ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ! – Bangladesh Hindu Genocide

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದಿಂದ ಮಹಮ್ಮದ್ ಯೂನಸ್ ಸರಕಾರದ ವಿರುದ್ಧ ಟೀಕೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮಹಮ್ಮದ್ ಯೂನಸ್ ಅವರ ಮಧ್ಯಂತರ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಗಣನೀಯವಾಗಿ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ, ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಯೂನಸ್ ಸರಕಾರದ ವಿರುದ್ಧ ಟೀಕಿಸಿ, ಅವರ ಆಡಳಿತಾವಧಿಯಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡದ ಒಂದು ಯೋಜಿತ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ. ಹಿಂದೂ ದೇವಸ್ಥಾನಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಮತ್ತು ಹಿಂದೂಗಳನ್ನು ಥಳಿಸಲಾಗುತ್ತಿದೆ.

ಅವಾಮಿ ಲೀಗ್ ಪಕ್ಷವು ‘ಎಕ್ಸ್’ನಲ್ಲಿ  ಪೋಸ್ಟ್ ಮಾಡಿ,

1. ಆಗಸ್ಟ್ 5, 2024 ಯಾವುದೇ ನಿರ್ಣಾಯಕ ದಿನವಾಗಿರಲಿಲ್ಲ; ಅದು ಕೇವಲ ಹಿಂಸಾಚಾರಕ್ಕೆ ತೋರಿದ ಹಸಿರು ನಿಶಾನೆಯಾಗಿತ್ತು. ಕೇವಲ 16 ದಿನಗಳಲ್ಲಿ, ಹಿಂಸಾಚಾರವು ದೇಶಾದ್ಯಂತ ಹರಡಿತು. ಆದರೂ ಪ್ರಪಂಚವು ಯೂನಸ್ ಅವರನ್ನು ಹೊಗಳುತ್ತಿದೆ. 1971ರ ಹತ್ಯಾಕಾಂಡವೇ ಕೊನೆಯದು ಎಂದು ಭಾವಿಸಲಾಗಿತ್ತು; ಆದರೆ ಅದು ಅವರ ಆಡಳಿತದಲ್ಲಿ ಮತ್ತೆ ಮರುಕಳಿಸಿದೆ. ಬಾಂಗ್ಲಾದೇಶವು ಇನ್ನೂ ಅದೇ ದೇಶವೇ ಅಥವಾ ಅದು ಒಂದು ಗುಪ್ತ ತಾಲಿಬಾನ್ ರಾಜ್ಯವಾಗಿ ಮಾರ್ಪಟ್ಟಿದೆಯೇ?

2. ಬರಿಸಾಲ್‌ನಲ್ಲಿ ಒಂದು ಹಿಂದೂ ಕುಟುಂಬಕ್ಕೆ ಥಳಿಸಿ ಜೀವ ಬೆದರಿಕೆ ಹಾಕಲಾಯಿತು, ಹಬಿಗಂಜ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಮೋನಪ್ರಿಯಾ ಸರಕಾರ ಕಾಣೆಯಾದಳು, ಕುಮಿಲ್ಲಾದಲ್ಲಿ ಒಬ್ಬ ಹಿಂದೂ ಮಹಿಳೆಯ ಮೇಲೆ ಆಕೆಯ ಮನೆಯಲ್ಲಿಯೇ ಸಾಮೂಹಿಕ ಅತ್ಯಾಚಾರ ಮಾಡಲಾಯಿತು, ಖಿಲ್‌ಖೇಟ್‌ನಲ್ಲಿ ಸರಕಾರಿ ಯಂತ್ರಗಳು ಶ್ರೀ ದುರ್ಗಾದೇವಿಯ ಒಂದು ದೇವಸ್ಥಾನವನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಿದವು, ಠಾಕೂರಗಾಂವ್‌ನಲ್ಲಿ ವಿಗ್ರಹಗಳನ್ನು ಒಡೆದು, ದೇವಸ್ಥಾನಗಳಿಗೆ ಬೆಂಕಿ ಹಚ್ಚಿ ಇಡೀ ಹಿಂದೂ ಸಮುದಾಯವನ್ನು ಗ್ರಾಮ ಬಿಟ್ಟು ಹೋಗುವಂತೆ ಮಾಡಲಾಯಿತು.

3. ಮದರಸಾಗಳಲ್ಲಿ ದ್ವೇಷವನ್ನು ಕಲಿಸಲಾಗುತ್ತಿದೆ, ಸೇನಾಧಿಕಾರಿಗಳು ಹಿಂದೂಗಳ ಮಂತ್ರಗಳನ್ನು ಗೇಲಿ ಮಾಡುತ್ತಾರೆ. ದೇವಸ್ಥಾನಗಳು, ಸಮಾಧಿಗಳು ಮತ್ತು ಪವಿತ್ರ ಸ್ಥಳಗಳು ಈಗ ಯುದ್ಧಭೂಮಿಗಳಾಗಿವೆ.

4. ಬಾಂಗ್ಲಾದೇಶವು ಈಗ ಅಲ್ಪಸಂಖ್ಯಾತರಿಗೆ ಒಂದು ಸ್ಮಶಾನವಾಗಿದೆ. ಕಳೆದ ವರ್ಷ ಪ್ರಾರಂಭವಾದ ಅಸ್ಥಿರತೆಯು ಈಗ ಒಂದು ಸಂಘಟಿತ ಧಾರ್ಮಿಕ ಶುದ್ಧೀಕರಣವಾಗಿ ಪರಿವರ್ತಿತವಾಗಿದೆ.

5. ಯೂನಸ್ ಸರಕಾರವು ಒಂದು ಕ್ರೂರ ಕೋಮುವಾದಿ ರಾಜ್ಯವನ್ನು ನಿರ್ಮಿಸಿದೆ. ಇಲ್ಲಿ ಅಲ್ಪಸಂಖ್ಯಾತರಾಗಿರುವುದು ಅಂದರೆ ಒಂದು ಅಪರಾಧ. ಧಾರ್ಮಿಕ ಗುರುತು ಭಯವನ್ನು ಸೃಷ್ಟಿಸುತ್ತದೆ. ಕಳೆದ ಒಂದು ವರ್ಷದಿಂದ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಿರಂತರವಾಗಿ ಯೋಜಿತ ಭಯೋತ್ಪಾದನೆ ನಡೆಸಲಾಗುತ್ತಿದೆ. ಕಟ್ಟರವಾದಿಗಳು ದೇವಸ್ಥಾನಗಳ ಮೇಲೆ ದಾಳಿ ಮಾಡಿದ್ದಾರೆ, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ, ಹುಡುಗಿಯರನ್ನು ಅಪಹರಿಸಿದ್ದಾರೆ, ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಸರಕಾರವು ಈ ಎಲ್ಲದರ ಬಗ್ಗೆ ಮೌನ ತಾಳಿದೆ.

ಸಂಪಾದಕೀಯ ನಿಲುವು

  • ಭಾರತ ಸರಕಾರ ಮಾಡಬೇಕಾದ ಕೆಲಸವನ್ನು ಬಾಂಗ್ಲಾದೇಶದ ಮಾಜಿ ಆಡಳಿತ ಪಕ್ಷ ಮಾಡುತ್ತಿದೆ. ಈಗಲಾದರೂ ಭಾರತವು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ? ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳುವಂತೆ ಹಿಂದೂಗಳು ಸಹ ಸರಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂಬುದು ಸಹ ನಾಚಿಕೆಗೇಡಿನ ಸಂಗತಿ!
  • ಅವಾಮಿ ಲೀಗ್ ಆಡಳಿತದ ಅವಧಿಯಲ್ಲಿಯೂ ಸಹ ಹಿಂದೂಗಳ ಮೇಲೆ ಅಸಂಖ್ಯಾತ ದೌರ್ಜನ್ಯಗಳು ನಡೆದಿವೆ. ಆದ್ದರಿಂದ, ಈಗ ಅವರ ಈ ನಿಲುವು, ‘ನೂರು ಇಲಿಗಳನ್ನು ತಿಂದ ಬೆಕ್ಕು ಹಜ್‌ಗೆ ಹೊರಟಂತೆ’ ಇದೆ!