‘ಆಪರೇಷನ್ ಸಿಂಧೂರ್’ ಇನ್ನೂ ಮುಗಿದಿಲ್ಲ! – ರಕ್ಷಣಾ ಸಚಿವ

ನವದೆಹಲಿ – ಪಾಕಿಸ್ತಾನ ವಿರುದ್ಧ ಆರಂಭಿಸಿರುವ ‘ಆಪರೇಷನ್ ಸಿಂಧೂರ್’ ಇನ್ನೂ ನಡೆಯುತ್ತಿದೆ. ಮೇ 6 ರ ಮಧ್ಯರಾತ್ರಿ ಪಾಕಿಸ್ತಾನದ 9 ಸ್ಥಳಗಳಲ್ಲಿ ನಡೆದ ವಾಯುದಾಳಿಯ ನಂತರವೂ ಕಾರ್ಯಾಚರಣೆ ನಿಂತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ತಿಳಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಕೂಡ ಪತ್ರಕರ್ತರೊಂದಿಗೆ ಮಾತನಾಡುವಾಗ ಈ ವಿಷಯವನ್ನು ಪುನರುಚ್ಚರಿಸಿದರು.

‘ಆಪರೇಷನ್ ಸಿಂಧೂರ್’ ಕುರಿತು ಮಾಹಿತಿ ನೀಡಲು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಗೃಹ ಸಚಿವ ಅಮಿತ ಶಾ, ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ್, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಸಾದುದ್ದೀನ ಓವೈಸಿ ಮುಂತಾದ ನಾಯಕರು ಉಪಸ್ಥಿತರಿದ್ದರು.

ಭಾರತದ ಕ್ರಮಕ್ಕೆ ಕಾಂಗ್ರೆಸ್ಸಿನ ಬೆಂಬಲ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಸಂಕಷ್ಟದಲ್ಲಿ ನಾವು ದೇಶ ಮತ್ತು ಸರಕಾರದೊಂದಿಗಿದ್ದೇವೆ. ಸರಕಾರದ ಮೇಲೆ ಟೀಕೆ ಮಾಡುವ ಅಗತ್ಯವಿಲ್ಲ ಎಂದರು. ರಾಹುಲ್ ಗಾಂಧಿಯವರು ನಾವು ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ನಾನು ಚರ್ಚಿಸಲು ಇಚ್ಛಿಸದ ಕೆಲವು ವಿಷಯಗಳು ಕೂಡ ಇವೆ ಎಂದರು. (ಇದನ್ನು ‘ಸಂಪೂರ್ಣ ಬೆಂಬಲ’ ಎನ್ನಬಹುದೇ? – ಸಂಪಾದಕರು)

‘ದಿ ರೆಸಿಸ್ಟೆನ್ಸ್ ಫ್ರಂಟ್’ ಭಯೋತ್ಪಾದಕ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಿ! – ಓವೈಸಿ

ಅಸಾದುದ್ದೀನ್ ಓವೈಸಿ ಅವರು ಮಾತನಾಡಿ, ‘ಆಪರೇಷನ್ ಸಿಂಧೂರ್’ಗಾಗಿ ನಾನು ನಮ್ಮ ಸಶಸ್ತ್ರ ಪಡೆಗಳು ಮತ್ತು ಸರಕಾರವನ್ನು ಶ್ಲಾಘಿಸುತ್ತೇನೆ. ನಾವು ‘ರೆಸಿಸ್ಟೆನ್ಸ್ ಫ್ರಂಟ್’ ಭಯೋತ್ಪಾದಕ ಸಂಘಟನೆಯ ವಿರುದ್ಧ ಜಾಗತಿಕ ಅಭಿಯಾನವನ್ನು ಪ್ರಾರಂಭಿಸಬೇಕು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.