“ಕರ್ನಾಟಕ ಒಂದು ಜಾತ್ಯತೀತ ರಾಜ್ಯ!” – ಕರ್ನಾಟಕ ಉಚ್ಚ ನ್ಯಾಯಾಲಯ : Banu Mushtaq Case

ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾ !

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯವು ಸೆಪ್ಟೆಂಬರ್ 15 ರಂದು ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲು ಬುಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖರೂ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು ಅರ್ಜಿದಾರರ ವಾದವನ್ನು ಆಲಿಸಿದ ನಂತರ, “ಇದು ಜಾತ್ಯತೀತ ರಾಜ್ಯ ಮತ್ತು ಇದು ಒಂದು ಸಾರ್ವಜನಿಕ ಕಾರ್ಯಕ್ರಮ. ಇದು ಯಾವುದೇ ಧಾರ್ಮಿಕ ವಿಧಿ ಅಲ್ಲ. ಒಬ್ಬ ವ್ಯಕ್ತಿ ಬಂದು ಧಾರ್ಮಿಕ ವಿಧಿಗಳನ್ನು ಪಾಲಿಸಲು ಸಿದ್ಧರಿದ್ದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯ ಸರಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಬೇರೆ ಧರ್ಮದ ವ್ಯಕ್ತಿಯನ್ನು ಭಾಗವಹಿಸಲು ಅವಕಾಶ ನೀಡುವುದು ಅರ್ಜಿದಾರರ ಯಾವುದೇ ಕಾನೂನು ಅಥವಾ ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ ಎಂದು ಅಥವಾ ಭಾರತದ ಸಂವಿಧಾನದ ಮೌಲ್ಯಗಳ ವಿರುದ್ಧವಾಗಿದೆ ಎಂದು ನಂಬಲು ನಾವು ಸಿದ್ಧರಿಲ್ಲ. ಆದ್ದರಿಂದ, ನಾವು ಅರ್ಜಿಯನ್ನು ವಜಾಗೊಳಿಸಿದ್ದೇವೆ” ಎಂದು ಹೇಳಿತು.

1. ಈ ವಿಷಯದಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಅದರಲ್ಲಿ ಒಂದು ಭಾಜಪ ಮಾಜಿ ಸಂಸದ ಪ್ರತಾಪ್ ಸಿಂಹ ಅವರದ್ದು. ಅವರು ಅರ್ಜಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಬಾನು ಮುಷ್ತಾಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮತ್ತು ದಸರಾ ಪ್ರಮುಖವಾಗಿ ಹಿಂದೂಗಳ ಹಬ್ಬವಾದ್ದರಿಂದ ಯಾವುದೇ ಹಿಂದೂಯೇತರರನ್ನು ಉದ್ಘಾಟನೆಗೆ ಆಹ್ವಾನಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದರು.

2. ಅರ್ಜಿದಾರರಲ್ಲಿ ಒಬ್ಬರಾದ ನ್ಯಾಯವಾದಿ ಎಸ್. ಸುದರ್ಶನ್ ಅವರು, ಹಿಂದೂ ಧರ್ಮ ಮತ್ತು ಚಾಮುಂಡಿ ದೇವಿಯಲ್ಲಿ ನಂಬಿಕೆಯಿರುವ ವ್ಯಕ್ತಿಯನ್ನು ಮಾತ್ರ ಆಹ್ವಾನಿಸಬೇಕು. ಆಗಮ ಶಾಸ್ತ್ರದ ಪ್ರಕಾರ, ಹಿಂದೂಯೇತರರು ಪೂಜೆ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದರು.

‘ಇದು ರಾಜ್ಯದ ಉತ್ಸವ!’ – ರಾಜ್ಯ ಸರಕಾರ

ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು, ಎಲ್ಲಾ ಧರ್ಮಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದು ರಾಜ್ಯದ ಉತ್ಸವವಾಗಿದ್ದು, ಅದನ್ನು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. 2017ರಲ್ಲಿ ಡಾ. ನಿಸಾರ್ ಅಹಮದ್ ಅವರನ್ನು ಆಹ್ವಾನಿಸಿದಾಗ, ಅರ್ಜಿದಾರರಾದ ಪ್ರತಾಪ್ ಸಿಂಹ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.