ಕೇಂದ್ರ ಸರಕಾರದ ಬಳಿ ‘ಸುರಾಜ್ಯ ಅಭಿಯಾನ’ದ ಆಗ್ರಹ: ಬಿಸಿಸಿಐ RTI ಅಡಿಯಲ್ಲಿ ಬರಲಿ!

‘ಸಿಎಜಿ’ ವ್ಯಾಪ್ತಿಗೆ ತರುವಂತೆ ಒತ್ತಾಯ

ಮುಂಬಯಿ – ಹಿಂದೂ ಜನಜಾಗೃತಿ ಸಮಿತಿಯ ಉಪಕ್ರಮವಾದ ‘ಸುರಾಜ್ಯ ಅಭಿಯಾನ’ವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಭಾರತದ ಸಿಎಜಿ ಮತ್ತು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ (ಎನ್‌ಎಸ್‌ಡಿಸಿಐ) ವ್ಯಾಪ್ತಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ‘ಸುರಾಜ್ಯ ಅಭಿಯಾನ’ದ ಮಹಾರಾಷ್ಟ್ರ ರಾಜ್ಯ ಸಂಯೋಜಕ ಶ್ರೀ. ಅಭಿಷೇಕ ಮುರ್ಕುಟೆ ಅವರು ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ ಮಾಂಡವಿಯಾ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.

ಶ್ರೀ ಅಭಿಷೇಕ್ ಮುರುಕುಟೆ

೧. ಮುಂಗಾರು ಅಧಿವೇಶನದಲ್ಲಿ ‘ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ’ಯನ್ನು ಮಂಡಿಸುವ ಭಾರತ ಸರಕಾರದ ನಿರ್ಧಾರವನ್ನು ‘ಸುರಾಜ್ಯ ಅಭಿಯಾನ’ ಸ್ವಾಗತಿಸಿದೆ. ಅಲ್ಲದೆ, ‘ಈ ಮಸೂದೆಯು ಭಾರತದ ಕ್ರೀಡಾ ಒಕ್ಕೂಟಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಖಚಿತಪಡಿಸುವ ಕಾನೂನು ಚೌಕಟ್ಟನ್ನು ಸೃಷ್ಟಿಸುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದೆ.

ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವಿಯಾ

. ‘ಸುರಾಜ್ಯ ಅಭಿಯಾನ’ವು ಭಾರತ ಸರಕಾರದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಡಾ. ಮನ್ಸುಖ ಮಾಂಡವಿಯಾ ಅವರಿಗೆ ಬರೆದ ಪತ್ರದಲ್ಲಿ, ‘ಬಿಸಿಸಿಐ ಅನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರ ಆಡಿಟ್ ವ್ಯಾಪ್ತಿಗೆ ತರಬೇಕು. ಇದರೊಂದಿಗೆ, ಬಿಸಿಸಿಐ ಅನ್ನು ಆರ್‌ಟಿಐ ಅಡಿಯಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಎಂದು ಘೋಷಿಸಬೇಕು ಮತ್ತು ಎನ್‌ಎಸ್‌ಡಿಸಿಐನ ಎಲ್ಲಾ ಮಾನದಂಡಗಳನ್ನು ಬಿಸಿಸಿಐಗೆ ಕಡ್ಡಾಯಗೊಳಿಸಬೇಕು’ ಎಂದು ತಿಳಿಸಿದೆ.

. ‘ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುತ್ತದೆ. ಭಾರತವನ್ನು ಪ್ರತಿನಿಧಿಸುತ್ತದೆ. ಸರಕಾರಿ ಮೈದಾನಗಳನ್ನು ಬಳಸುತ್ತದೆ. ಹಾಗೆಯೇ ಪೊಲೀಸ್ ಮತ್ತು ನಾಗರಿಕ ಸೌಲಭ್ಯಗಳ ಲಾಭ ಪಡೆಯುತ್ತದೆ. ವಿದೇಶದಲ್ಲಿ ಪಂದ್ಯಗಳನ್ನು ಆಯೋಜಿಸುವಾಗ ವಿದೇಶಾಂಗ ಸಚಿವಾಲಯ ಮತ್ತು ಇತರ ಸರಕಾರಿ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುತ್ತದೆ. ಈ ಅಂಶಗಳು ಬಿಸಿಸಿಐನ ಸಾರ್ವಜನಿಕ ಸ್ವರೂಪವನ್ನು ಸ್ಪಷ್ಟಪಡಿಸುತ್ತವೆ’ ಎಂದು ಸುರಾಜ್ಯ ಅಭಿಯಾನ ಹೇಳಿದೆ.

. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, ೨೦೧೧ ರಲ್ಲಿ ಅಧಿಕಾರಾವಧಿ ಮಿತಿ, ಆಟಗಾರರ ಹಿತಾಸಕ್ತಿ, ಆರ್ಥಿಕ ಪಾರದರ್ಶಕತೆ ಮತ್ತು ಸಾಂಸ್ಥಿಕ ಪ್ರಜಾಪ್ರಭುತ್ವದ ಮಾನದಂಡಗಳಿವೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಬಿಸಿಸಿಐಗೆ ಈ ಸಂಹಿತೆ ಕಡ್ಡಾಯವಾಗಿರಬೇಕು.

. ಕ್ರಿಕೆಟ್ ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿದೆ. ಆದ್ದರಿಂದ, ಅದರ ಆಡಳಿತವು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಪಾರದರ್ಶಕ, ನೈತಿಕ ಮತ್ತು ಕಾನೂನುಬದ್ಧವಾಗಿರಬೇಕು ಎಂದು ಸುರಾಜ್ಯ ಅಭಿಯಾನ ಹೇಳಿದೆ.

. ಈ ಪತ್ರದ ಪ್ರತಿಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ. ಅಶ್ವಿನಿ ವೈಷ್ಣವ ಅವರಿಗೂ ಕಳುಹಿಸಲಾಗಿದೆ.