ಆರೋಪಿಗಳಿಗೆ ಜಾಮೀನು ದೊರೆತಿರುವುದು ಸಮಸ್ತ ಹಿಂದೂತ್ವನಿಷ್ಠರಿಗೆ ದೀಪಾವಳಿಯ ಸಂತೋಷದ ಸುದ್ದಿಯೇ ಆಗಿದೆ! – ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

ಕೋಲ್ಹಾಪುರದಲ್ಲಿ ನಡೆದ ಕಾಮ್ರೇಡ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಯಾವುದೇ ಬಲವಾದ ಪುರಾವೆ ಇಲ್ಲದಿದ್ದರೂ ಮತ್ತು ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿದ್ದರೂ ನಿರಪರಾಧಿ ಹಿಂದೂತ್ವನಿಷ್ಠರನ್ನು ಬಂಧಿಸಿ ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಈ ಪ್ರಕರಣ ನಡೆದು ೧೦ ವರ್ಷಗಳಾದರೂ, ಕೋಲ್ಹಾಪುರದ ಪ್ರಗತಿಪರ ಗುಂಪುಗಳಿಂದ ಒತ್ತಡ ಹೇರಿ ಪ್ರಕರಣವನ್ನು ವಿಳಂಬಗೊಳಿಸುವ ಮತ್ತು ಈ ಯುವಕರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡುವ ಷಡ್ಯಂತ್ರ ನಡೆಯುತ್ತಿತ್ತು; ಆದರೆ ಮುಂಬಯಿ ಉಚ್ಚ ನ್ಯಾಯಾಲಯದ ಕೋಲ್ಹಾಪುರದ ‘ಸರ್ಕ್ಯೂಟ್ ಬೆಂಚ್’ ಇಂದು ಈ ಪ್ರಕರಣದ ಕೊನೆಯ ೩ ಶಂಕಿತರಿಗೆ ಜಾಮೀನು ಮಂಜೂರು ಮಾಡಿದೆ. ಇದರಿಂದ ಅವರ ಷಡ್ಯಂತ್ರ ವಿಫಲವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಈ ಪತ್ರಿಕಾ ಪ್ರಕಟಣೆಯಲ್ಲಿ ಶ್ರೀ. ರಮೇಶ ಶಿಂದೆ ಅವರು, ಈ ಶಂಕಿತರಲ್ಲಿ ಈ ಹಿಂದೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ನಿರ್ವಹಿಸುತ್ತಿದ್ದ ಮತ್ತು ಕಿವಿ-ಮೂಗು-ಗಂಟಲು ತಜ್ಞರಾದ ಡಾ. ವೀರೇಂದ್ರಸಿಂಹ ತಾವಡೆ ಅವರೂ ಸೇರಿದ್ದಾರೆ. ಅವರೊಂದಿಗೆ ಶ್ರೀ. ಅಮೋಲ ಕಾಳೆ ಮತ್ತು ಶರದ್ ಕಳಸ್ಕರ್ ಎಂಬ ಹಿಂದೂತ್ವನಿಷ್ಠರಿಗೂ ಜಾಮೀನು ಮಂಜೂರಾಗಿದೆ. ‘ಜಾಮೀನು ಒಂದು ನಿಯಮ; ಜೈಲಿನಲ್ಲಿ ಒಂದು ಅಪವಾದ’ ಎಂಬಂತಹ ವಾಕ್ಯವನ್ನು ನ್ಯಾಯಾಧೀಶರು ಅನೇಕ ತೀರ್ಪುಗಳಲ್ಲಿ ಬಳಸಿದ್ದಾರೆ; ಆದರೆ ಈ ಮೊಕದ್ದಮೆಯಲ್ಲಿ ಪುರಾವೆ ಇಲ್ಲದಿದ್ದರೂ, ಈ ಹಿಂದೂತ್ವನಿಷ್ಠರನ್ನು ಮಾತ್ರ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಯಿತು. ಇದರ ವಿರುದ್ಧ ಹೋರಾಡಿದ ಅನೇಕ ಗಣ್ಯ ನ್ಯಾಯವಾದಿಗಳು ದಣಿವರಿಯದ ಪ್ರಯತ್ನ ಮಾಡಿ, ಅವರ ಸರಿಯಾದ ಪಕ್ಷವನ್ನು ಮಂಡಿಸಿ, ಅವರ ಮೇಲಾದ ಅನ್ಯಾಯವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆ ಎಲ್ಲಾ ನ್ಯಾಯವಾದಿಗಳಿಗೂ ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ದೀಪಾವಳಿಯ ಹಬ್ಬದ ಮೊದಲು ಬಂದ ಈ ಸುದ್ದಿ ಸಮಸ್ತ ಹಿಂದೂತ್ವನಿಷ್ಠರಿಗೇ ಸಂತೋಷದ ಸುದ್ದಿಯಾಗಿದೆ, ಎಂದು ಹೇಳಿದರು.