ರಾಹುಲ ಗಾಂಧಿ 7 ದಿನಗಳಲ್ಲಿ ಸಾಕ್ಷಿಗಳನ್ನು ಹಾಜರುಪಡಿಸಿ, ಇಲ್ಲವಾದರೆ ಕ್ಷಮೆಯಾಚಿಸಿ! ECI Rahul Gandhi Affidavit

ರಾಹುಲ ಗಾಂಧಿ ಇವರ ಆರೋಪದ ಕುರಿತು ಮುಖ್ಯ ಚುನಾವಣಾ ಆಯುಕ್ತರ ಪ್ರತ್ಯುತ್ತರ

ನವದೆಹಲಿ – ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ಅವರು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಶೀಲನೆಯ ಕುರಿತು ಚುನಾವಣಾ ಆಯೋಗದ ಮೇಲೆ ಮತ ಕಳ್ಳತನದ ಆರೋಪ ಮಾಡಿದ್ದರು. ಗಾಂಧಿಯವರ ಆರೋಪಗಳಿಗೆ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ ಕುಮಾರ ಅವರು ಆಗಸ್ಟ್ 17ರಂದು ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದರು. ‘ರಾಹುಲ ಗಾಂಧಿ ಅವರ ಆರೋಪಗಳಿಗೆ ಸಾಕ್ಷಿಗಳಿದ್ದರೆ, ಅವರು 7 ದಿನಗಳೊಳಗೆ ಅಫಿಡವಿಟ್ ಸಲ್ಲಿಸಬೇಕು. ಇಲ್ಲದಿದ್ದರೆ, ಅವರು ಇಡೀ ದೇಶದ ಕ್ಷಮೆಯಾಚಿಸಬೇಕು’ ಎಂದು ಕರೆ ನೀಡಿದ್ದಾರೆ.

ಮತದಾರರ ಪಟ್ಟಿ ಶುದ್ಧೀಕರಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿ!

ಮತದಾರರ ಪಟ್ಟಿ ಶುದ್ಧೀಕರಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿ ಎಂದು ಜ್ಞಾನೇಶ ಕುಮಾರ ಹೇಳಿದರು. ಬಿಹಾರದಲ್ಲಿ ನಮ್ಮ ಮತದಾನ ಕೇಂದ್ರದ ಅಧಿಕಾರಿಗಳು (ಬೂತ್ ಲೆವೆಲ್ ಏಜೆಂಟ್ – ಬಿ.ಎಲ್.ಒ.) ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಬಹುಶಃ ಇದೇ ಕಾರಣದಿಂದಾಗಿ ಆಗಸ್ಟ್ 1ರ ನಂತರ ಯಾವುದೇ ರಾಜಕೀಯ ಪಕ್ಷವು ಆಕ್ಷೇಪಣೆ ಸಲ್ಲಿಸಿಲ್ಲ. ಬಿಹಾರದ ಮತದಾರರ ಪಟ್ಟಿ ಸಂಪೂರ್ಣವಾಗಿ ಸರಿಯಾಗಿದೆ ಎಂದು ಚುನಾವಣಾ ಆಯೋಗ ಭಾವಿಸುವುದಿಲ್ಲ. ಇದರಲ್ಲಿ ದೋಷಗಳಿರಬಹುದು, ಅವುಗಳನ್ನು ಸರಿಪಡಿಸಲಾಗುವುದು ಎಂದು ಆಯೋಗ ಹೇಳುತ್ತದೆ. ಇನ್ನೂ 15 ದಿನಗಳು ಬಾಕಿ ಇವೆ.

ಎಲ್ಲಾ ರಾಜಕೀಯ ಪಕ್ಷಗಳು ಜವಾಬ್ದಾರಿ ತೆಗೆದುಕೊಳ್ಳಬೇಕು!

ಜ್ಞಾನೇಶ ಕುಮಾರ ಅವರು ಮಾತು ಮುಂದುವರೆಸಿ, ‘ಸೆಪ್ಟೆಂಬರ್ 1ರ ನಂತರವೂ ಇದೇ ರೀತಿಯ ಆರೋಪಗಳು ಮುಂದುವರಿದರೆ, ಅದರ ಜವಾಬ್ದಾರಿ ಯಾರದು? ಎಲ್ಲಾ ಮಾನ್ಯತೆ ಪಡೆದ ಪಕ್ಷಗಳಿಗೆ ಇನ್ನೂ 15 ದಿನಗಳಿವೆ. ಸೆಪ್ಟೆಂಬರ್ 1ರ ಮೊದಲು ದೋಷಗಳನ್ನು ತೋರಿಸುವಂತೆ ನಾನು ಎಲ್ಲಾ ರಾಜಕೀಯ ಪಕ್ಷಗಳಿಗೆ ಕರೆ ನೀಡುತ್ತೇನೆ, ಚುನಾವಣಾ ಆಯೋಗ ಅವುಗಳನ್ನು ಸರಿಪಡಿಸಲು ಸಿದ್ಧವಾಗಿದೆ’ ಎಂದು ಹೇಳಿದರು.