯರಿಗಾಗಿ ತಯಾರಿಸಲ್ಪಟ್ಟ ರೈಲು ಆಗಿದೆ. ನಾವು ಇದನ್ನು ಮೊದಲು ಮಾಡಲು ಸಾಧ್ಯವಿತ್ತೇ? ಇದೆಲ್ಲವೂ ವಿದೇಶಗಳಲ್ಲಿ ಆಗುತ್ತಿತ್ತು. ಈಗ ನಾವು ಅದನ್ನು ಮಾಡುತ್ತಿದ್ದೇವೆ. ಈ ರೈಲುಗಳು ಭಾರತದಲ್ಲಿಯೇ ತಯಾರಾಗುತ್ತಿವೆ.

4. ಪ್ರಧಾನ ಮಂತ್ರಿಗಳು ಉದ್ಘಾಟಿಸಿದ ರೈಲುಗಳು ವಾರಾಣಸಿ ಮತ್ತು ಖಜುರಾಹೊ, ಫಿರೋಜಪುರ ಮತ್ತು ದೆಹಲಿ, ಎರ್ನಾಕುಲಂ ಮತ್ತು ಬೆಂಗಳೂರು ಮತ್ತು ಲಖನೌ ಮತ್ತು ಸಹರಾನಪುರ ನಡುವಿನ ರೈಲು ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಹೇಳಿದರು.