SC Slams CBI : ಸುಪ್ರೀಂ ಕೋರ್ಟ್ ಸಿಬಿಐಗೆ ತರಾಟೆ: “ನ್ಯಾಯಾಲಯಕ್ಕೆ ಬರಲು ಧೈರ್ಯವಿಲ್ಲವೇ?”

ಸನ್ಮಾನ್ ಕ್ಯಾಪಿಟಲ್ ಲಿಮಿಟೆಡ್’ನಲ್ಲಿ ಹಣ ದುರುಪಯೋಗ ಪ್ರಕರಣ

 

ನವದೆಹಲಿ – ‘ಸನ್ಮಾನ್ ಕ್ಯಾಪಿಟಲ್ ಲಿಮಿಟೆಡ್’ (ಹಿಂದಿನ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ಪ್ರವರ್ತಕರು ಹಣ ದುರುಪಯೋಗ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳ ಕುರಿತು ವಿಶೇಷ ತನಿಖಾ ದಳದ ಮೂಲಕ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.

ಈ ವಿಚಾರಣೆಗೆ ಕೇಂದ್ರ ತನಿಖಾ ದಳ (ಸಿಬಿಐ) ಹಾಜರಾಗದಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ನಾವು ಈ ವರ್ತನೆಯನ್ನು ಒಪ್ಪುವುದಿಲ್ಲ. ನಾವು ನೋಟಿಸ್ ನೀಡಿದ ನಂತರ ಅವರು ನ್ಯಾಯಾಲಯಕ್ಕೆ ಹಾಜರಾಗಲೇಬೇಕು. ಅವರು ಸುಪ್ರೀಂ ಕೋರ್ಟ್‌ಗೆ ಹಾಜರಾಗುವುದಿಲ್ಲ ಎಂದು ಹೇಗೆ ಹೇಳಬಹುದು? ಅವರಿಗೆ ನ್ಯಾಯಾಲಯಕ್ಕೆ ಬರುವ ಧೈರ್ಯವೂ ಇಲ್ಲವೇ?” ಎಂದು ನ್ಯಾಯಾಲಯ ಸಿಬಿಐಗೆ ತರಾಟೆಗೆ ತೆಗೆದುಕೊಂಡಿತು.

ಈ ಸಂದರ್ಭದಲ್ಲಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಒಂದು ವಾರದ ಸಮಯಾವಕಾಶ ಕೇಳಿದರು. ನ್ಯಾಯಾಲಯ ಇದಕ್ಕೆ ಸಮ್ಮತಿಸಿತು. ಸಿಬಿಐಗೆ ಕ್ರಮ ಕೈಗೊಳ್ಳಲು ಔಪಚಾರಿಕ ದೂರುದಾರರ ಅಗತ್ಯವಿಲ್ಲ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ನೆನಪಿಸಿತು.