ವಿಮಾನಯಾನ ಸಂಸ್ಥೆಗಳ ತಪ್ಪು ಕಾರ್ಯವಿಧಾನಗಳು ಬಹಿರಂಗಗೊಳ್ಳುವುದು ಅತ್ಯಗತ್ಯ!

10 ವರ್ಷಗಳ ವಿಮಾನ ಚಾಲನಾ ಅನುಭವವಿರುವ ಪ್ರಸಿದ್ಧ ವ್ಲಾಗರ್ ಗೌರವ್ ತನೇಜಾ ಅವರ ಮಹತ್ವದ ಹೇಳಿಕೆ!

ನವದೆಹಲಿ – ಎರಡು ವಾರಗಳ ಹಿಂದೆ ಕರ್ಣಾವತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ 241 ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 10 ವರ್ಷಗಳ ವಿಮಾನ ಚಾಲನಾ ಅನುಭವ ಮತ್ತು 1 ಕೋಟಿ ಅನುಯಾಯಿಗಳನ್ನು ಹೊಂದಿರುವ ಪ್ರಸಿದ್ಧ ವ್ಲಾಗರ್ ಗೌರವ್ ತನೇಜಾ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಮಾನಗಳನ್ನು ‘ಫ್ಲೈಯಿಂಗ್ ಬೀಸ್ಟ್’ ಅಂದರೆ ‘ಹಾರುವ ಹಿಂಸಾತ್ಮಕ ಪ್ರಾಣಿ’ ಎಂದು ಕರೆದ ಅವರು, ಪೈಲಟ್ ಗಳ ಹಾರಾಟದ ವೇಳಾಪಟ್ಟಿ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ. ಯಾರಾದರೂ ರಾತ್ರಿಯಿಡೀ ವಿಮಾನ ಹಾರಿಸಿದ್ದರೆ, ಅವರಿಗೆ ತಕ್ಷಣವೇ ಇನ್ನೊಂದು ಹಾರಾಟಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ತನಿಖೆ ನಡೆದಾಗಲೇ ಎಲ್ಲವೂ ಬಹಿರಂಗಗೊಳ್ಳುತ್ತದೆ ಎಂದು ತನೇಜಾ ಹೇಳಿದರು.

ತನೇಜಾ ಅವರು ಮಂಡಿಸಿದ ಪ್ರಮುಖ ಅಂಶಗಳು !

1. ದೋಷವಿಲ್ಲದ ವಿಮಾನವನ್ನೇ ಹಾರಾಟಕ್ಕೆ ನೀಡಿರಿ!

‘ಏರ್ ಇಂಡಿಯಾ’ದ ಪೈಲಟ್ ಗಳು ಕೋಪಗೊಂಡಿದ್ದಾರೆ ಮತ್ತು ಅಸಮಾಧಾನಗೊಂಡಿದ್ದಾರೆ. ವಿಮಾನ ಹಾರಾಟಕ್ಕೆ ಇಂಜಿನಿಯರ್ ಗಳು ಹೋಗುವುದಿಲ್ಲ ಅಥವಾ ಆಡಳಿತ ಮಂಡಳಿಯ ಅಧಿಕಾರಿಗಳು ಹೋಗುವುದಿಲ್ಲ. ನಾವು ವಿಮಾನದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪೈಲಟ್ ಗಳು ಹೇಳುತ್ತಿದ್ದಾರೆ. ಯಾವುದೇ ದೋಷವಿಲ್ಲದ ವಿಮಾನವನ್ನೇ ನಮಗೆ ಹಾರಾಟಕ್ಕೆ ನೀಡಿ ಎನ್ನುತ್ತಿದ್ದಾರೆ.

2. ವಿಮಾನದಲ್ಲಿನ ಸಣ್ಣ-ಪುಟ್ಟ ದೋಷಗಳನ್ನು ನಿರ್ಲಕ್ಷಿಸಲು ಇಂಜಿನಿಯರ್ ಗಳು ಪೈಲಟ್ ಗಳಿಗೆ ಹೇಳುತ್ತಾರೆ!

ವಿಮಾನ ಹಾರಾಟ ಕ್ಷೇತ್ರದಲ್ಲಿ ಒಂದು ರೂಢಿ ಏನೆಂದರೆ, ಒಂದು ಸಣ್ಣ ದೋಷ ಕಂಡುಬಂದಾಗ, ಅದನ್ನು ನಿರ್ಲಕ್ಷಿಸಲು ಅಥವಾ ಅದರ ಬಗ್ಗೆ ದೂರು ನೀಡದಿರುವಂತೆ ಇಂಜೀನಿಯರ್ ಗಳು ಪೈಲಟ್ ಗಳಿಗೆ ಹೇಳುತ್ತಾರೆ. ಪೈಲಟ್ ದೂರು ನೀಡಿದರೆ, ಅದರ ಸಂಪೂರ್ಣ ಪ್ರಕ್ರಿಯೆಯನ್ನು ವಿಸ್ತಾರವಾಗಿ ಮಾಡಬೇಕಾಗುತ್ತದೆ. ಇದರಿಂದ ಹಾರಾಟಕ್ಕೆ ವಿಳಂಬವಾಗುತ್ತದೆ. ಹಾಗಾಗಿ ವಿಮಾನ ಇಳಿದ ನಂತರ ದೂರು ನೀಡಬೇಕು ಎಂದು ಇಂಜೀನಿಯರ್ ಗಳು ವಿನಂತಿಸುತ್ತಾರೆ.

3. ಕಾರ್ಯವಿಧಾನವನ್ನು ಬದಲಾಯಿಸುವುದು ಅವಶ್ಯಕ!

ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯವಿಧಾನವನ್ನು ಬದಲಾಯಿಸಬೇಕು. ಒಂದು-ಎರಡು ನಿಮಿಷಗಳಿಗಾಗಿ ಅವರು ಇಂತಹ ದೊಡ್ಡ ದೋಷಗಳನ್ನು ನಿರ್ಲಕ್ಷಿಸಬಾರದು.