ಶಿರೂರ ಕಾಸಾರ (ಬೀಡ ಜಿಲ್ಲೆ) ಇಲ್ಲಿನ ಯುವಕನಿಗೆ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆ ಸಂದೇಶ!

ಸಂದೇಶ ಕಳುಹಿಸಿದ ವ್ಯಕ್ತಿ ಪಾಕಿಸ್ತಾನದ ಕರಾಚಿಯವನು ಎಂದು ದಾವೆ !

ಬೀಡ – ಜಿಲ್ಲೆಯ ಶಿರೂರ ಕಾಸಾರ್‌ ನ ಯುವಕನೊಬ್ಬನಿಗೆ ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆ ಒಳಗೊಂಡ ಆಡಿಯೊ ಕ್ಲಿಪ್ ಬಂದಿದೆ. ಈ ಧ್ವನಿಮುದ್ರಿಕೆಯನ್ನು ಕಳುಹಿಸಿದವನು ತನ್ನ ‘ಸ್ಥಳ’ವನ್ನು ಕೂಡ ಕಳುಹಿಸಿದ್ದು, ತಾನು ಪಾಕಿಸ್ತಾನಿ ಎಂದು ಹೇಳಿಕೊಂಡಿದ್ದಾನೆ. ಅವನು ಯುವಕನಿಗೆ, ‘ನೀನು ಈ ಸಂಚಿನಲ್ಲಿ ಭಾಗಿಯಾದರೆ, ನಿನಗೆ 1 ಲಕ್ಷ ರೂಪಾಯಿ ಬಹುಮಾನ ಸಿಗುತ್ತದೆ’ ಎಂದು ಹೇಳಿದ್ದಾನೆ. ಇದನ್ನು ಓದಿ ಗಾಬರಿಗೊಂಡ ಯುವಕ ತಕ್ಷಣವೇ ಪೊಲೀಸರ ಬಳಿಗೆ ಧಾವಿಸಿದ್ದಾನೆ. ಯುವಕ ನೀಡಿದ ದೂರಿನ ಆಧಾರದ ಮೇಲೆ ಶಿರೂರ ಕಾಸಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಈ ಸಂದೇಶ ನಿಜವಾಗಿಯೂ ಪಾಕಿಸ್ತಾನದಿಂದ ಬಂದಿದೆಯೇ? ಸಂದೇಶ ಕಳುಹಿಸಿದವನು ಯಾರು? ಮತ್ತು ಇದು ಯಾವುದಾದರೂ ಷಡ್ಯಂತ್ರದ ಭಾಗವೇ?’ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

50 ಜನರ ಅವಶ್ಯಕತೆ ಮತ್ತು ‘ಆರ್.ಡಿ.ಎಕ್ಸ್’ ಉಲ್ಲೇಖ!

ಸಂದೇಶದಲ್ಲಿ, ಮಂದಿರವನ್ನು ಸ್ಫೋಟಿಸಲು 50 ಜನರ ಅವಶ್ಯಕತೆ ಇದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಪ್ರತಿಯೊಬ್ಬರಿಗೂ 1 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಮತ್ತು ‘ಆರ್.ಡಿ.ಎಕ್ಸ್’ (ಸ್ಫೋಟಕ) ಅನ್ನು ಒದಗಿಸಲಾಗುವುದು ಎಂದೂ ಉಲ್ಲೇಖಿಸಲಾಗಿದೆ.

ಸಂಪಾದಕೀಯ ನಿಲುವು

ಶ್ರೀರಾಮ ಮಂದಿರವು ಭಾರತದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ಇರುವ ಮತಾಂಧರ ಕಣ್ಣಿಗೆ ಚುಚ್ಚುತ್ತಿದೆ. ಆದ್ದರಿಂದಲೇ ಮಂದಿರವನ್ನು ನಾಶಪಡಿಸುವ ಬೆದರಿಕೆಗಳು ಪದೇ ಪದೇ ಬರುತ್ತಿವೆ. ಹಿಂದೂಗಳ ಹೆಮ್ಮೆಯ ಪ್ರತೀಕವಾಗಿರುವ ಈ ಮಂದಿರದತ್ತ ವಕ್ರದೃಷ್ಟಿ ಹಾಯಿಸುವ ಧೈರ್ಯವನ್ನು ಮತಾಂಧರು ಮಾಡದಂತೆ ಹಿಂದೂಗಳು, ಸರಕಾರ ಮತ್ತು ಪೊಲೀಸರು ತಮ್ಮ ಸಂಘಟನೆಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕವಾಗಿದೆ!