೧೦ ಮೇ ೨೦೨೫ ಈ ದಿನ, ೧೮೫೭ರ ಸ್ವಾತಂತ್ರ್ಯ ಹೋರಾಟದ ಪ್ರಾರಂಭದಿನ’ ಆಗಿದೆ. ತನ್ನಿಮಿತ್ತ…

ಸ್ವಾತಂತ್ರ್ಯವೀರ ವಿ.ದಾ. ಸಾವರಕರರು ‘ಮಾಝಿನಿಯ ಚರಿತ್ರೆ ಮತ್ತು ರಾಜಕಾರಣ’ ಈ ಮರಾಠಿ ಗ್ರಂಥವನ್ನು ಬರೆದು ಪೂರ್ಣಗೊಳಿಸಿದರು. ತದನಂತರ ಅವರು ‘೧೮೫೭ರ ಸ್ವಾತಂತ್ರ್ಯ ಸಂಗ್ರಾಮ’ ಈ ಗ್ರಂಥವನ್ನು ಬರೆಯುವ ಸಂಕಲ್ಪವನ್ನು ಮಾಡಿದರು. ಈ ಗ್ರಂಥವನ್ನು ಬರೆಯಲು ಆವಶ್ಯಕವಿರುವ ಸಾಧನಗಳನ್ನು ಸಂಗ್ರಹಿಸತೊಡಗಿದರು. ಇದಕ್ಕಾಗಿ ಅವರು ಇಂಡಿಯಾ ಹೌಸ್ನ ಆಡಳಿತಾಧಿಕಾರಿಯಾಗಿದ್ದ ಮುಖರ್ಜಿಯವರ ಸಹಾಯ ಪಡೆದರು. ಮುಖರ್ಜಿಯವರೇ ಸಾವರಕರರಿಗೆ ಮಾಝಿನಿಯ ಗ್ರಂಥವನ್ನು ಹುಡುಕಿಕೊಟ್ಟಿದ್ದರು. ಅವರು ಜಾನ್ ಕೆ. ಬರೆದ ಬಂಡಾಯದ ಇತಿಹಾಸದ ಮೊದಲ ಖಂಡವನ್ನು ಸಾವರಕರ ಅವರಿಗೆ ತಂದು ಕೊಟ್ಟರು. ಈ ಗ್ರಂಥದ ಕೊನೆಯಲ್ಲಿ ಬಂಡಾಯ ಇತಿಹಾಸದ ಇನ್ನು ೫ ಖಂಡಗಳನ್ನು ಪ್ರಕಟಿಸಿರುವ ಉಲ್ಲೇಖ ಸಾವರಕರ ಇವರಿಗೆ ಸಿಕ್ಕಿತು. ಸಾವರಕರವರು ತಕ್ಷಣವೇ ಮುಖರ್ಜಿಯವರಿಗೆ ಎಲ್ಲಾ ಖಂಡಗಳನ್ನು ತಂದು ಕೊಡುವಂತೆ ವಿನಂತಿಸಿದರು. ಮುಖರ್ಜಿಯವರು ಕೂಡಲೇ ಪ್ರಯತ್ನಿಸಿ ಅತ್ತಿತ್ತ ಹುಡುಕಿ, ಆ ೫ ಖಂಡಗಳನ್ನು ಹುಡುಕಿದರು. ಆಗ ಅವರಿಗೆ ಜಾನ್ ಕೆ. ಮತ್ತು ಮಲೆಸನ್ ಈ ಲೇಖಕದ್ವಯರು ಬರೆದ ಬಂಡಾಯದ ಸಂಪೂರ್ಣ ಇತಿಹಾಸವು ೬ ಖಂಡಗಳಲ್ಲಿ ಪ್ರಕಟವಾಗಿದ್ದು ಸಿಕ್ಕಿತು. ಆ ಎಲ್ಲ ಸಂಪುಟಗಳನ್ನು ಅವರು ಕೇವಲ ೮ ದಿನಗಳಲ್ಲಿ ಹುಡುಕಿ ಸಾವರಕರರವರಿಗೆ ತಂದು ಕೊಟ್ಟರು.
ಈ ಎಲ್ಲಾ ಖಂಡಗಳನ್ನು ಸಾವರಕರರು ಏಕಾಗ್ರತೆಯಿಂದ ಓದಿದರು. ಆಂಗ್ಲರು ‘೧೮೫೭ ರ ಸ್ವಾತಂತ್ರ್ಯ ಹೋರಾಟ’ ಈ ವಿಷಯದ ಮೇಲೆ ಬಹಳಷ್ಟು ಸಾಹಿತ್ಯವನ್ನು ನಿರ್ಮಾಣ ಮಾಡಿರುವುದು ಸಾವರಕರರ ಗಮನಕ್ಕೆ ಬಂದಿತು. ಈ ಎಲ್ಲಾ ಸಾಹಿತ್ಯವನ್ನು ಸಂಗ್ರಹಿಸಿ ಅದನ್ನು ಓದುವ ಬಯಕೆ ಯನ್ನು ಸಾವರಕರರು ಮುಖರ್ಜಿಯವರಲ್ಲಿ ವ್ಯಕ್ತಪಡಿಸಿದರು. ಅವರು ಈ ಎಲ್ಲ ಸಾಹಿತ್ಯಗಳು ”ಇಂಡಿಯಾ ಆಫೀಸ್’ನ ಗ್ರಂಥಾಲಯದಲ್ಲಿ ಲಭ್ಯವಿದೆ’’ ಎಂದು ಹೇಳಿ ಸಾವರಕರರಿಗೆ ಅಲ್ಲಿ ಕುಳಿತುಕೊಂಡು ಎಲ್ಲಾ ಸಾಹಿತ್ಯವನ್ನು ಓದಲು ಮತ್ತು ಟಿಪ್ಪಣಿ ಮಾಡಿಕೊಳ್ಳಲು ಅನುಮತಿ ನೀಡಿದರು. ಇದರಿಂದ ಸಾವರಕರರಿಗೆ ‘ಇಂಡಿಯಾ ಆಫೀಸ್’ನ ಗ್ರಂಥಾಲಯದಲ್ಲಿ ಕುಳಿತು ಎಲ್ಲಾ ಪ್ರಮುಖ ದಾಖಲೆಗಳನ್ನು ಓದಲು ಸಾಧ್ಯವಾಯಿತು. ಆ ಗ್ರಂಥಾಲಯದ ಗ್ರಂಥಪಾಲಕರು ೧೮೫೭ ರ ಸಂಗ್ರಾಮದ ಸಾಹಿತ್ಯವಿರುವ ಒಂದು ಸ್ವತಂತ್ರ ಕೋಣೆಗೆ ಸಾವರಕರರನ್ನು ಕರೆದೊಯ್ದರು. ಅಲ್ಲಿ ಕುಳಿತು, ಎಲ್ಲಾ ಪುಸ್ತಕಗಳನ್ನು, ಮೂಲ ಕಾಗದಪತ್ರಗಳನ್ನು ಅಭ್ಯಾಸ ಮಾಡಲು ಪೂರ್ಣ ಸ್ವಾತಂತ್ರ್ಯವನ್ನು ನೀಡಿದರು. ಗ್ರಂಥಪಾಲಕನು ಸಾವರಕರ ಇವರಿಗೆ ೧೮೫೭ ರ ಸಂದರ್ಭದಲ್ಲಿನ ಎಲ್ಲ ಫೈಲ್ಗಳು ಮತ್ತು ಕಾಗದಪತ್ರಗಳನ್ನು ಒದಗಿಸಿಕೊಟ್ಟನು. ಸಾವರಕರರ ಅಧ್ಯಯನ ವೃತ್ತಿಯನ್ನು ನೋಡಿ ಆ ಗ್ರಂಥಪಾಲಕರು ಅವರೊಂದಿಗೆ ೧೮೫೭ ರ ಯುದ್ಧದ ಬಗ್ಗೆ ಚರ್ಚಿಸಲು ಪ್ರಾರಂಭಿಸಿದರು.

೧. ‘೧೮೫೭ರ ಸ್ವಾತಂತ್ರ್ಯ ಸಮರ’ದ ಲೇಖನವು ಪೂರ್ಣಗೊಳ್ಳಬಾರದೆಂದು ಬ್ರಿಟಿಷರು ಅಡಚಣೆಗಳನ್ನು ನಿರ್ಮಿಸುವುದು
‘೧೮೫೭ ರ ಸ್ವಾತಂತ್ರ್ಯಸಮರ’ ಈ ಗ್ರಂಥವನ್ನು ಬರೆಯುವಾಗ, ಸಾವರಕರರು ಅದರಲ್ಲಿನ ಘಟನೆಗಳ ಬಗ್ಗೆ ಶತ್ರುಗಳ ಶಿಬಿರದಲ್ಲಿಯೇ ಅಂದರೆ ಲಂಡನ್ ನಲ್ಲಿಯೇ ಘಟನೆಗಳ ಕುರಿತು ಭಾಷಣಗಳನ್ನು ಮಾಡಲು ಪ್ರಾರಂಭಿಸಿದರು. ಈ ಮಾಹಿತಿಯು ಗುಪ್ತಚರರಿಂದ ಸರಕಾರಕ್ಕೆ ತಿಳಿದಾಗ, ‘ಇಂಡಿಯಾ ಹೌಸ’ ಗ್ರಂಥಾಲಯದಲ್ಲಿ ಸಾವರಕರರಿಗೆ ಪ್ರವೇಶ ನೀಡಲು ನಿರ್ಬಂಧ ಹಾಕಿದರು. ಹೀಗಿದ್ದರೂ ಸಾವರಕರರಿಗೆ ಅದರ ಬಗ್ಗೆ ಚಿಂತೆಯಿರಲಿಲ್ಲ; ಏಕೆಂದರೆ ಅಲ್ಲಿಯವರೆಗೆ ಅವರ ಗ್ರಂಥವನ್ನು ಬರೆದು ಮುಗಿದಿತ್ತು. ‘೧೮೫೭ರ ಸ್ವಾತಂತ್ರ್ಯಸಮರ’ ಈ ಗ್ರಂಥ ಎಪ್ರಿಲ್ ೧೯೦೮ ರಲ್ಲಿ ಬರೆದು ಪೂರ್ಣವಾಯಿತು. ಆಂಗ್ಲರ ರಾಜಧಾನಿಯಲ್ಲಿ ಸಾವರಕರರು ಮರಾಠಿ ಭಾಷೆಯಲ್ಲಿ ಗ್ರಂಥವನ್ನು ಬರೆದರು. ಈ ಗ್ರಂಥದಲ್ಲಿನ ಒಂದೆರಡು ಪ್ರಕರಣಗಳು ಕಳ್ಳತನವಾಗಿದ್ದವು. ಇದು ಸ್ಕಾಟ್ಲೆಂಡ್ ಯಾರ್ಡನ ಕೈಚಳಕವಾಗಿತ್ತು. ಇದಕ್ಕಾಗಿ ಸ್ಕಾಟ್ಲೆಂಡ ಯಾರ್ಡ ಕೀರ್ತಿಕರ್ ಹೆಸರಿನ ಓರ್ವ ಮರಾಠಿ ಭಾಷಿಕ ಯುವಕನ ಸಹಾಯವನ್ನು ಪಡೆದುಕೊಂಡಿತ್ತು.
೨. ಹಿಂದುಸ್ಥಾನ, ಪ್ಯಾರಿಸ್ ಮತ್ತು ಜರ್ಮನಿಯಲ್ಲಿ ಗ್ರಂಥಗಳನ್ನು ಪ್ರಕಟಿಸಲು ಮಾಡಿದ ಪ್ರಯತ್ನ ಮತ್ತು ಎದುರಿಸಿದ ತೊಂದರೆಗಳು
ಏನೇ ಆದರೂ, ಈ ಗ್ರಂಥದ ಪ್ರತಿಯು ಪೊಲೀಸರು ಅಥವಾ ಗೂಢಚಾರರಿಗೆ ಸಿಗಬಾರದು ಎಂದು ಅತೀ ದಕ್ಷತೆಯಿಂದ ಹಿಂದುಸ್ಥಾನಕ್ಕೆ ಕಳುಹಿಸಲಾಯಿತು. ಸಾವರಕರರು ‘ಅಭಿನವ ಭಾರತ’ದ ಸದಸ್ಯರಾಗಿದ್ದ ಲಿಮಯೆ ಇವರ ಸೊಲ್ಲಾಪುರದ ಮುದ್ರಣಾಲಯದಲ್ಲಿ ಈ ಪುಸ್ತಕವನ್ನು ಮುದ್ರಣಕ್ಕಾಗಿ ತಮ್ಮ ಹಿರಿಯ ಸಹೋದರ ಬಾಬಾರಾವ ಇವರನ್ನು ಕಳುಹಿಸಿದರು. ಲಿಮಯೆ ಇವರ ಮುದ್ರಣಾಲಯದಲ್ಲಿ ಸಾವರಕರರ ಗ್ರಂಥ ಮುದ್ರಣಗೊಳ್ಳುತ್ತಿರುವ ಸುಳಿವು ಪೊಲೀಸರಿಗೆ ಸಿಕ್ಕಿತು. ಪೊಲೀಸರು ಅವರ ಮುದ್ರಣಾಲಯದ ಮೇಲೆ ದಾಳಿ ನಡೆಸಲು ನಿರ್ಧರಿಸಿದರು. ಪೊಲೀಸ್ ಇಲಾಖೆಯಲ್ಲಿದ್ದ ದೇಶಭಕ್ತ ಪೋಲೀಸ್ ಅಧಿಕಾರಿಯೊಬ್ಬರು ಲಿಮಯೆ ಅವರನ್ನು ಸಂಪರ್ಕಿಸಿ ಪೊಲೀಸರು ದಾಳಿ ನಡೆಸಲು ಬರುವವರಿದ್ದಾರೆ ಎಂದು ಹೇಳಿದರು. ಇದರಿಂದ ಲಿಮಯೆ ಜಾಗರೂಕರಾದರು. ಅವರು ಆ ಗ್ರಂಥವನ್ನು ಬಹಳ ರಹಸ್ಯವಾಗಿ ಮತ್ತು ತಕ್ಷಣವೇ ಬಾಬಾರಾವ ಅವರಿಗೆ ತಲುಪುವ ವ್ಯವಸ್ಥೆ ಮಾಡಿದರು. ಕೊನೆಗೆ ಆ ಗ್ರಂಥದ ಕೈಬರಹದ ಪ್ರತಿಯನ್ನು ಪ್ಯಾರಿಸ್ಗೆ ಕಳುಹಿಸಲಾಯಿತು. ಹಿಂದುಸ್ಥಾನದಲ್ಲಿ ಈ ಪುಸ್ತಕವನ್ನು ಪ್ರಕಟಿಸಲು ಸಾಧ್ಯವಿರಲಿಲ್ಲ; ಅದಕ್ಕಾಗಿಯೇ ಆ ಪುಸ್ತಕವನ್ನು ಜರ್ಮನಿಯಲ್ಲಿ ಮುದ್ರಿಸಲು ಪ್ರಯತ್ನಿಸಲಾಯಿತು; ಏಕೆಂದರೆ ಜರ್ಮನಿಯಲ್ಲಿ ಆ ಸಮಯದಲ್ಲಿ ಸಂಸ್ಕ್ರತ ಸಾಹಿತ್ಯವನ್ನು ಮುದ್ರಿಸಲಾಗುತ್ತಿತ್ತು; ಆದರೆ ಅಲ್ಲಿಯೂ ಅದನ್ನು ಮುದ್ರಿಸಲು ಸಾಧ್ಯವಾಗಲಿಲ್ಲ.

೩. ‘೧೮೫೭ರ ಸ್ವಾತಂತ್ರ್ಯಸಮರ’ ಪುಸ್ತಕವನ್ನು ಹಾಲೆಂಡ್ನಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಯಿತು.
ಈ ಗ್ರಂಥವನ್ನು ಆಂಗ್ಲಭಾಷೆಯಲ್ಲಿ ಅನುವಾದಿಸಲು ನಿರ್ಧರಿಸಲಾಯಿತು. ಆ ಕೆಲಸವನ್ನು ಹರಿಶ್ಚಂದ್ರ ಕೋರೆಗಾಂವಕರ, ಫಡಕೆ, ಕುಂಟೆ ಮತ್ತು ಸಾವರಕರ ಇವರು ಮಾಡಿದರು. ಆಂಗ್ಲಭಾಷೆಯಲ್ಲಿ ಅನುವಾದಿಸಿರುವ ಈ ಪುಸ್ತಕವನ್ನು ಇಂಗ್ಲೆಂಡಿನಲ್ಲಿ ಪ್ರಕಟಿಸುವುದು ಸಾಧ್ಯವೇ ಇರಲಿಲ್ಲ; ಆದ್ದರಿಂದ ಆ ಗ್ರಂಥವನ್ನು ಹಾಲೆಂಡಿ ನಲ್ಲಿ ಮುದ್ರಿಸಲಾಯಿತು. ಆ ಗ್ರಂಥದ ಪ್ರತಿಗಳನ್ನು ಬ್ಯಾರಿಸ್ಟರ ಸರದಾರ ಸಿಂಗ ರಾಣಾ ಇವರ ಮನೆಯಲ್ಲಿ ಇಡಲಾಯಿತು. ಈ ಗ್ರಂಥದ ಮುದ್ರಣದ ವೆಚ್ಚವನ್ನು ದಾದಾರಾವ ಕರಂದೀಕರ ಮತ್ತು ದಾದಾಸಾಹೇಬ ಖಾಪರ್ಡೆ ಈ ಇಬ್ಬರೂ ಸ್ವೈಚ್ಛೆಯಿಂದ ಭರಿಸಿದ್ದರು. ಈ ಗ್ರಂಥದ ನೂರಾರು ಪ್ರತಿಗಳನ್ನು ‘ಪಿಕ್ವಿಕ್ ಪೇಪರ್ಸ್’, ‘ಸ್ಕಾಚ್ ವರ್ಕ್ಸ್’, ‘ಡಾನ್ ಕ್ವಿಕ ಝೋಟ’ ಈ ಪುಸ್ತಕಗಳ ಮುಖಪುಟವನ್ನು ಹಚ್ಚಿ ಹಿಂದುಸ್ಥಾನಕ್ಕೆ ಕಳುಹಿಸಲಾಯಿತು.
೪. ‘೧೮೫೭ ರ ಸ್ವಾತಂತ್ರಸಮರ’ ಈ ಗ್ರಂಥದ ಮೇಲೆ ಬ್ರಿಟಿಷ್ ಸರಕಾರ ಹಿಂದುಸ್ಥಾನದಲ್ಲಿ ನಿರ್ಬಂಧ ಹೇರಿತು
ಸ್ವಾತಂತ್ರ್ಯಪೂರ್ವ ಕಾಲದಲ್ಲಿ, ಪಂಜಾಬಿನ ಮುಖ್ಯಮಂತ್ರಿ ಮತ್ತು ಲೀಗ್ನ ನಾಯಕ ಸರ್ ಶಿಕಂದರ್ ಹಯಾತಖಾನ ಅವರು ಆ ಸಮಯದಲ್ಲಿ ಅಭಿನವ ಭಾರತದ ಸದಸ್ಯರಾಗಿದ್ದರು. ಅವರು ಹಿಂದುಸ್ಥಾನಕ್ಕೆ ಮರಳಿ ಬರುವಾಗ ತಮ್ಮೊಂದಿಗೆ ಈ ಗ್ರಂಥದ ಒಂದು ಬಂಡಲ್ (ಗಂಟನ್ನು) ತಂದರು. ಈ ಗ್ರಂಥದ ಮುದ್ರಣದ ಮತ್ತು ಪ್ರಸಾರದ ಸುದ್ದಿ ಹಿಂದುಸ್ಥಾನದ ಬ್ರಿಟಿಷ ಸರಕಾರದ ಗಮನಕ್ಕೆ ಬರುತ್ತಲೇ ಅದನ್ನು ನಿರ್ಬಂಧಿಸಲಾಯಿತು. ಸಾವರಕರ ಇವರಿಗೆ ಇದು ತಿಳಿಯುತ್ತಲೇ ಅವರು ‘ಲಂಡನ ಟೈಮ್ಸ’ ಗೆ ಪತ್ರ ಬರೆದು ಸ್ವಯಂಪ್ರೇರಿತ ಖಂಡನೆಯನ್ನು ದಾಖಲಿಸಿದರು. ಸಾವರಕರರ ಪತ್ರ ‘ಲಂಡನ ಟೈಮ್ಸ’ ಮುದ್ರಿಸಿತು; ಆದರೆ ಸಾವರಕರ ಮೇಲೆ ಟೀಕಿಸಿತು. ಮುಂದೆ ಈ ಪುಸ್ತಕವನ್ನು ಮರಾಠಿ, ಗುಜರಾತಿ, ಮಲಯಾಳಿ, ತಮಿಳು, ತೆಲುಗು, ಉರ್ದು, ಫ್ರೆಂಚ, ಜರ್ಮನ, ಸಂಸ್ಕೃತ ಹೀಗೆ ಅನೇಕ ಭಾಷೆಯಲ್ಲಿ ಅನುವಾದಿಸಲಾಯಿತು.
೫. ಸ್ವಾತಂತ್ರ್ಯವೀರ ಸಾವರಕರರು ೧೮೫೭ ರ ಗ್ರಂಥಕ್ಕೆ ದೇವಕಿಯ ಕೃಷ್ಣಾನ ಉಪಮೆಯನ್ನು ನೀಡುವುದು
ಸ್ವಾತಂತ್ರ್ಯವೀರ ಸಾವರಕರ ಸ್ವತಃ ತಮ್ಮ ಗ್ರಂಥ ಮತ್ತು ಲೇಖನಿಯ ವಿಷಯದಲ್ಲಿ ಹೇಳುತ್ತಾರೆ, ‘ವಿನಾಯಕನ ಲೇಖನೀಯ ಸ್ಥಿತಿಯು ದೇವಕಿಯ ಗರ್ಭದ ಹಾಗೆ ಕರುಣಾಜನಕ ವಾಗಿದೆ’. ದೇವಕಿಯ ಹೊಟ್ಟೆಯಲ್ಲಿ ಹುಟ್ಟಿದ ಪ್ರತಿಯೊಂದು ಮಗುವು ಕಂಸನಿಂದ ಕೊಲ್ಲಲ್ಪಟ್ಟಿತು. ಸಾವರಕರರ ಪ್ರತಿಯೊಂದು ವಿಷಯವನ್ನೂ ವಿರೋಧಿಸಲಾಯಿತು. ಇಂದಿಗೂ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ವಿರೋಧಿಸಲಾಗುತ್ತಿದೆ.
ದೇವಕಿಯ ಎಂಟನೇ ಪುತ್ರ ಶ್ರೀಕೃಷ್ಣನು ಅನೇಕ ಸ್ಫೂರ್ತಿ ಮತ್ತು ಮುಕ್ತಿ ದಾತನಾದನು. ಅದೇ ರೀತಿ ೧೮೫೭ ರ ಸಾವರಕರರು ಬರೆದ ಗ್ರಂಥಗಳು ಬ್ರಿಟಿಷ್ ಸಾಮ್ರಾಜ್ಯದ ಹಿಡಿತದಿಂದ ತಪ್ಪಿಸಿಕೊಂಡವು ಮತ್ತು ವಿದೇಶದಲ್ಲಿ ಬೆಳೆದವು. ಈ ಗ್ರಂಥವು ಅನೇಕ ಜನರಿಗೆ ಪ್ರೇರಣೆ ನೀಡಿತು. ಶ್ರೀಕೃಷ್ಣನು ಕಂಸನ ಕಾರಾಗೃಹದಿಂದ ತಪ್ಪಿಸಿಕೊಂಡನು, ಗೋಕುಲದಲ್ಲಿ ಬೆಳೆದನು ಮತ್ತು ವಿಶ್ವಕ್ಕೆ ಪ್ರೇರಣೆ ನೀಡುವಂತಹವನಾದನು.
೬. ಡಾ. ಕುಟಿನ್ಹೋ ಅವರು ‘೧೮೫೭ ರ ಸ್ವಾತಂತ್ರ್ಯ ಸಮರ’ ಪುಸ್ತಕದ ಕೈಬರಹದ ಮರಾಠಿ ಹಸ್ತಪ್ರತಿಯನ್ನು ತಮ್ಮಲ್ಲಿ ಸಂರಕ್ಷಿಸಿಟ್ಟುಕೊಳ್ಳುವುದು
ಸಾವರಕರ ಅವರು ಬರೆದ ಈ ಪುಸ್ತಕದ ಮರಾಠಿ ಕೈಬರಹದ ಪ್ರತಿಯನ್ನು ಸಾವರಕರ ಅವರ ‘ಅಭಿನವ ಭಾರತದ ಸಹಾಯಕರಾಗಿದ್ದ ಗೋವಾದಲ್ಲಿ ವಾಸಿಸುತ್ತಿದ್ದ ಡಾ. ಕುಟಿನ್ಹೋ ಅವರ ಬಳಿಯಿತ್ತು. ಇವರು ಮೂಲತಃ ಹಿಂದೂ ಆಗಿದ್ದರು. ಆದರೆ ಅವರನ್ನು ಬಲವಂತವಾಗಿ ಮತಾಂತರಗೊಳಿಸಲಾಯಿತು. ಅವರು ಕ್ರೈಸ್ತರಾದರು; ಆದರೆ ತಮ್ಮ ಧರ್ಮದೊಂದಿಗೆ ಮತ್ತು ರಾಷ್ಟ್ರದೊಂದಿಗೆ ಏಕನಿಷ್ಠರಾಗಿದ್ದರು. ಅವರು ಆ ಪ್ರತಿಯನ್ನು ಜೀವಕ್ಕಿಂತ ಹೆಚ್ಚಾಗಿ ರಕ್ಷಿಸಿದರು. ಇಂಗ್ಲೆಂಡಿನಲ್ಲಿ ರಾಜಕೀಯ ವಾತಾವರಣ ಹದಗೆಟ್ಟಿತು. ಸಾವರಕರ ಅವರ ಬಂಧನವಾಗಿ ಮುಂದೆ ಅವರು ಅಂಡಮಾನಗೆ ೨ ಕಾಲಾವಧಿಗಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಲು ಹೋದರು. ಡಾ. ಕುಟನ್ಹೊ ಇವರಿಗೆ ಇಂಗ್ಲೆಂಡಿನಲ್ಲಿ ಉಳಿಯುವುದು ಅಸಾಧ್ಯವಾಗಿತ್ತು. ಅವರು ವಿವಿಧ ದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದರು; ಆದರೆ ಅವರು ಸಾವರಕರ್ ಅವರ ‘೧೮೫೭ ರ ಸ್ವಾತಂತ್ರ್ಯ ಸಮರ’ ಪುಸ್ತಕದ ಕೈಬರಹದ ಪ್ರತಿಯನ್ನು ಅವರು ತಮ್ಮ ಬಳಿ ಇಟ್ಟುಕೊಂಡಿದ್ದರು. ನಂತರ ಅವರು ಅಮೇರಿಕದ ಖಾಯಂ ನಿವಾಸಿಯಾದರು. ದೇಶ ಸ್ವತಂತ್ರವಾದ ನಂತರ ೧೯೪೯ ರಲ್ಲಿ ಶ್ರೀ. ಸಾವರಕರ ಅವರ ಪುಸ್ತಕವನ್ನು ಗೊಹೊಕರ ಅವರ ಮೂಲಕ ಸಾವರಕರ ಇವರಿಗೆ ಕಳುಹಿಸಿದರು. ಈ ಐತಿಹಾಸಿಕ ಗ್ರಂಥವೇ ಇತಿಹಾಸವಾಗಿದೆ.
– ಶ್ರೀ. ದುರ್ಗೇಶ ಜಯವಂತ ಪರುಳಕರ, ಹಿಂದುತ್ವನಿಷ್ಠ ಉಪನ್ಯಾಸಕರು ಮತ್ತು ಬರಹಗಾರರು, ಡೊಂಬಿವಲಿ.