ಕರ್ಣಾವತಿ (ಗುಜರಾತ) ಇಲ್ಲಿನ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯಿಂದ 10ನೇ ತರಗತಿ ಹಿಂದೂ ವಿದ್ಯಾರ್ಥಿಯ ಹತ್ಯೆ : Gujarat School Murder

  • ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಮತ್ತು ಜನಸಮೂಹದಿಂದ ಶಾಲೆ ಧ್ವಂಸ

  • ಪ್ರಾಂಶುಪಾಲರು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ

  • ಪೊಲೀಸ್ ವಾಹನವೂ ಧ್ವಂಸ

ಕರ್ಣಾವತಿ (ಗುಜರಾತ) – ಇಲ್ಲಿನ ‘ಸೆವೆಂತ್ ಡೇ ಸ್ಕೂಲ್’ ನಲ್ಲಿ 10ನೇ ತರಗತಿಯ ನಯನ ಎಂಬ ಹಿಂದೂ ವಿದ್ಯಾರ್ಥಿಯನ್ನು 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಆಗಸ್ಟ್ 19 ರಂದು ನಡೆದಿದೆ. ಈ ಘಟನೆಯ ಬಗ್ಗೆ ತಿಳಿದ ಕೂಡಲೇ ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ನಾಗರಿಕರು ಸೇರಿ 2 ಸಾವಿರಕ್ಕೂ ಹೆಚ್ಚು ಜನರು ಶಾಲೆಯನ್ನು ಸುತ್ತುವರಿದರು. ಶಾಲೆಯನ್ನು ಧ್ವಂಸಗೊಳಿಸಿ, ಪ್ರಾಂಶುಪಾಲರು ಸೇರಿದಂತೆ ಶಾಲೆಯ ಎಲ್ಲ ಸಿಬ್ಬಂದಿಯನ್ನು ಥಳಿಸಿದ್ದಾರೆ. ಶಾಲಾ ಆವರಣದಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನೂ ಧ್ವಂಸಗೊಳಿಸಲಾಗಿದೆ. ಜನಸಮೂಹವು ಎಷ್ಟು ಆಕ್ರೋಶಗೊಂಡಿತ್ತೆಂದರೆ, ಅವರು ಪೊಲೀಸರ ಎದುರೇ ಸಿಬ್ಬಂದಿಗೆ ಥಳಿಸುತ್ತಲೇ ಇದ್ದರು. ಜನಸಮೂಹವು ಪೊಲೀಸ್ ವಾಹನವನ್ನೂ ಧ್ವಂಸಗೊಳಿಸಿದೆ. ನಂತರ ಜನಸಮೂಹವು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿತು.

ಘಟನೆಯ ಮಾಹಿತಿ ತಿಳಿದ ಕೂಡಲೇ ಮಣಿನಗರದ ಶಾಸಕರು, ಪೊಲೀಸ್ ಉಪಾಯುಕ್ತ ಬಲದೇವ ದೇಸಾಯಿ ಮತ್ತು ಸಹಾಯಕ ಪೊಲೀಸ್ ಆಯುಕ್ತರು ಶಾಲೆಗೆ ತಲುಪಿದರು. ಈ ಸಮಯದಲ್ಲಿ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶಾಲೆಯಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದರು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಸೌಮ್ಯ ಲಾಠಿ ಪ್ರಹಾರ ನಡೆಸಬೇಕಾಯಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಹಳೆಯ ದ್ವೇಷದಿಂದ ಹತ್ಯೆ

ಎರಡೂ ವಿದ್ಯಾರ್ಥಿಗಳ ನಡುವೆ ಹಳೆಯ ದ್ವೇಷವಿತ್ತು. ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ವಿವಾದವಾಗಿತ್ತು. ಇದರ ಸೇಡು ತೀರಿಸಿಕೊಳ್ಳಲು ಆರೋಪಿ ವಿದ್ಯಾರ್ಥಿಯು ಶಾಲೆಗೆ ಚಾಕು ತಂದನು ಮತ್ತು ಶಾಲೆ ಬಿಟ್ಟ ನಂತರ ನಯನ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ಅಪ್ರಾಪ್ತನಾಗಿರುವುದರಿಂದ ಕಾನೂನಿನ ಪ್ರಕಾರ ಅವನ ಹೆಸರು ಮತ್ತು ಧರ್ಮವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ.

ಸಂಪಾದಕೀಯ ನಿಲುವು

  • ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಚಾಕು ತಂದು ತನ್ನ ವಯಸ್ಸಿಗಿಂತ ದೊಡ್ಡ ವಿದ್ಯಾರ್ಥಿಯ ಕೊಲೆ ಮಾಡುತ್ತಾನೆ. ಈ ಮಗುವಿಗೆ ಇಂತಹ ಮಾನಸಿಕತೆ ಹೇಗೆ ಬಂತು ಎಂಬುದರ ಬಗ್ಗೆ ಚರ್ಚೆ ಆಗಬೇಕು.
  • ಯಾವುದೇ ವಿದ್ಯಾರ್ಥಿಗೆ ಹಿಂಸೆ ಮಾಡಲು ಹೇಳಿಕೊಡದೇ ಇರುವಾಗ, ಮಕ್ಕಳು ಹಿಂಸೆಯನ್ನು ಎಲ್ಲಿ ಕಲಿಯುತ್ತಾರೆ ಅಥವಾ ಅವರ ಮೇಲೆ ಈ ಸಂಸ್ಕಾರ ಹೇಗೆ ಉಂಟಾಗುತ್ತದೆ ಎಂದು ಸಮಾಜ ಮತ್ತು ಸರ್ಕಾರ ಈಗ ಯೋಚಿಸಬೇಕು.