ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ, ಇಲ್ಲದಿದ್ದರೆ ಪರಿಣಾಮಗಳು ವಿನಾಶಕಾರಿಯಾಗುತ್ತವೆ!

ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಕಾಬೂಲ್ (ಅಫ್ಘಾನಿಸ್ತಾನ) – ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ, ಇಲ್ಲದಿದ್ದರೆ ಪರಿಣಾಮಗಳು ವಿನಾಶಕಾರಿಯಾಗುತ್ತವೆ, ಎಂದು ಅಫ್ಘಾನಿಸ್ತಾನದ ಗೃಹ ಸಚಿವ ಮತ್ತು ತಾಲಿಬಾನ್ ನಾಯಕ ಖಲೀಫಾ ಸಿರಾಜುದ್ದೀನ್ ಹಕ್ಕಾನಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಮ್ ಮುನೀರ್ ಅವರು ಖೈಬರ್ ಪಖ್ತುನ್ಖ್ವಾದಲ್ಲಿ ಬುಡಕಟ್ಟು ಜನಾಂಗದ ಸಭೆಯಲ್ಲಿ, ಅಫ್ಘಾನ್-ತಾಲಿಬಾನ್ ಹಾಗೂ ಭಾರತ, ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿವೆ ಎಂದು ಮುನೀರ್ ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಹಕ್ಕಾನಿ ಅವರು ಮೇಲಿನ ಎಚ್ಚರಿಕೆ ನೀಡಿದ್ದಾರೆ.

ಮುನೀರ್ ಅವರು ಮುಂದೆ ಮಾತನಾಡಿ, ಕಾಬೂಲ್‌ನೊಂದಿಗೆ ಸಂಬಂಧ ಸುಧಾರಿಸಲು ಪಾಕಿಸ್ತಾನವು ಪದೇ ಪದೇ ಪ್ರಯತ್ನಿಸಿದರೂ ಸಹ, ಅಫ್ಘಾನಿಸ್ತಾನದ ಭೂಮಿಯು ‘ಫಿತ್ನಾ ಅಲ್-ಖವಾರೀಜ್’ (ಖಾರಿಜಿ ಪಂಥದ ಬಂಡಾಯ) ಮತ್ತು ‘ಫಿತ್ನಾ ಅಲ್-ಹಿಂದೂಸ್ತಾನ್’ (ಭಾರತಕ್ಕೆ ಸಂಬಂಧಿಸಿದ ದೊಡ್ಡ ಸಂಘರ್ಷ, ಯುದ್ಧ ಅಥವಾ ಧಾರ್ಮಿಕ ದಂಗೆ) ನಡೆಸುವ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯತಾಣವಾಗಿದೆ, ಎಂದು ಹೇಳಿದ್ದರು.

ಖಲೀಫಾ ಸಿರಾಜುದ್ದೀನ್ ಅವರು ಮಾತನಾಡಿ,

1. ಅಫ್ಘಾನಿಸ್ತಾನವು ದೂರಗಾಮಿ ಕ್ಷಿಪಣಿಗಳು ಅಥವಾ ದೊಡ್ಡ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲದಿದ್ದರೂ, ಸಹ, ಆಕ್ರಮಣವಾದರೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ. ನಮ್ಮ ಭೂಪ್ರದೇಶವನ್ನು ರಕ್ಷಿಸುವುದು ನಮ್ಮ ಆದ್ಯತೆಗಳಲ್ಲಿ ಒಂದಾಗಿದೆ. ಇಷ್ಟೆಲ್ಲಾ ಇದ್ದರೂ, ಪರಸ್ಪರ ತಿಳುವಳಿಕೆಯ ಮಾರ್ಗವು ಮುಕ್ತವಾಗಿದೆ; ಆದರೆ ಯಾರಾದರೂ ಆಕ್ರಮಣ ಮಾಡಿದರೆ, ನಾವು ಜಗತ್ತಿನ ನಾಯಕರೊಂದಿಗೆ ಹೋರಾಡಿದ್ದೇವೆ ಮತ್ತು ನಮ್ಮ ಭೂಪ್ರದೇಶವನ್ನು ರಕ್ಷಿಸುವುದು ನಮಗೆ ಕಷ್ಟಕರ ಕೆಲಸವಲ್ಲ.

2. ಕತಾರ್ ಮತ್ತು ಟರ್ಕಿಯಲ್ಲಿ ಪಾಕಿಸ್ತಾನದೊಂದಿಗೆ ನಡೆದ ಇತ್ತೀಚಿನ ಸಭೆಗಳಲ್ಲಿ, ಪಾಕಿಸ್ತಾನದ ಆಂತರಿಕ ಸಮಸ್ಯೆಗಳನ್ನು ಅಫ್ಘಾನಿಸ್ತಾನದೊಂದಿಗೆ ಜೋಡಿಸಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಸಮಸ್ಯೆ ನಿಮ್ಮದು. ಪರಿಹಾರ ನಿಮ್ಮ ಬಳಿ ಇದೆ; ಹಾಗಾದರೆ ನೀವು ಆ ಸಮಸ್ಯೆಗಳನ್ನು ನಮ್ಮೊಂದಿಗೆ ಏಕೆ ಜೋಡಿಸುತ್ತಿದ್ದೀರಿ? ‘ಅಫ್ಘಾನ್ ಜನರು ಯುದ್ಧಭೂಮಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ನಮ್ಮ ತಾಳ್ಮೆಯನ್ನು ಮತ್ತೆ ಪರೀಕ್ಷಿಸಿದರೆ, ಅದರ ಪರಿಣಾಮಗಳು ವಿನಾಶಕಾರಿಯಾಗುತ್ತವೆ’, ಎಂದು ಅವರು ಎಚ್ಚರಿಕೆ ನೀಡಿದರು.

ಸಂಪಾದಕೀಯ ನಿಲುವು

  • ಕಳೆದ ೩೫ ವರ್ಷಗಳಿಂದ ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಮಾಡುತ್ತಿದೆ; ಆದರೆ ಭಾರತವು ಒಮ್ಮೆಯಾದರೂ ಇಂತಹ ಹೇಳಿಕೆಯನ್ನು ನೀಡಿತ್ತೇ? ಅಫ್ಘಾನಿಸ್ತಾನವು ಯಾವ ರೀತಿಯಲ್ಲಿ ಸೇನಾ ಪ್ರತಿಕ್ರಿಯೆ ನೀಡುತ್ತಿದೆಯೋ, ಆ ರೀತಿ ಭಾರತ ಪ್ರತಿಕ್ರಿಯಿಸಿತ್ತೇ?
  • ಒಂದು ಮುಸ್ಲಿಂ ರಾಷ್ಟ್ರ ಇನ್ನೊಂದು ಮುಸ್ಲಿಂ ರಾಷ್ಟ್ರದೊಂದಿಗೆ ಈ ರೀತಿ ಯುದ್ಧ ಮಾಡುವ ಸಿದ್ಧತೆ ತೋರಿಸಬಹುದಾದರೆ, ಧರ್ಮದ ಆಧಾರದ ಮೇಲೆ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಪಾಕಿಸ್ತಾನದ ವಿರುದ್ಧ ಭಾರತ ಏಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ?
  • ಕೇವಲ ಪರಮಾಣು ಶಸ್ತ್ರಾಸ್ತ್ರಗಳು ಇದ್ದರೆ ಸಾಲದು, ಧೈರ್ಯ ಮತ್ತು ಸಾಹಸವಿರುವ ನಾಯಕರು ಸಹ ಇರಬೇಕು, ಎಂಬುದನ್ನು ಅಫ್ಘಾನಿಸ್ತಾನದಿಂದ ನಾವು ಕಲಿಯಬೇಕು!