ಉದ್ಭೋಧನಾ ಭಾಗ – ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಸಂತರ ಜವಾಬ್ದಾರಿ

ಎಡದಿಂದ ಸ್ವಾಮಿ ಸಂಯುಕ್ತಾನಂದಜಿ ಮಹಾರಾಜ, ಪೂ. ಶ್ರೀ ರಾಮಜ್ಞಾನಿದಾಸ ಮಹಾತ್ಯಾಗಿ, ಶ್ರೀ. ಕುರು ಥಾಯಿ ಮತ್ತು ಶ್ರೀಮತಿ ಶ್ವೇತಾ ಶಾನ್ ಕ್ಲಾರ್ಕ್

ಭಾರತವನ್ನು ಹಿಂದೂ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ! – ಪೂ. ಶ್ರೀರಾಮಜ್ಞಾನಿದಾಸ ಮಹಾತ್ಯಾಗಿ, ಸಂಸ್ಥಾಪಕರು, ತಿರಖೆಡಿ ಆಶ್ರಮ, ಗೊಂದಿಯಾ, ಮಹಾರಾಷ್ಟ್ರ

ರಾಮನಾಥಿ, ಜೂನ ೧೭ (ವಾರ್ತೆ.) – ಯಾರಲ್ಲಿ ದೈಹಿಕ ಸಾಮರ್ಥ್ಯ ಇದೆಯೋ, ಅವರು ಶರೀರದಿಂದ, ಬೌದ್ಧಿಕ ಸಾಮರ್ಥ್ಯ ಹೊಂದಿರುವವರು ಬುದ್ಧಿಯಿಂದ ಹೀಗೆ ಪ್ರತಿಯೊಬ್ಬರೂ ತಮ್ಮ ಸ್ವಂತ ಸಾಮರ್ಥ್ಯದಿಂದ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೊಡುಗೆ ನೀಡಬೇಕು. ಕೇವಲ ಭಾಷಣ ಮಾಡುವುದರ ಮೂಲಕ ಮಾತ್ರವಲ್ಲ; ನೇರ ಕೊಡುಗೆ ನೀಡುವ ಮೂಲಕ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ. ಸಮಾಜ ಪರಿವರ್ತನಾಶೀಲವಾಗಿದೆ. ಈಗ ಬದಲಾವಣೆಯ ಸಮಯ ಬಂದಿದೆ. ಭಾರತವನ್ನು ಹಿಂದೂ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೊಂದಿಯಾ ತಿರಖೆಡಿ ಆಶ್ರಮದ ಸಂಸ್ಥಾಪಕ ಪೂ. ಶ್ರೀರಾಮಜ್ಞಾನಿದಾಸ ಮಹಾತ್ಯಾಗಿ ಇವರು ಪ್ರತಿಪಾದಿಸಿದರು. ಅವರು ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ‘ಹಿಂದೂ ಸಂಸ್ಕೃತಿ’ ಈ ಉದ್ಭೋಧನಾ ಭಾಗದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಂತರ ಕೊಡುಗೆ’ ವಿಷಯದ ಕುರಿತು ಮಾತನಾಡುತ್ತಿರುವಾಗ ಈ ಮೇಲಿನ ಮಾತುಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಬಂಗಾಲದ ಭಾರತ ಸೇವಾಶ್ರಮ ಸಂಘದ ಸ್ವಾಮಿ ಸಂಯುಕ್ತಾನಂದ ಮಹಾರಾಜ, ಅರುಣಾಚಲ ಪ್ರದೇಶದ ‘ಬಾಂಬು ಸಂಸಾಧನ ಮತ್ತು ಅಭಿವೃದ್ಧಿ ಸಂಸ್ಥೆ’ಯ ಶ್ರೀ. ಕುರು ಥಾಯಿ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಸಂಶೋಧನಾ ವಿಭಾಗ ಸೌ. ಶ್ವೇತಾ ಶಾನ್ ಕ್ಲಾರ್ಕ್ ಇವರು ಉಪಸ್ಥಿತರಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಛತ್ತೀಸಗಢದ ಸಮನ್ವಯಕರಾದ ಶ್ರೀ. ಹೇಮಂತ ಕಾಣಸ್ಕರ ಇವರು ಪೂ. ಶ್ರೀರಾಮಜ್ಞಾನಿದಾಸ ಮಹಾರಾಜರ ಸತ್ಕಾರ ಮಾಡಿದರು.

ಪೂ. ಶ್ರೀ ರಾಮಜ್ಞಾನಿದಾಸ ಮಹಾತ್ಯಾಗಿ

ಈ ವೇಳೆ ಪೂ. ಶ್ರೀರಾಮಜ್ಞಾನಿದಾಸ ಮಹಾತ್ಯಾಗಿ ಇವರು ಮಾತನಾಡುತ್ತಾ, “ಸದ್ಯದ ಪರಿಸ್ಥಿತಿಯಲ್ಲಿ ‘ಮಾಡು ಇಲ್ಲವೇ ಮಡಿ’, ಎನ್ನುವ ಪರಿಸ್ಥಿತಿ ಉದ್ಭವಿಸಿದೆ. ಭಾರತವು ಹಿಂದೂ ರಾಷ್ಟ್ರವಾಗಿತ್ತು, ಆಗಿದೆ ಮತ್ತು ಇರಲಿದೆ; ಆದರೆ ಭಾರತಕ್ಕೆ ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರದ ಸ್ಥಾನಮಾನವನ್ನು ಪಡೆಯಲು ನಾವು ಒಟ್ಟಾಗಿ ಬಂದಿದ್ದೇವೆ. ನಾವು ಸಮಾಜಕ್ಕಾಗಿ, ಧರ್ಮಕ್ಕಾಗಿ ಕುಟುಂಬವನ್ನು ತೊರೆದಿದ್ದೇವೆ. ಯಾರಾದರೂ ಕೋಪಗೊಂಡರೂ ನಿಮ್ಮ ಗುರಿಯಿಂದ ವಿಮುಖರಾಗಬೇಡಿ. ಭಾರತದಲ್ಲಿ ನೈತಿಕತೆ ಮತ್ತು ಸಂಸ್ಕಾರ ಮುಗಿದಿದೆ. ಭಾರತದಲ್ಲಿ ಜಾತೀಯತೆ, ಪ್ರಾಂತೀಯತೆ ಇತ್ಯಾದಿಗಳು ಸೃಷ್ಟಿಯಾಗಿವೆ. ಇದನ್ನು ತಡೆಯಲು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಬಹಳ ಮುಖ್ಯವಾಗಿದೆ. ಸಂಸ್ಕಾರ ಕೆಟ್ಟರೆ ಕೆಲಸ ಎಷ್ಟೇ ದೊಡ್ಡದಾದರೂ ಕೆಡುತ್ತದೆ; ಆದರೆ ಸಂಸ್ಕಾರ ಇದ್ದರೆ ಎಷ್ಟೇ ಹಾಳಾಗಿರುವ ಕೆಲಸವಾದರೂ ಸುಧಾರಿಸಬಹುದು. ಪ್ರಭು ಶ್ರೀರಾಮನು ಸ್ವತಃ ಧರ್ಮದ ಸ್ವರೂಪವಾಗಿದ್ದರು. ಆದ್ದರಿಂದ ಭಾರತದ ಸಂವಿಧಾನವು ‘ಶ್ರೀರಾಮಚರಿತಮಾನಸ’ವನ್ನು ಆಧರಿಸಿರಬೇಕು.” ಎಂದು ಹೇಳಿದರು.

ಗೊಂದಿಯಾದಲ್ಲಿ ಮತಾಂತರ ನಿಂತಿತು !
ಋಷಿ ಮತ್ತು ಕೃಷಿಯ ಆಧಾರದ ಮೇಲೆ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು. ನಾನು ೧೯೯೭ ರಲ್ಲಿ ಗೊಂದಿಯಾಕ್ಕೆ ಬಂದಾಗ, ದೊಡ್ಡ ಪ್ರಮಾಣದಲ್ಲಿ ಮತಾಂತರವಾಗುತ್ತಿತ್ತು. ಇದನ್ನು ನೋಡಿ ‘ಎಲ್ಲಿಯವರೆಗೆ ಗೊಂದಿಯಾದಲ್ಲಿ ಮತಾಂತರ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ನಾನು ಶಾಂತವಾಗಿ ಕುಳಿತುಕೊಳ್ಳುವುದಿಲ್ಲ’, ಎಂದು ನಿರ್ಧರಿಸಿದೆ. ಪ್ರಸ್ತುತ ಗೊಂದಿಯಾದಲ್ಲಿ ಮತಾಂತರ ನಿಂತಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನೇರವಾಗಿ ಕೊಡುಗೆ ನೀಡಿ !
‘ಮಳೆ ಯಾವಾಗ ಬರುತ್ತೆ ?’ ಎಂಬುದು ಪಂಚಾಂಗ ನೋಡಿ ಹೇಳುತ್ತೇವೆ; ಆದರೆ ಪಂಚಾಂಗದ ಪುಸ್ತಕವನ್ನು ಎಷ್ಟೇ ತಿರುಚಿದರೂ ಮಳೆ ಬರುವುದಿಲ್ಲ. ಆದ್ದರಿಂದ ಪುಸ್ತಕದ ಪುಟಗಳಿಂದ ಮತ್ತು ವೇದಿಕೆಯಿಂದ ಪರಮಾತ್ಮನ ಹುಡುಕಾಟ ನಡೆಸದೆ ಹಿಂದೂ ರಾಷ್ಟ್ರ ಸ್ಥಾಪನೆಗೆ ನೇರ ಕೊಡುಗೆ ನೀಡಿ, ಎಂದು ಪೂ. ಶ್ರೀರಾಮಜ್ಞಾನಿದಾಸ ಮಹಾತ್ಯಾಗಿ ಇವರು ಹೇಳಿದರು.

ಹಿಂದೂ ರಾಷ್ಟ್ರ ಸ್ಥಾಪನೆಯ ಕೊಡುಗೆಯಲ್ಲಿ ನಿಮ್ಮ ಹೆಸರು ಇರಲಿ !
‘ಕಾಡಿಗೆ ಬೆಂಕಿ ಹೊತ್ತಿಕೊಂಡಾಗ ಬೆಂಕಿ ನಂದಿಸಲು ಗುಬ್ಬಿ ಕೊಕ್ಕಿನಿಂದ ನೀರು ತಂದು ಬೆಂಕಿಯನ್ನು ಆರಿಸುತ್ತಿತ್ತು. ಆ ಸಮಯದಲ್ಲಿ ಗುಬ್ಬಿಗೆ ಯಾರೋ ಕೇಳಿದರು, ‘ಈ ನೀರಿನಿಂದ ಬೆಂಕಿ ಆರುತ್ತದೆಯೇ ?’ ಅದಕ್ಕೆ ಗುಬ್ಬಿಯು, ‘ನಾನು ತರುತ್ತಿದ್ದ ನೀರಿನಿಂದ ಬೆಂಕಿ ಆರುವುದಿಲ್ಲ, ಇದು ನನಗೆ ಗೊತ್ತಿದೆ, ಆದರೆ ಇತಿಹಾಸ ಬರೆಯುವಾಗ ಬೆಂಕಿ ನಂದಿಸುವವರಲ್ಲಿ ನನ್ನ ಹೆಸರು ಇರುತ್ತದೆ ಹೊರತು ಹಚ್ಚುವುದರಲ್ಲಿ ಇರುವುದಿಲ್ಲ.” ಅದರಂತೆ ನಮ್ಮ ಹೆಸರು ಹಿಂದೂ ರಾಷ್ಟ್ರದ ಸ್ಥಾಪನೆಯ ಕೊಡುಗೆಯಲ್ಲಿ ಇರಲಿ ಎಂದು ಪೂ. ಶ್ರೀರಾಮಜ್ಞಾನಿದಾಸ ಮಹಾತ್ಯಾಗಿ ಇವರು ಹೇಳಿದರು.