Nitish Rane : ದೇಶದಲ್ಲಿ ಪಾಕಿಸ್ತಾನ ಪ್ರೇಮಿಗಳಿಗೆ ಒಂದು ಇಂಚು ಜಾಗವೂ ನೀಡಲ್ಲ! – ನಿತೇಶ್ ರಾಣೆ, ಮೀನುಗಾರಿಕೆ ಸಚಿವ, ಮಹಾರಾಷ್ಟ್ರ

ಮುಂಬಯಿ, ಏಪ್ರಿಲ್ ೨೮ (ವಾರ್ತೆ) – ಪಾಕಿಸ್ತಾನದ ಮೇಲೆ ಪ್ರೀತಿ ಇರುವವರು ಅಲ್ಲಿಗೆ ಹೋಗಬೇಕು. ಹಿಂದೂ ಹೆಸರು ಧರಿಸಿ ಯಾರಾದರೂ ಪಾಕಿಸ್ತಾನಿಗಳು ಭಾರತದಲ್ಲಿ ಉಳಿದರೆ, ಅವರ ಕಾಲು ಮುರಿದು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಪಾಕಿಸ್ತಾನ ಪ್ರೇಮಿಗಳಿಗೆ ಭಾರತದಲ್ಲಿ ವಾಸಿಸುವ ಹಕ್ಕಿಲ್ಲ. ಮಹಾರಾಷ್ಟ್ರ ಮತ್ತು ದೇಶದಲ್ಲಿ ಪಾಕಿಸ್ತಾನ ಪ್ರೇಮಿಗಳಿಗೆ ಒಂದು ಇಂಚು ಜಾಗವೂ ಇಲ್ಲ ಎಂದು ಮಹಾರಾಷ್ಟ್ರದ ಮೀನುಗಾರಿಕೆ ಸಚಿವ ನಿತೇಶ ರಾಣೆ ಏಪ್ರಿಲ್ ೨೮ ರಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಕೆಲವು ಮುಸ್ಲಿಮರ ಮೇಲೆ ಅನಗತ್ಯವಾಗಿ ಹಲ್ಲೆ ಮಾಡಿದ ಘಟನೆಗಳ ವಿರುದ್ಧ ಸಮಾಜವಾದಿ ಪಕ್ಷದ ವತಿಯಿಂದ ಅಬು ಆಜ್ಮಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ನಿತೇಶ್ ರಾಣೆ ಪ್ರತಿಕ್ರಿಯಿಸಿ, “ಪಹಲ್ಗಾಮ್ ಘಟನೆಯಿಂದ ಸಾಮಾನ್ಯ ಜನರ ಮನಸ್ಸಿನಲ್ಲಿ ಆಕ್ರೋಶವಿದೆ. ಸಾಮಾನ್ಯ ಜನರ ಭಾವನೆಗಳು ತೀವ್ರವಾಗಿವೆ. ಅಬು ಆಜ್ಮಿಯಂತಹ ಮುಸ್ಲಿಂ ನಾಯಕರು ಔರಂಗಜೇಬನಂತಹ ಜಿಹಾದಿಗಳ ವೈಭವೀಕರಣ ಮಾಡಿದ್ದರ ಪರಿಣಾಮವನ್ನು ಎಲ್ಲಾ ಮುಸ್ಲಿಮರು ಅನುಭವಿಸುತ್ತಿದ್ದಾರೆ. ಅವರು ಏನು ಬಿತ್ತಿದ್ದಾರೋ ಅದೇ ಈಗ ಬೆಳೆಯುತ್ತಿದೆ. ಅಬು ಆಜ್ಮಿಯಂತಹ ಮುಸ್ಲಿಂ ನಾಯಕರ ಕರ್ಮದ ಫಲ ಇದು” ಎಂದರು.

ಶಿವಸೇನೆಯ ಗೃಹ ರಾಜ್ಯ ಸಚಿವ ಯೋಗೇಶ ಕದಂ ಅವರು ನಿತೇಶ ರಾಣೆ ಅವರ ಕುರಿತು ಮಾಡಿದ ಟೀಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿತೇಶ ರಾಣೆ ಅವರು, “ನಮ್ಮ ಸರಕಾರ ಹಿಂದುತ್ವದ ವಿಚಾರಗಳನ್ನು ಹೊಂದಿದೆ. ಶಿವಸೇನೆ ಅಥವಾ ಭಾಜಪ ಈ ಹಿಂದುತ್ವವಾದಿ ಪಕ್ಷಗಳು ಪರಸ್ಪರ ಹೋರಾಡಬಾರದು. ಜಿಹಾದಿಗಳಿಗೆ ಇದೇ ಬೇಕಾಗಿದೆ. ನಮ್ಮ ಹೋರಾಟ ಜಿಹಾದಿಗಳ ವಿರುದ್ಧವಾಗಿದೆ. ಹಿಂದೂಗಳು ಪಕ್ಷ, ಧ್ವಜಗಳಲ್ಲಿ ಸಿಲುಕಿಕೊಳ್ಳದೆ ‘ಹಿಂದೂ’ ಗಳಾಗಿ ಒಟ್ಟಾಗಿರಬೇಕು” ಎಂದರು.

ಮಹಾರಾಷ್ಟ್ರದಲ್ಲಿ ಪಾಕಿಸ್ತಾನದ ಧ್ವಜದ ಮೇಲೆ ಕಾಲಿಟ್ಟಿದ್ದರಿಂದ ಮುಸ್ಲಿಮರು ಗಲಭೆ ನಡೆಸಿದರು ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವ ನಿತೇಶ್ ರಾಣೆ ಅವರು, “ಪಾಕಿಸ್ತಾನದ ಧ್ವಜದ ಮೇಲೆ ಕಾಲಿಟ್ಟಾಗ ಯಾರಾದರೂ ಕೋಪಗೊಂಡರೆ ಅವರು ಪಾಕಿಸ್ತಾನಕ್ಕೆ ಹೋಗಬೇಕು. ಜಿಹಾದಿಗಳ ಸ್ಥಳ ಪಾಕಿಸ್ತಾನದಲ್ಲಿದೆ. ನಮ್ಮ ದೇಶ ನಮಗೆ ದೊಡ್ಡದು” ಎಂದರು.

ಭಯೋತ್ಪಾದಕರು ಮತ್ತು ಕಾಂಗ್ರೆಸ್‌ನ ‘ಡಿಎನ್ಎ’ ಒಂದೇ!

ಕಾಂಗ್ರೆಸ್ ನಾಯಕ ವಿಜಯ್ ವಡೇಟ್ಟಿ ವಾರ್ ಅವರು “ಧರ್ಮ ಕೇಳಿ ಗುಂಡು ಹಾರಿಸಲು ಭಯೋತ್ಪಾದಕರಿಗೆ ಸಮಯ ಎಲ್ಲಿರುತ್ತದೆ? ಭಯೋತ್ಪಾದನೆಗೆ ಧರ್ಮವಿಲ್ಲ” ಎಂಬ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ನಿತೇಶ್ ರಾಣೆ ಅವರು, “ಈ ಹಿಂದೆ ಕಾಂಗ್ರೆಸ್ ನಾಯಕರು ‘ಕೇಸರಿ ಭಯೋತ್ಪಾದನೆ’ ಎಂದು ಆರೋಪಿಸಿದ್ದರು. ಈಗ ಅವರು ‘ಭಯೋತ್ಪಾದನೆಗೆ ಬಣ್ಣವಿಲ್ಲ’ ಎಂದು ಯಾವ ಮುಖ ಇಟ್ಟುಕೊಂಡು ಹೇಳುತ್ತಿದ್ದಾರೆ. ಭಯೋತ್ಪಾದನೆಯ ಬಣ್ಣ ಹಸಿರು ಮತ್ತು ಕಾಂಗ್ರೆಸ್‌ನ ಬಣ್ಣವೂ ಹಸಿರು. ಕಾಂಗ್ರೆಸ್ ನಾಯಕರ ಭಾಷೆ ಪಾಕಿಸ್ತಾನ ಪ್ರೇಮಿಗಳ ಭಾಷೆ. ಭಯೋತ್ಪಾದಕರು ಮತ್ತು ಕಾಂಗ್ರೆಸ್‌ನ ‘ಡಿಎನ್ಎ’ ಒಂದೇ” ಎಂದರು.

ಹಿಂದೂ ರಾಷ್ಟ್ರ ಸ್ಥಾಪನೆಗೆ ಹಿಂದೂಗಳ ಶೌರ್ಯದ ಇತಿಹಾಸ ಕಲಿಸಬೇಕು!

‘ಎನ್‌ಸಿಇಆರ್‌ಟಿ’ ಪಠ್ಯಕ್ರಮದಿಂದ ಮೊಘಲರ ಪಠ್ಯಕ್ರಮವನ್ನು ತೆಗೆದುಹಾಕುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿತೇಶ್ ರಾಣೆ ಅವರು, “ಮೊಘಲರ ಇತಿಹಾಸವನ್ನು ಅಳಿಸಿಹಾಕುವುದು ಒಳ್ಳೆಯದು. ನಮ್ಮ ಯುವಕರಿಗೆ ಮೊಘಲರ ಇತಿಹಾಸವಲ್ಲ, ಭಾರತೀಯ ಸಂಸ್ಕೃತಿಯ ಆಧಾರಿತ ಇತಿಹಾಸವನ್ನು ಕಲಿಸಬೇಕು. ಹಿಂದೂ ರಾಷ್ಟ್ರ ಸ್ಥಾಪನೆಗೆ ಹಿಂದೂಗಳ ಶೌರ್ಯದ ಇತಿಹಾಸವನ್ನು ಕಲಿಸಬೇಕು” ಎಂದರು.