ಶೃಂಗೇರಿ ನಂತರ ಹೊರನಾಡಲ್ಲೂ ವಸ್ತ್ರಸಂಹಿತೆ (ಡ್ರೆಸ್‌ಕೋಡ್) ಜಾರಿ !

ದೇವಿಯ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಅನಿವಾರ್ಯ

ಮಂಗಳೂರು – ಶೃಂಗೇರಿಯಲ್ಲಿ ವಸ್ತ್ರಸಂಹಿತೆ ಜಾರಿಯಾದ ಬಳಿಕ ಈಗ ಹೊರನಾಡಲ್ಲೂ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ತಾಯಿ ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವುದು ಅನಿವಾರ್ಯಗೊಳಿಸಲಾಗಿದೆ.

ದೇವಾಲಯದ ಆಡಳಿತ ಮಂಡಳಿಯು, ಪುರುಷರು ಶಲ್ಯ, ಪ್ಯಾಂಟ್, ಪಂಚೆ ಧರಿಸಬೇಕು ಹಾಗೂ ಮಹಿಳೆಯರು ಸೀರೆ ಹಾಗೂ ಚೂಡಿದಾರ ಧರಿಸಬೇಕು ಎಂದು ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿದವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಎಂದು ಆಡಳಿತ ಮಂಡಳಿ ಸೂಚನೆ ನೀಡಿದೆ. ಹಾಗಾಗಿ ಭಕ್ತರು ಆದೇಶವನ್ನು ಪಾಲಿಸುವಂತೆ ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ.

ಶೃಂಗೇರಿ ಶಕ್ತಿ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿ; ಇನ್ನು ಸಾತ್ತ್ವಿಕ ಉಡುಪನ್ನೇ ಧರಿಸಿ ಹೋಗಬೇಕು !

ಶೃಂಗೇರಿ ಶಾರದಾ ಪೀಠದಲ್ಲಿ ಈಗ ವಸ್ತ್ರ ಸಂಹಿತೆ ಜಾರಿಯಾಗಿದೆ. ಹಾಗಾಗಿ ದೇವಸ್ಥಾನಕ್ಕೆ ಬರುವವರು ಇನ್ನು ತುಂಡುಡುಗೆ ತೊಟ್ಟು ಬರುವಂತಿಲ್ಲ. ಆಗಸ್ಟ್ 15 ರಿಂದ ಈ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದ್ದು, ಇದನ್ನು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಸ್ವಾಗತಿಸುತ್ತದೆ. ಮಹಾಸಂಘವು ಕಳೆದ 6 ತಿಂಗಳಿನಿಂದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯ ಅಭಿಯಾವನ್ನು ಹಮ್ಮಿಕೊಂಡಿದ್ದು ಈಗಾಗಲೇ ರಾಜ್ಯದ 250 ದೇವಸ್ಥಾನಗಳು ಮತ್ತು ರಾಷ್ಟ್ರದ 700 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ.