ಮಣಿಪುರದ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್ ನಲ್ಲಿನ ಭಯೋತ್ಪಾದಕ ಸಂಘಟನೆಗಳ ಕೈವಾಡ ! – ರಾಷ್ಟ್ರೀಯ ತನಿಖಾ ದಳದ ಮಾಹಿತಿ

ಇಂಫಾಲ (ಮಣಿಪುರ) – ಮಣಿಪುರದಲ್ಲಿ ಕಳೆದ 4 ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್‌ನ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ದಳವು ಬಹಿರಂಗಪಡಿಸಿದೆ. ಈ ಸಂಘಟನೆಗಳು ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ಹಿಂದೂ ಮೈತೆಯಿ ಸಮಾಜದ ಮೇಲೆ ದಾಳಿ ಮಾಡಲು ಭಯೋತ್ಪಾದಕರನ್ನು ನೇಮಿಸಿಕೊಳ್ಳುತ್ತಿವೆ. ಮಣಿಪುರದಲ್ಲಿ 4 ತಿಂಗಳ ಹಿಂಸಾಚಾರದಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಾಗೆಯೇ ನೂರಾರು ಮನೆಗಳು ಸುಟ್ಟುಹಾಕಲಾಗಿದೆ. ಸಾವಿರಾರು ಜನರು ಪಲಾಯನ ಮಾಡಬೇಕಾಯಿತು. ನೂರಾರು ಆಶ್ರಯ ತಾಣಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆದಿದ್ದಾರೆ. ಇಲ್ಲಿಯ ಇಂಟರನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಮಣಿಪುರದಲ್ಲಿ ಅಶಾಂತಿಗಾಗಿ ಷಡ್ಯಂತ್ರ !

ರಾಷ್ಟ್ರೀಯ ತನಿಖಾ ದಳ ನಡೆಸಿರುವ ತನಿಖೆಯಿಂದ, ಬಾಂಗ್ಲಾದೇಶ ಮತ್ತು ಮ್ಯಾನಮಾರನಲ್ಲಿನ ಭಯೋತ್ಪಾದಕ ಸಂಘಟನೆಗಳು ಭಾರತ ಸರಕಾರದ ವಿರುದ್ಧ ಯುದ್ಧ ಮಾಡುವ ಉದ್ದೇಶದಿಂದ ವಿವಿಧ ಗುಂಪುಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇದಕ್ಕಾಗಿ ಅವರು ಭಾರತದ ಕಟ್ಟರವಾದಿ ನಾಯಕರ ಜೊತೆ ಸೇರಿ ಷಡ್ಯಂತ್ರ ರೂಪಿಸಿದ್ದಾರೆ. ಅವರು ಯಾವುದೇ ಪರಿಸ್ಥಿತಿಯಲ್ಲಿಯೂ ಮಣಿಪುರ ಶಾಂತಿ ನೆಲೆಸಲು ಬಿಡುವುದಿಲ್ಲ.

ಭಾರತದ ಇತರ ಭಯೋತ್ಪಾದಕ ಸಂಘಟನೆಗಳಿಗೆ ನೆರವು ಸಿಗುತ್ತಿದೆ !

ತನಿಖೆಯಿಂದ ಸಿಕ್ಕಿದ ಮಾಹಿತಿಯ ಪ್ರಕಾರ, ಈ ಭಯೋತ್ಪಾದಕ ಸಂಘಟನೆಗಳ ನಿಯಂತ್ರಕರು ಮಣಿಪುರದಲ್ಲಿ ಹಿಂಸಾಚಾರಕ್ಕಾಗಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ಹಣಕಾಸು ಒದಗಿಸುತ್ತಿದ್ದಾರೆ. ಇದಕ್ಕಾಗಿ ಅವರು ಈಶಾನ್ಯ ಭಾರತದಲ್ಲಿ ಸಕ್ರಿಯರಾಗಿರುವ ಇತರ ಭಯೋತ್ಪಾದಕ ಸಂಘಟನೆಗಳಿಂದ ಸಹಾಯ ಪಡೆಯುತ್ತಿದ್ದಾರೆ. ಅಲ್ಲದೆ, ಮ್ಯಾನಮಾರನಲ್ಲಿರುವ ಭಯೋತ್ಪಾದಕ ಸಂಘಟನೆಗಳ ಭಯೋತ್ಪಾದಕರು ಮಣಿಪುರಕ್ಕೆ ನುಸುಳಿ ಅಲ್ಲಿನ ಹಿಂದೂ ಮೈತೆಯಿ ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರಿಂದ ಅವರು ಹಿಂಸೆಯನ್ನು ಹೆಚ್ಚಿಸಲು ಬಯಸುತ್ತಾರೆ ಎನ್ನುವುದು ಗಮನಕ್ಕೆ ಬಂದಿದೆ. ಹಾಗೂ ಅವರು ಗುಂಡಿನ ದಾಳಿ ನಡೆಸಿರುವ ಕೆಲ ವಿಡಿಯೋಗಳು ಕೂಡ ಬಹಿರಂಗವಾಗಿದೆ.

ಗಡಿಯಲ್ಲಿರುವ ವಿಶೇಷ ಸೌಲಭ್ಯಗಳ ದುರುಪಯೋಗ !

ಭಾರತ ಮತ್ತು ಮ್ಯಾನಮಾರ ಸುಮಾರು 1 ಸಾವಿರ 643 ಕಿಮೀ ಗಡಿಯನ್ನು ಹೊಂದಿದೆ. ಈ ಗಡಿಯಲ್ಲಿ ತಂತಿಯ ಬೇಲಿಯನ್ನು ಹಾಕಲಾಗಿಲ್ಲ. ಇದರಿಂದಾಗಿ ಇಲ್ಲಿನ ನಾಗರಿಕರು ಪರಸ್ಪರರ ಗಡಿಯೊಳಗೆ ಸುಲಭವಾಗಿ ಬಂದು ಹೋಗಬಹುದು. ಅಲ್ಲದೆ, 2018 ರಲ್ಲಿ, ‘ಫ್ರೀ ಮೂವ್ಮೆಂಟ್ ರಿಜಿಮ್’ ಅಡಿಯಲ್ಲಿ, ಈಶಾನ್ಯ ಭಾರತದ 4 ರಾಜ್ಯಗಳ ಕೆಲವು ಜಾತಿಗಳ ನಾಗರಿಕರು ಮ್ಯಾನಮಾರ ಅನ್ನು 16 ಕಿ.ಮೀ ವರೆಗೆ ಪ್ರವೇಶಿಸಬಹುದು ಮತ್ತು ಮ್ಯಾನಮಾರ ಜನರು ಸಹ ಭಾರತಕ್ಕೆ ಬರಬಹುದು. ಈ ಸೌಲಭ್ಯದ ದುರುಪಯೋಗ ಪಡೆದು ಉಗ್ರರು ಭಾರತಕ್ಕೆ ನುಸುಳುತ್ತಿದ್ದಾರೆ. ಅವರ ಭಾಷೆ ಮತ್ತು ಸಂಸ್ಕೃತಿ ಒಂದೇ ಆಗಿರುವುದರಿಂದ ಅವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.

ಸಂಪಾದಕೀಯ ನಿಲುವು

ಈಗ ಸರಕಾರವು ಈ ಮಾಹಿತಿಯ ಆಧಾರದಲ್ಲಿ ಆ ದೇಶಗಳ ಸರಕಾರಗಳ ಬಳಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು. ಅವರು ಕ್ರಮ ಕೈಗೊಳ್ಳದಿದ್ದರೆ, ಭಾರತವು ಈ ದೇಶಗಳಿಗೆ ತೆರಳಿ ಸ್ವತಃ ಕ್ರಮ ಕೈಕೊಂಡು ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಬೇಕು !

ಬಾಂಗ್ಲಾದೇಶ ಮತ್ತು ಮ್ಯಾನಮಾರ್‌ನ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ಹಿಂಸಾಚಾರ ನಡೆಸಲಿವೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗೆ ಮೊದಲೇ ಏಕೆ ತಿಳಿದಿರಲಿಲ್ಲ ? ಈಗಲೂ ಇದನ್ನು ತಿಳಿದುಕೊಳ್ಳಲು 4 ತಿಂಗಳು ಏಕೆ ಬೇಕಾಯಿತು ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ !