Justice Yashwant Varma : ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ದೋಷಾರೋಪಣೆ ಪ್ರಕ್ರಿಯೆ ನಡೆಸಲಾಗುವುದು!

  • ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ 15 ಕೋಟಿ ರೂಪಾಯಿ ನಗದು ಪತ್ತೆ ಪ್ರಕರಣ

  • 100 ಸಂಸದರಿಂದ ಪ್ರಸ್ತಾವನೆಗೆ ಸಹಿ

(ದೋಷಾರೋಪಣೆ ಎಂದರೆ ಪದಚ್ಯುತಿಗಾಗಿ ಸಂಸದೀಯ ಪ್ರಕ್ರಿಯೆ)

ನವದೆಹಲಿ – ಸಂಸತ್ತಿನ ಈ ಮಳೆಗಾಲದ ಅಧಿವೇಶನದಲ್ಲಿ ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧ ದೋಷಾರೋಪಣೆ ಪ್ರಸ್ತಾವವನ್ನು ಮಂಡಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೇನ ರಿಜಿಜು ಮಾಹಿತಿ ನೀಡಿದ್ದಾರೆ. ಈ ಪ್ರಸ್ತಾವವನ್ನು ಮಂಡಿಸಲು 100 ಕ್ಕೂ ಹೆಚ್ಚು ಸಂಸದರು ಈಗಾಗಲೇ ನೋಟಿಸ್‌ ಗೆ ಸಹಿ ಹಾಕಿದ್ದು, ಇದು ಲೋಕಸಭೆಯಲ್ಲಿ ದೋಷಾರೋಪಣೆ ಪ್ರಸ್ತಾವವನ್ನು ಮಂಡಿಸಲು ಅಗತ್ಯವಿರುವ ಮಿತಿಗಿಂತ ಹೆಚ್ಚಾಗಿದೆ.

ಕಿರೇನ ರಿಜಿಜು ಇವರು, “ನ್ಯಾಯಾಂಗದಲ್ಲಿನ ಭ್ರಷ್ಟಾಚಾರವು ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಷಯವಾಗಿದೆ; ಏಕೆಂದರೆ ನ್ಯಾಯಾಂಗದಲ್ಲಿ ಜನರಿಗೆ ನ್ಯಾಯ ದೊರೆಯುತ್ತದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇದ್ದರೆ, ಅದು ಎಲ್ಲರಿಗೂ ಗಂಭೀರ ಚಿಂತೆಯ ವಿಷಯವಾಗಿದೆ. ಆದ್ದರಿಂದ, ಯಶವಂತ್ ವರ್ಮಾ ಅವರನ್ನು ತೆಗೆದುಹಾಕುವ ಪ್ರಸ್ತಾವಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಸಹಿ ಇರಬೇಕು” ಎಂದು ರಿಜಿಜು ಹೇಳಿದರು.

ಯಾವ ಪ್ರಕರಣ ?

ಮಾರ್ಚ್ 14, 2025 ರಂದು ರಾತ್ರಿ 11:35 ಕ್ಕೆ ದೆಹಲಿಯ ಲುಟಿಯೆನ್ಸ್‌ ನಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಬಂಗಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಘಟನೆ ಸಂಭವಿಸಿದಾಗ ನ್ಯಾಯಮೂರ್ತಿ ವರ್ಮಾ ನಗರದ ಹೊರಗಿದ್ದರು. ಮಾರ್ಚ್ 21 ರಂದು, ಕೆಲವು ವರದಿಗಳು ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ 15 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದವು. ಹೆಚ್ಚಿನ ನೋಟುಗಳು ಸುಟ್ಟು ಹೋಗಿದ್ದವು. ಇದರ ಒಂದು ವಿಡಿಯೋ ಕೂಡ ಪ್ರಸಾರ ಆಗಿತ್ತು. ಮಾರ್ಚ್ 22 ರಂದು, ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಮೇಲಿನ ಆರೋಪಗಳ ಆಂತರಿಕ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದರು. ಈ ಸಮಿತಿಯು ಮೇ 4 ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ವರದಿಯನ್ನು ಸಲ್ಲಿಸಿತು. ಇದರಲ್ಲಿ ನ್ಯಾಯಮೂರ್ತಿ ವರ್ಮಾ ದೋಷಿ ಎಂದು ಕಂಡುಬಂದರು. ಈ ವರದಿಯ ಆಧಾರದ ಮೇಲೆ, ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಅವರನ್ನು ತೆಗೆದುಹಾಕಲು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಜುಲೈ 18 ರಂದು, ನ್ಯಾಯಮೂರ್ತಿ ಯಶವಂತ ವರ್ಮಾ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆಂತರಿಕ ಸಮಿತಿಯ ವರದಿ ಮತ್ತು ದೋಷಾರೋಪಣೆಯ ಶಿಫಾರಸನ್ನು ರದ್ದುಪಡಿಸುವಂತೆ ಅವರು ಮನವಿ ಮಾಡಿದ್ದಾರೆ.