ಪ್ರಮೋದ ಮುತಾಲಿಕ ಅವರಿಗೆ ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುತ್ತಾರೆಂದು ಮದ್ದೂರಿಗೆ ಹೋಗುವುದನ್ನು ನಿಷೇಧ ಹೇರಲಾಯಿತು!

  • ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ಸಮಯದಲ್ಲಿ ಮಸೀದಿಯಿಂದ ಕಲ್ಲು ತೂರಿದ ಪ್ರಕರಣ !

  • ‘ಮುತಾಲಿಕ ಅವರು ಸಾಮಾಜಿಕ ಸಾಮರಸ್ಯವನ್ನು ಕದಡುವ ಪ್ರವೃತ್ತಿಯುಳ್ಳವರಾಗಿದ್ದಾರೆ’ ಎಂದು ಪೊಲೀಸರ ಆದೇಶದಲ್ಲಿ ಉಲ್ಲೇಖ

ಮಂಡ್ಯ – ಜಿಲ್ಲೆಯ ಮದ್ದೂರಿನಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಯನ್ನು ತೀವ್ರವಾಗಿ ಖಂಡಿಸಲು ಮತ್ತು ಹಿಂದೂಗಳಿಗೆ ಧೈರ್ಯ ತುಂಬಲು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಅವರು ಅಲ್ಲಿಗೆ ಹೋಗಲು ನಿರ್ಧರಿಸಿದ್ದರು. ಆದರೆ, ‘ಹಿಂದೂ ವಿರೋಧಿ ರಾಜ್ಯ ಸರಕಾರವು ನನ್ನನ್ನು ಮದ್ದೂರಿಗೆ ಪ್ರವೇಶಿಸದಂತೆ ತಡೆಯುವ ಆದೇಶವನ್ನು ಹೊರಡಿಸಿದೆ’ ಎಂದು ಮುತಾಲಿಕ ಅವರು ’ಎಕ್ಸ್’ ಮೂಲಕ ತಿಳಿಸಿದ್ದಾರೆ. ಇದರ ಜೊತೆಗೆ, ಅವರು ಪೊಲೀಸರ ೩ ಪುಟಗಳ ಆದೇಶವನ್ನೂ ಲಗತ್ತಿಸಿದ್ದಾರೆ.

ಈ ಆದೇಶದಲ್ಲಿರುವ ಪ್ರಮುಖ ಅಂಶಗಳು ಹೀಗಿವೆ!

೧. ಪ್ರಸ್ತುತ ಮದ್ದೂರು ಪಟ್ಟಣವು ಶಾಂತಿಯುತವಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ. ಶ್ರೀ ರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ ಮುತಾಲಿಕ್ ರವರು ಸಪ್ಟೆಂಬರ್ ೧೯ ರಂದು ಅಲ್ಲಿಗೆ ಭೇಟಿ ಮಾಡುವುದಾಗಿ ತಿಳಿದುಬಂದಿರುತ್ತದೆ.

೨. ಮುತಾಲಿಕ್ ರವರು ಹಿಂದೂ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದು ಪ್ರಚೋದನಕಾರಿ ಮತ್ತು ಕೋಮುವೈಷಮ್ಯ ಸೃಷ್ಟಿಸುವ ಭಾಷಣ ಮಾಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ.

೩. ಅವರ ವಿರುದ್ಧ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು ೩೦ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುತ್ತವೆ. (ಆದೇಶದ ಪ್ರತಿಯಲ್ಲಿ ಪ್ರಕರಣ ಸಂಖ್ಯೆ, ಜಿಲ್ಲಾ ಪೊಲೀಸ ಠಾಣೆ ಮುಂತಾದ ಮಾಹಿತಿಯೊಂದಿಗೆ ಪ್ರಕರಣಗಳ ಸಂಪೂರ್ಣ ಪಟ್ಟಿಯನ್ನೇ ನೀಡಲಾಗಿದೆ.)

೪. ಇದರಿಂದ, ಇವರು ಸಾಮಾಜಿಕ ಸಾಮರಸ್ಯವನ್ನು ಕದಡುವ ಪ್ರವೃತ್ತಿಯುಳ್ಳವರಾಗಿದ್ದಾರೆ ಎ೦ಬುದು ತಿಳಿದು ಬರುತ್ತದೆ.

‘ಸನಾತನ ಪ್ರಭಾತ’ದ ಮುತಾಲಿಕ ಅವರೊಂದಿಗಿನ ಸಂಭಾಷಣೆ

ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ ಶ್ರೀ. ಮುತಾಲಿಕ

ಈ ಕುರಿತು ‘ಸನಾತನ ಪ್ರಭಾತ’ವು ಶ್ರೀ. ಮುತಾಲಿಕ ಅವರೊಂದಿಗೆ ಮಾತನಾಡಿದಾಗ, ‘ಮದ್ದೂರಿನಲ್ಲಿ ೫೦೦ ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ನಾವು ನ್ಯಾಯವಾದಿಗಳೊಂದಿಗೆ ಹೋಗಿ ಅವರಿಗೆ ಕಾನೂನು ನೆರವು ನೀಡಲು ನಿರ್ಧರಿಸಿದ್ದೆವು. ಅಲ್ಲಿ ಯಾವುದೇ ಆಂದೋಲನ, ಮೆರವಣಿಗೆ, ಸಭೆ ಏನನ್ನೂ ಆಯೋಜಿಸಿರಲಿಲ್ಲ. ಹೀಗಿದ್ದರೂ ಕಾಂಗ್ರೆಸ್ ಹಿಂದೂವಿರೋಧಿ ನೀತಿಯನ್ನು ಪುನಃ ಪುನಃ ತೋರಿಸುತ್ತಿದೆ. ನಾನು ಈ ನೀತಿಯನ್ನು ಖಂಡಿಸುತ್ತೇನೆ, ಎಂದರು.

ಶ್ರೀ. ಮುತಾಲಿಕ ಅವರಿಗೆ ಅವರ ವಿರುದ್ಧ ದಾಖಲಾದ ಪ್ರಕರಣಗಳ ಪಟ್ಟಿಯನ್ನು ಆದೇಶದಲ್ಲಿ ಉಲ್ಲೇಖಿಸಿದ ಬಗ್ಗೆ ಕೇಳಿದಾಗ, ‘ಆ ಸಂಪೂರ್ಣ ಪಟ್ಟಿಯೇ ಸುಳ್ಳಾಗಿದೆ. ಆ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಲಯವು ನನ್ನನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಿದೆ. ಆದ್ದರಿಂದ, ಇಂತಹ ಆದೇಶ ಹೊರಡಿಸಿ ಮೋಸ ಮಾಡಲಾಗುತ್ತಿದೆ’ ಎಂದು ಹೇಳಿದರು.
ಅವರು ಮಾತು ಮುಂದುವರಿಸುತ್ತಾ, ನಾನು ಸತ್ಯ ಮಾತನಾಡಿದರೆ ಅದು ಹೇಗೆ ಪ್ರಚೋದನಕಾರಿ ಆಗುತ್ತದೆ? ವಾಸ್ತವದಲ್ಲಿ, ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರುವುದು, ಪೆಟ್ರೋಲ್ ಬಾಂಬ್ ಎಸೆಯುವುದು, ಮಸೀದಿಯಿಂದ ಗಲಭೆ ಸೃಷ್ಟಿಸುವುದು ಇವೆಲ್ಲವೂ ಪ್ರಚೋದನಕಾರಿ ಕೃತ್ಯಗಳಾಗಿವೆ. ಕ್ರಿಯೆಗೆ ಪ್ರತಿಕ್ರಿಯೆ ಕೊಡಲೇಬೇಕು, ಎಂದು ಹೇಳಿದರು.

ನಮ್ಮ ಸ್ವಾತಂತ್ರ್ಯದ ಹರಣ ! – ಮುತಾಲಿಕ

ನಮ್ಮನ್ನು ತಡೆಯುವ ಬದಲು, ಕಲ್ಲು ತೂರುವವರನ್ನು, ಪ್ಯಾಲೆಸ್ಟೈನ್ ಧ್ವಜ ಹಿಡಿದು ತಿರುಗುವವರನ್ನು ಮತ್ತು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳುವವರನ್ನು ತಡೆಯಬೇಕು. ಇದನ್ನು ಬಿಟ್ಟು ಶಾಂತಿಪ್ರಿಯ ಜನರಿಗೆ ಧೈರ್ಯ ತುಂಬಲು ಹೋಗುವ ನಮ್ಮಂತಹ ಶ್ರೀರಾಮ ಸೇನೆಯನ್ನು ತಡೆಯುವುದು ಸ್ವಾತಂತ್ರ್ಯದ ಹರಣವೇ ಆಗಿದೆ. ಇದು ಡಾ. ಅಂಬೇಡ್ಕರ ಅವರಿಗೆ ಮಾಡಿದ ಅಪಮಾನವಾಗಿದೆ. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಶ್ರೀ. ಪ್ರಮೋದ ಮುತಾಲಿಕ ಅವರು ‘ಸನಾತನ ಪ್ರಭಾತ’ಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದುತ್ವನಿಷ್ಠ ನಾಯಕರಿಗೆ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿಯೇ ಒಂದು ನಗರಕ್ಕೆ ಹೋಗದಂತೆ ತಡೆಯುವುದೆಂದರೆ, ಕರ್ನಾಟಕ ರಾಜ್ಯ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿ? ಅಥವಾ ಹೀಗೆ ಹೇಳಬೇಕೆ, ಕಾಂಗ್ರೆಸ್ ಆಡಳಿತವಿರುವ ಈ ಭಾರತದ ರಾಜ್ಯಗಳು ಇಸ್ಲಾಮಿಕ್ ಪಾಕಿಸ್ತಾನ ಅಥವಾ ಬಾಂಗ್ಲಾದೇಶದತ್ತ ಸಾಗುತ್ತಿವೆಯೇ?