ಪಣಜಿ – ಗೋವಾದ ಶಿರಗಾಂವ್ನಲ್ಲಿರುವ ಶ್ರೀ ಲೈರಾದೇವಿಯ ಪ್ರಸಿದ್ಧ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ೬ ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು ೮೦ ಭಕ್ತರು ಗಾಯಗೊಂಡಿದ್ದಾರೆ. ಮೃತಪಟ್ಟವರ ಹೆಸರುಗಳು ಸೂರ್ಯ ಮಯೇಕರ್ (ಸಾಂಖಳಿ), ಆದಿತ್ಯ ಕವಠಣಕರ್ ಮತ್ತು ತನುಜಾ ಕವಠಣಕರ್ (ಅವಚಿತ್ವಾಡೊ, ಥಿವಿ); ಯಶವಂತ ಕೇರ್ಕರ್ (ಮಾಡೇಲ್, ಥಿವಿ), ಪ್ರತಿಭಾ ಕಳಂಗುಟ್ಕರ್ (ಕುಂಭಾರ್ಜುವೆ) ಮತ್ತು ಸಾಗರ್ ನಂದರಗೆ (ಮಾಠವಾಡ, ಪಿಳಗಾಂವ್). ಈ ದುರಂತದಲ್ಲಿ ಗಾಯಗೊಂಡ ಭಕ್ತರಿಗೆ ಗೋವಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು ೧೫ ಜನರು ಗಂಭೀರವಾಗಿ ಗಾಯಗೊಂಡಿದ್ದು, ಬಂಬೋಳಿಯ ಗೋವಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ೮ ಜನರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಮೇ ೩ ರಂದು ಮುಂಜಾನೆ ೩.೩೦ ರ ಸುಮಾರಿಗೆ ಸಂಭವಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಜನರನ್ನು ನಿಯಂತ್ರಿಸಲು ಪೊಲೀಸರು ಹಿಡಿದಿದ್ದ ಹಗ್ಗಕ್ಕೆ ಕೆಲವು ಭಕ್ತರ ಕಾಲು ಸಿಲುಕಿ ಅವರು ಕೆಳಗೆ ಬಿದ್ದರು. ನಂತರ ಬಂದ ಭಕ್ತರು ಅವರ ಮೇಲೆ ಬಿದ್ದಿದ್ದರಿಂದ ಉಸಿರುಗಟ್ಟಿ ಕೆಲವರು ಮೃತಪಟ್ಟರು.
ಶಿರಗಾಂವ್ನ ಘಟನೆ ಅತ್ಯಂತ ದುರದೃಷ್ಟಕರ! – ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್
ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದರು. ಶಿರಗಾಂವ್ನ ಘಟನೆ ಅತ್ಯಂತ ದುರದೃಷ್ಟಕರ ಎಂದು ಹೇಳಿದ ಅವರು ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು, ಹಾಗೆಯೇ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಕ್ತರ ಯೋಗಕ್ಷೇಮ ವಿಚಾರಿಸಿದರು. ಮುಂದಿನ ೩ ದಿನಗಳ ಕಾಲ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಈ ದುರಂತದ ತನಿಖೆಯನ್ನು ಗೋವಾದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸಂತಾಪ !
ಗೋವಾದ ಶಿರಗಾಂವ್ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ಕೆಲವರು ಮೃತಪಟ್ಟಿರುವ ವಿಷಯ ತಿಳಿದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. ‘ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಈ ದುರಂತದಿಂದ ತೊಂದರೆಗೊಳಗಾದವರಿಗೆ ಸ್ಥಳೀಯ ಆಡಳಿತ ಸಹಾಯ ಮಾಡುತ್ತಿದೆ’ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.