‘ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ’ದ ಕುಲಪತಿಗಳ ಮನಬಂದಂತೆ ಆಡಳಿತದ ಬಗ್ಗೆ ರಾಜ್ಯಪಾಲರಿಗೆ ದೂರು!

ಹಣ ದುರುಪಯೋಗ, ಸ್ವಪಕ್ಷದವರ ನೇಮಕಾತಿ, ಕಾರ್ಯವಿಧಾನಗಳಿಗೆ ತಿಲಾಂಜಲಿ!

ಶ್ರೀ. ಪ್ರೀತಂ ನಾಚಣಕರ್, ಮುಂಬಯಿ

ಮುಂಬಯಿ, ಆಗಸ್ಟ್ 8 (ವಾರ್ತೆ) – ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಮತ್ತು ‘ಎ+’ ಶ್ರೇಣಿಯನ್ನು ಪಡೆದಿರುವ ನಾಗ್ಪುರದ ‘ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ’ದ ಕುಲಪತಿ ಪ್ರೊ. ಹರೇರಾಮ ತ್ರಿಪಾಠಿ ಅವರ ಗೊಂದಲಮಯ ಮತ್ತು ಸ್ವೇಚ್ಚೆಯ ಆಡಳಿತದ ಬಗ್ಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು ಕುಲಾಧಿಪತಿಗಳಾದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರಿಗೆ ದೂರು ನೀಡಿದ್ದಾರೆ. ವಿಶ್ವವಿದ್ಯಾಲಯದ ಹಣದ ದುರುಪಯೋಗ, ಅನಗತ್ಯ ಖರ್ಚು, ಮತ್ತು ತಪ್ಪಾದ ರೀತಿಯಲ್ಲಿ ತಮ್ಮ ಸ್ವಂತ ಜನರನ್ನು ವಿಶ್ವವಿದ್ಯಾಲಯಕ್ಕೆ ನೇಮಕ ಮಾಡಿರುವಂತಹ ಗಂಭೀರ ಆರೋಪಗಳನ್ನು ಅವರ ಮೇಲೆ ಮಾಡಲಾಗಿದೆ. ಈ ಕುರಿತು ಜುಲೈ 21 ರಂದು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದ್ದು, ಈ ದೂರಿನ ಪ್ರತಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್ ಅವರಿಗೂ ಕಳುಹಿಸಲಾಗಿದೆ. ಕುಲಪತಿಗಳ ಮೇಲಿನ ಗಂಭೀರ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು, ಸಂಸ್ಕೃತ ವಿಶ್ವವಿದ್ಯಾಲಯದ ಘನತೆಯನ್ನು ಕಾಪಾಡಲು ರಾಜ್ಯಪಾಲರು ಮತ್ತು ರಾಜ್ಯ ಸರಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವಿಶ್ವವಿದ್ಯಾಲಯ ಅರಾಜಕತೆಯತ್ತ ಸಾಗುತ್ತಿದೆಯೇ?

ಕುಲಪತಿ ಪ್ರೊ. ಹರೇರಾಮ ತ್ರಿಪಾಠಿ ಅವರ ವರ್ತನೆ ವಿಶ್ವವಿದ್ಯಾಲಯದ ಘನತೆ ಮತ್ತು ಪರಂಪರೆಗೆ ಹಾನಿಕಾರಕವಾಗಿದೆ. ವಿಶ್ವವಿದ್ಯಾಲಯದ ಆಡಳಿತದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಇತಿಹಾಸವಿಲ್ಲ; ಆದರೆ ಪ್ರೊ. ತ್ರಿಪಾಠಿ ಅವರ ಅವಧಿಯಲ್ಲಿ ಪ್ರತಿಭಟನೆಗಳು ಮತ್ತು ಆಂದೋಲನಗಳು ನಡೆಯುತ್ತಿವೆ. ಇದು ಅರಾಜಕತೆಯ ಸೂಚಕವಾಗಿದೆ ಎಂದು ಪ್ರಾಧ್ಯಾಪಕರು ತಮ್ಮ ದೂರಿನಲ್ಲಿ ಗಂಭೀರ ಟೀಕೆಗಳನ್ನು ಮಾಡಿದ್ದಾರೆ.

ಯಾರು ದೂರು ನೀಡಿದ್ದಾರೆ?

ಅಧ್ಯಕ್ಷರಾದ ಪ್ರೊ. ಕವಿತಾ ಹೋಲೆ, ಪ್ರೊ. ಕಲಾಪಿನಿ ಅಗಸ್ತಿ, ಪ್ರೊ. ಹರೇಕೃಷ್ಣ ಅಗಸ್ತಿ, ನಿರ್ದೇಶಕ ಪ್ರಸಾದ ಗೋಖಲೆ, ವಿಭಾಗ ಮುಖ್ಯಸ್ಥ ಪ್ರೊ. ಪರಾಗ ಜೋಶಿ, ಉಪಕುಲಸಚಿವ ಡಾ. ಸ್ಮಿತಾ ಫಡ್ನವೀಸ್, ಸಹಾಯಕ ಕುಲಸಚಿವ ಸೌ. ಕಲ್ಯಾಣಿ ದೇಶಕರ್ ಮತ್ತು ಜನಸಂಪರ್ಕ ಅಧಿಕಾರಿ ಡಾ. ರೇಣುಕಾ ಬೋಕಾರೇ ಅವರು ಈ ದೂರುಗಳನ್ನು ನೀಡಿದ್ದಾರೆ.

ಕುಲಪತಿಗಳ ಮೇಲಿನ ಗಂಭೀರ ಆರೋಪಗಳು!

ಮನಬಂದಂತೆ ನೇಮಕಾತಿಗಳು!

1. ತಮ್ಮ ಸಂಬಂಧಿಕರಾದ ಡಾ. ದೇವಾನಂದ ಶುಕ್ಲಾ ಅವರನ್ನು ನಿಯಮಗಳನ್ನು ಮೀರಿ ಕುಲಸಚಿವರನ್ನಾಗಿ ನೇಮಿಸಿದ್ದಾರೆ. ಡಾ. ಶುಕ್ಲಾ ಅವರ ನೇಮಕಾತಿಗಾಗಿ ಉದ್ದೇಶಪೂರ್ವಕವಾಗಿ ಎರಡನೇ ಬಾರಿ ಜಾಹೀರಾತು ನೀಡಲಾಯಿತು ಮತ್ತು ಮೊದಲಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ನಿರ್ಲಕ್ಷಿಸಲಾಯಿತು.

2. ಒಂದು ವರ್ಷದ ಅವಧಿಗೆ ನೇಮಕಗೊಂಡಿದ್ದ ಕುಲಸಚಿವರಿಗೆ ಹಣಕಾಸು ಮತ್ತು ಲೆಕ್ಕಾಧಿಕಾರಿಗಳ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಸ್ವೇಚ್ಛೆಯಿಂದ ನೀಡಲಾಗಿದೆ.

3. ಕುಲಪತಿಗಳ ವಾಹನಕ್ಕೆ ಒಬ್ಬ ಚಾಲಕರನ್ನು ಮಾತ್ರ ನೇಮಿಸಲು ಸಾಧ್ಯವಿದೆ. ಆದರೆ, ಈ ಸಂದರ್ಭದಲ್ಲಿ, ಈಗಾಗಲೇ ನೇಮಕಗೊಂಡಿದ್ದ ಚಾಲಕನ ಹೊರತಾಗಿ, ಕುಲಪತಿಗಳು ಜಾಹೀರಾತು ಪ್ರಕ್ರಿಯೆಯನ್ನು ನಡೆಸದೆ ಮತ್ತು ಸಂಬಂಧಿತ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ ತಮ್ಮ ಊರಿನ ವ್ಯಕ್ತಿಯೊಬ್ಬರನ್ನು ಚಾಲಕರಾಗಿ ನೇಮಿಸಿದ್ದಾರೆ. ಈ ಹೊಸ ಚಾಲಕನಿಗೆ ಹಿಂದಿನ ಚಾಲಕನಿಗಿಂತ ಹೆಚ್ಚಿನ ವೇತನವನ್ನು ನೀಡಲಾಗುತ್ತಿದೆ.

4. ಅಧ್ಯಕ್ಷರನ್ನು ಮತ್ತು ನಿಯಮಗಳನ್ನು ನಿರ್ಲಕ್ಷಿಸಿ, ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

5. ಶೈಕ್ಷಣಿಕ ಸಹಕಾರ ಒಪ್ಪಂದಗಳ ಹೆಸರಿನಲ್ಲಿ, ತಮ್ಮ ಪರಿಚಿತ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಕರ್ತವ್ಯ ರಜೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

6. ಸರಕಾರ ಮತ್ತು ಆಡಳಿತ ಮಂಡಳಿಯ ಅನುಮೋದನೆಯ ನಂತರವೂ, ಕಳೆದ ಎರಡು ವರ್ಷಗಳಿಂದ ನಿಯಮಿತ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ವಿಳಂಬ ಮಾಡಿದ್ದಾರೆ.

7. ಆಡಳಿತ ಮಂಡಳಿಯಿಂದ ಅನುಮೋದನೆಗೊಂಡಿದ್ದ ಗುರುಕುಲದ ಖಾಲಿ ಇರುವ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

8. ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ, ಅಧ್ಯಯನ ಮಂಡಳಿಯ ಅಧ್ಯಕ್ಷರನ್ನು ವಿಶ್ವವಿದ್ಯಾಲಯದ ವಿಭಾಗಗಳಿಂದ ಅಥವಾ ಅದಕ್ಕೆ ಸಂಬಂಧಿಸಿದ ಕಾಲೇಜುಗಳ ಪರಿಣಿತ ಪ್ರಾಧ್ಯಾಪಕರಿಂದ ಆಯ್ಕೆ ಮಾಡಬೇಕಿದೆ. ಆದರೆ, ಕುಲಪತಿಗಳು ನಿಯಮಗಳನ್ನು ಮೀರಿ ದೆಹಲಿ, ವಾರಣಾಸಿ, ಪ್ರಯಾಗರಾಜ್, ಹರಿಯಾಣ, ವರ್ಧಾ, ಭೋಪಾಲ್‌ನ ಪ್ರಾಧ್ಯಾಪಕರನ್ನು ನೇಮಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಸಂಬಂಧಪಟ್ಟ ವಿಷಯದ ವಿಭಾಗ ಮುಖ್ಯಸ್ಥರು ಕಾರ್ಯನಿರ್ವಹಿಸುತ್ತಿದ್ದರೂ ಸಹ, ವಿಷಯಕ್ಕೆ ಸಂಬಂಧಪಡದ ಮಹಾರಾಷ್ಟ್ರದ ಹೊರಗಿನ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ.