ರಾಹುಲ್ ಗಾಂಧಿ ವಿರುದ್ಧ ವಾರಾಣಸಿ ನ್ಯಾಯಾಲಯದಲ್ಲಿ ದೂರು ದಾಖಲು

ಸಿಖ್ಖರ ವಿರುದ್ಧ ಹೇಳಿಕೆ ನೀಡಿದ ಪ್ರಕರಣ

ಪ್ರಯಾಗರಾಜ (ಉತ್ತರ ಪ್ರದೇಶ) – ಸಿಖ್ಖರ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಕಾಂಗ್ರೆಸ್ ಸಂಸದರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಲಹಾಬಾದ್ ಉಚ್ಚ ನ್ಯಾಯಾಲಯವು ಇದಕ್ಕೆ ಅನುಮತಿ ನೀಡಿದೆ. ಈ ಪ್ರಕರಣದ ವಿಚಾರಣೆಯು ವಾರಾಣಸಿ ನ್ಯಾಯಾಲಯದಲ್ಲಿ ನಡೆಯಲಿದೆ.

ರಾಹುಲ್ ಗಾಂಧಿ ಅವರ ಸಿಖ್-ವಿರೋಧಿ ಹೇಳಿಕೆಯ ವಿರುದ್ಧ ನಾಗೇಶ್ವರ ಮಿಶ್ರಾ ಅವರು ವಾರಾಣಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊದಲು ಅರ್ಜಿಯನ್ನು ಸಲ್ಲಿಸಿದ್ದರು; ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ನಂತರ, ಅವರು ಸಂಸದ/ಶಾಸಕ ವಿಶೇಷ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಿದರು, ಅದನ್ನು ನ್ಯಾಯಾಲಯವು ಜುಲೈ 21, 2025 ರಂದು ಅಂಗೀಕರಿಸಿತು. ಈ ಅರ್ಜಿಯನ್ನು ರಾಹುಲ್ ಗಾಂಧಿ ಅವರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ, ನ್ಯಾಯಾಲಯವು ಅದನ್ನು ತಿರಸ್ಕರಿಸಿ ಖಟ್ಲೆ ದಾಖಲಿಸಲು ಅನುಮತಿ ನೀಡಿದೆ.

ರಾಹುಲ್ ಗಾಂಧಿ ಹೇಳಿದ್ದೇನು?

ಸೆಪ್ಟೆಂಬರ್ 10, 2024 ರಂದು ಅಮೆರಿಕಾದಲ್ಲಿ ರಾಹುಲ್ ಗಾಂಧಿ ಅವರು, ಭಾರತದಲ್ಲಿನ ಸಿಖ್ ಸಮುದಾಯಕ್ಕೆ ಪೇಟ ಮತ್ತು ಕಡಾ ಧರಿಸಲು ಅವಕಾಶ ಸಿಗುವುದೇ ಎಂಬ ಬಗ್ಗೆ ಚಿಂತೆ ಕಾಡುತ್ತಿದೆ. ಅವರು ಗುರುದ್ವಾರಗಳಿಗೆ ಭೇಟಿ ನೀಡಲು ಸಾಧ್ಯವಾಗುವುದೇ? ಈ ರೀತಿಯ ಚಿಂತೆ ಕೇವಲ ಸಿಖ್ಖರಿಗಷ್ಟೇ ಅಲ್ಲ ಅನ್ಯ ಧರ್ಮದವರಿಗೂ ಕಾಡುತ್ತಿದೆ ಎಂದು ಹೇಳಿದ್ದರು.