‘ಆಪರೇಷನ್ ಸಿಂದೂರ್’ ಭಾರತದ ಬಹು-ಕ್ಷೇತ್ರ ನಿಖರ ಯುದ್ಧದ ಪುರಾವೆ! – ಕರ್ನಲ್ ಸೋಫಿಯಾ

ನವದೆಹಲಿ – ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರು, ‘ಆಪರೇಷನ್ ಸಿಂದೂರ್’ ದೇಶದ ಯುದ್ಧತಂತ್ರದಲ್ಲಿ ದೊಡ್ಡ ಬದಲಾವಣೆ ತಂದಿದೆ. ಈ ಕಾರ್ಯಾಚರಣೆಯು ಭಾರತದ ಬಹು-ಕ್ಷೇತ್ರ ನಿಖರ ಯುದ್ಧದ ಪುರಾವೆಯಾಗಿದೆ ಎಂದು ಹೇಳಿದರು. ಈ ಅವಧಿಯಲ್ಲಿ ಪಾಕಿಸ್ತಾನವು ಮಾಹಿತಿ ಯುದ್ಧವನ್ನೂ ಮಾಡಿತು; ಆದ್ದರಿಂದ ಯುವಕರು ತಮ್ಮ ‘ಡಿಜಿಟಲ್’ ಸಾಕ್ಷರತೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ನಕಲಿ (ಸುಳ್ಳು) ಸುದ್ದಿಗಳಿಂದ ಜಾಗರೂಕರಾಗಿರುವುದು ಅಗತ್ಯವಿದೆ. ಮಾಣೇಕ್‌ಶಾ ಸೆಂಟರ್‌ನಲ್ಲಿ ಆಯೋಜಿಸಲಾದ ‘ಚಾಣಕ್ಯ ಡಿಫೆನ್ಸ್ ಡೈಲಾಗ್: ಯಂಗ್ ಲೀಡರ್ಸ್ ಫೋರಂ’ ನಲ್ಲಿ ಕರ್ನಲ್ ಖುರೇಷಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರು ‘ಭಾರತದ ಯುದ್ಧತಂತ್ರದಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡಿದರು.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಭಾಗವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ 9 ನೆಲೆಗಳನ್ನು ಧ್ವಂಸಗೊಳಿಸಿತು.

ಉಪಸ್ಥಿತ ಯುವಕರಿಗೆ ಮಾರ್ಗದರ್ಶನ ನೀಡುತ್ತಾ ಕರ್ನಲ್ ಖುರೇಷಿ ಅವರು,

1. ಸೇನಾ ಮುಖ್ಯಸ್ಥರ ನಾಯಕತ್ವದಲ್ಲಿ ಭಾರತೀಯ ಸೇನೆಯು ಈಗ ಯುವಕರಿಗೆ ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ‘ಸೈಬರ್ ಟೆಕ್ನಾಲಜಿ’ಯಂತಹ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತಿದೆ. ಇದಕ್ಕಾಗಿ ‘ಐಐಟಿ’ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ. – ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್)’ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ.

2. ನೀವು ಭಾರತದ ಯುವ ಶಕ್ತಿಯಾಗಿದ್ದೀರಿ. ಕೇವಲ ಗುಂಡಿನ ದಾಳಿಯಲ್ಲಿ ಮಾತ್ರವಲ್ಲ, ‘ಫೈರ್‌ವಾಲ್’ ನಲ್ಲಿಯೂ ತರಬೇತಿ ಪಡೆದಿದ್ದೀರಿ. ಈಗ ಯುದ್ಧಗಳು ಕೇವಲ ಬಂಕರ್‌ಗಳು ಅಥವಾ ಗುಂಡುಗಳಿಂದ ನಡೆಯುವುದಿಲ್ಲ, ಬದಲಾಗಿ ‘ಬೈಟ್ಸ್’ (ಸಣ್ಣ ಸಂದರ್ಶನಗಳು/ಪ್ರತಿಕ್ರಿಯೆಗಳು) ಮತ್ತು ‘ಬ್ಯಾಂಡ್‌ವಿಡ್ತ್’ (ಮಾಹಿತಿ ಸಾಗಿಸುವ ಸಾಮರ್ಥ್ಯ) ಮೂಲಕ ಹೋರಾಡಲಾಗುತ್ತದೆ.

3. ಭಾರತದ ಜನಸಂಖ್ಯೆಯ ಶೇಕಡಾ 65 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇದು ದೇಶದ ಕಾರ್ಯತಂತ್ರದ ಮೀಸಲು ಪ್ರತಿನಿಧಿಸುತ್ತದೆ. ಯುವ ಶಕ್ತಿ, ನಾವೀನ್ಯತೆ ಮತ್ತು ಜವಾಬ್ದಾರಿಯು ದೇಶದ ಭದ್ರತೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಜಗತ್ತಿನಾದ್ಯಂತ ಸುಮಾರು 53 ಸಂಘರ್ಷಗಳು ನಡೆಯುತ್ತಿವೆ. ಈ ಸಂಘರ್ಷಗಳನ್ನು ತಂತ್ರಜ್ಞಾನದ ಮೂಲಕ ಅಂದರೆ ‘ಡ್ರೋನ್’ ಬಳಕೆ, ಸೈಬರ್, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಯುದ್ಧಗಳ ಮೂಲಕ ಯುವಜನರು ಹೋರಾಡುತ್ತಿದ್ದಾರೆ.

4. ಭಾರತದ ಭವಿಷ್ಯ ನಿಮ್ಮ ಕೈಯಲ್ಲಿದೆ. ನೀವು ಸೈನಿಕರಾಗಿರಲಿ, ಶಿಕ್ಷಕರಾಗಿರಲಿ, ‘ಕೋಡರ್’ (ಕಂಪ್ಯೂಟರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ವ್ಯಕ್ತಿ) ಆಗಿರಲಿ ಅಥವಾ ‘ಡಿಸೈನರ್’ ಆಗಿರಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ದೊರೆಯುತ್ತದೆ.