ಸ್ವರಸಾಮ್ರಾಜ್ಞಿ ಭಾರತರತ್ನ ಲತಾ ಮಂಗೇಶ್ಕರ್ ಅನಂತದಲ್ಲಿ ವಿಲೀನ !

2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ !

ಅನೇಕ ಗಾಯಕರು ಮತ್ತು ಗಣ್ಯರಿಂದ ಲತಾಜಿ ಅವರಿಗೆ ಶ್ರದ್ಧಾಂಜಲಿ

ಮುಂಬಯಿ : ಎಂಟು ದಶಕಗಳ ಕಾಲ ಭಾರತದ ಸ್ವರದ ವಿಶ್ವದಲ್ಲಿ ಮುಳಗಿ ಹಾಗೂ ಅಮೃತಸ್ವರಗಳಿಂದ ಶ್ರೋತೃಗಳ ಮನಸೂರೆಗೊಳಿಸಿದ ಹಾಗೂ ಶ್ರೋತ್ರುಗಳ ಅಂತರ ಮನಸ್ಸಿನಲ್ಲಿ ಅಚ್ಚನ್ನು ಮೂಡಿಸಿದ ಸ್ವರಸಾಮ್ರಾಜ್ಞಿ ಮತ್ತು ಭಾರತ ರತ್ನ ಲತಾ ಮಂಗೇಶ್ಕರ್ ಅವರು ಫೆಬ್ರವರಿ 6 ರಂದು ಬೆಳಗ್ಗೆ 8.12 ಕ್ಕೆ ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರಿಗೆ ಕೊರೋನಾದ ಕಾಯಿಲೆಯಿಂದ ಮತ್ತು ನಂತರ ನ್ಯುಮೋನಿಯಾದಿಂದ ಅವರು ಕಳೆದ 28 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ (ಮಲ್ಟಿಪಲ್ ಆರ್ಗನ್ ಫೇಲ್ಯೂರ್) ಚಿಕಿತ್ಸೆ ವೇಳೆ ಅವರು ನಿಧನರಾದ್ದಾರೆ ! `ಭಾರತದ ಗಾನ ಕೋಗಿಲೆ’ ಎಂದೇ ಖ್ಯಾತರಾಗಿದ್ದ ಲತಾಜಿ ಅವರ ಸುಮಧುರ ಗೀತೆಗಳು ಜಗತ್ತಿನ ಮೂಲೆ ಮೂಲೆಗೂ ತಲುಪಿತ್ತು. ‘ಅವರ ನಿಧನದಿಂದ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಒಂದು ಸುವರ್ಣಯುಗ ಅಂತ್ಯವಾಗಿದೆ’, ಎಂದು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ದಾದರ್‍ನ ಶಿವಾಜಿ ಪಾರ್ಕ್‍ನಲ್ಲಿ ಸರಕಾರಿ ಕಟ್ಟಡದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅವರ ನಿಧನಕ್ಕೆ ಕೇಂದ್ರ ಸರಕಾರ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಇದರಿಂದಾಗಿ ಸಂಸತ್ತು, ರಾಷ್ಟ್ರಪತಿ ಭವನ, ಮುಂಬಯಿಯ ಸಚಿವಾಲಯ, ಕರ್ನಾಟಕ ರಾಜ್ಯದಲ್ಲಿಯೂ ಮತ್ತು ಎಲ್ಲಾ ಸರಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. ಲತಾಜಿ ಅವರ ಪಾರ್ಥಿವ ದೇಹವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಪ್ರಭುಕುಂಜ್‍ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಸ್ವಲ್ಪ ಸಮಯದವರೆಗೆ ಇರಿಸಲಾಗಿತ್ತು.

ಲತಾ ಮಂಗೇಶ್ಕರ್ ಅವರ ಸಂಕ್ಷಿಪ್ತದಲ್ಲಿ ಜೀವನಪ್ರಯಾಣ

ಲತಾ ಮಂಗೇಶ್ಕರ್ ಅವರು 28 ಡಿಸೆಂಬರ್ 1929 ರಂದು ಇಂದೋರ್ (ಮಧ್ಯಪ್ರದೇಶ) ನಲ್ಲಿ ಜನಿಸಿದರು. ಅವರು 5 ವರ್ಷ ವಯಸ್ಸಿನಿಂದಲೇ ತಮ್ಮ ತಂದೆ ದಿನನಾಥ ಮಂಗೇಶ್ಕರ್ ಅವರಿಂದ ಗಾಯನದ ಪಾಠಗಳನ್ನು ಪಡೆದರು. ಲತಾಜಿ ಅವರು 13 ನೇ ವಯಸ್ಸಿನಲ್ಲಿರುವಾಗಲೇ ಅವರ ತಂದೆ ನಿಧನರಾದರು. ಸಂಸಾರದಲ್ಲಿ ದೊಡ್ಡವಳಾಗಿದ್ದರಿಂದ ಸಂಸಾರದ ಜವಾಬ್ದಾರಿ ಅವರ ಮೇಲೆ ಬಿತ್ತು. ಪರಿಣಾಮವಾಗಿ, ಅವರು 1942 ರಲ್ಲಿ ಹಿನ್ನೆಲೆ ಗಾಯನವನ್ನು ಪ್ರಾರಂಭಿಸಿದರು. ಅದರ ನಂತರ, ಮುಂದಿನ 6 ದಶಕಗಳ ಕಾಲ ಅವರು ಮರಾಠಿ ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ರಾರಾಜಿಸಿದರು. ಅವರು 22 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 1974 ರಿಂದ 1991 ರವರೆಗೆ, ಅವರು ಅತಿ ಹೆಚ್ಚು ಹಾಡುಗಳ ಧ್ವನಿಮುದ್ರಣ ಮಾಡಿದ ವಿಶ್ವದಾಖಲೆ ಮಾಡಿದರು. `ಆನಂದಘನ್’ ಎಂಬ ಹೆಸರಿನಲ್ಲಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಮುಂತಾದ ಹಲವು ಪ್ರಶಸ್ತಿಗಳು ಅಭಿಸಿದೆ. 2001 ರಲ್ಲಿ, ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಭಾರತ ರತ್ನ’ವನ್ನು ನೀಡಿ ಗೌರವಿಸಲಾಯಿತು. ದಾದರಾ ನಗರಹವೇಲಿಯ ವಿಮೋಚನಾ ಹೋರಾಟಕ್ಕೆ ನಿಧಿ ಸಂಗ್ರಹಿಸುವ ಸಲುವಾಗಿ ಗೀತಗಾಯನ ಕಾರ್ಯಕ್ರಮ ಆಯೋಜಿಸಿದ್ದರು. `ಶಾಸ್ತ್ರೀಯ ಗಾಯನ ಮಾಡಲು ಆಗಲಿಲ್ಲ’ ಎಂದು ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಲತಾ ಮಂಗೇಶ್ಕರ್ ಅವರಿಗೆ ಗಾಯಕರಿಂದ ಗೌರವವಂದನೆ !

ಶ್ರೀ. ಶ್ರೀಧರ್ ಫಡ್ಕೆ – ಅವರು ತಮ್ಮದೇ ಆದ ರಾಗಗಳಿಂದ ಜಗತ್ತಿನಲ್ಲಿ ರಾರಾಜಿಸಿದರು. ನಾನು ಅವರ ಒಡನಾಟಕ್ಕೆ ಬಂದಾಗಲೆಲ್ಲಾ, ನಾನು ಅಸಾಧಾರಣ ಶಕ್ತಿ ಮತ್ತು ಊರ್ಜೆಯನ್ನು ಅನುಭವಿಸುತ್ತಿದ್ದೆ. ನಮಗೆ ಅವರು ನಡೆದಾಡುವ ಶಾಲೆಯಾಗಿತ್ತು. ಅವರು ರಾಷ್ಟ್ರಭಕ್ತರಾಗಿದ್ದರು. ಅವರು ನಮಗಾಗಿ ದೊಡ್ಡ ಕೊಡುಗೆಯನ್ನು ಇಟ್ಟು ಹೋಗಿದ್ದಾರೆ.

ಸೌ. ಆರತಿ ಅಂಕಲಿಕರ್-ಟಿಕೇಕರ್, ಗಾಯಕಿ – ಅವರು ಗಾಯನ ಸರಸ್ವತಿಯೇ ಆಗಿದ್ದರು. ವಸಂತ ಪಂಚಮಿಯಂದು ನನಗೆ ಸರಸ್ವತಿದೇವಿಯ ಚಿತ್ರದ ಬದಲು ಅವರದ್ದೇ ಚಿತ್ರ ಕಂಡಿತು. ಅವರ ಹಾಡಿನಲ್ಲಿ ಜೀವಂತಿಕೆ ಇತ್ತು. ಅವರ ಹಾಡು ಒಳಗಿನಿಂದ ಬರುತ್ತಿತ್ತು. ಇದರಿಂದಾಗಿ ಅವರು ಕಿರಿಯರು ಮತ್ತು ಹಿರಿಯರ ಮನಸ್ಸನ್ನು ಅರಿತುಕೊಳ್ಳುತ್ತಿದ್ದರು. ಎಲ್ಲರೂ ಅದರಿಂದ ಪ್ರೇರಿತರಾಗಿದ್ದರು. ನಾವು ಅವರನ್ನು ಸ್ವರಗಳ ತಾಯಿ ಎಂದು ಕರೆಯಬಹುದು.

ಸೌ. ಪದ್ಮಜಾ ಫೆಣಾಣಿ-ಜೋಗ್ಲೇಕರ್, ಗಾಯಕಿ – ಲತಾಜಿ ಅಗಲಿಕೆಯಿಂದ ಪ್ರತಿಯೊಬ್ಬರಿಗೂ `ಯಾರೋ ನನ್ನ ಮನೆಯವರೇ ಹೋಗಿದ್ದಾರೆ’, ಎಂಬ ಭಾವನೆ ನಿರ್ಮಾಣವಾಗಿದೆ. ‘ನನ್ನ ಸಂಗೀತ ತಾಯಿ ಹೋದರು,’ ಎಂದು ನನಗೆ ಅನಿಸುತ್ತಿದೆ. ನನಗೆ ನನ್ನ ಪಾಲಿಗೆ ದೇವತೆಯಾಗಿದ್ದರು.

ಶ್ರೀ. ಸುದೇಶ್ ಭೋಸಲೆ, ಗಾಯಕ – ಲತಾಜಿ ರೊಂದಿಗೆ ದೇಶ-ವಿದೇಶಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಮಾಡಿದೆ. ಅವರು ದೊಡ್ಡ ಗಾಯಕಿಯಾಗಿದ್ದರೂ, ಪ್ರತಿ ಕಾರ್ಯಕ್ರಮದ ಸಮಯದಲ್ಲಿ ಅವರು ಸಾಕಷ್ಟು ಅಭ್ಯಾಸ ಮಾಡುತ್ತಿದ್ದರು. ಅಲ್ಲದೆ ಅಭ್ಯಾಸದ ವೇಳೆ `ಹೀಗೆ ಹಾಡಿದರೆ ಆಗಬಹುದಲ್ಲ, ಹೀಗೆ ಆಗಬಹುದಾ’, ಎಂದು ಕೇಳುತ್ತಿದ್ದರು. ನಾನು ಅವರಲ್ಲಿ ನಮ್ರತೆ ಮತ್ತು ಪರಿಪೂರ್ಣತೆಯ ಗುಣವನ್ನು ನೋಡಿದೆ. ಅವರ ಪ್ರತಿಯೊಂದು ಹಾಡುಗಳು ಪರಿಪೂರ್ಣವಾಗಿವೆ. ಯಾವುದೇ ನಿರ್ದೇಶಕನ ಮನಸ್ಸನ್ನು ಗುರುತಿಸಿ ಮತ್ತು ಆ ಹಾಡನ್ನು ಹಾಡುತ್ತಿದ್ದರು. ಅದಕ್ಕಾಗಿಯೇ ಅವರಿಗೆ ಏನನ್ನೂ ಹೇಳಬೇಕಾಗುತ್ತಿರಲಿಲ್ಲ. ಅವರ ಜೊತೆಗೆ ಹೊಸಬರು, ಸಣ್ಣ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು.

ಸಂಗೀತಕಾರ ಎ.ಆರ್. ರೆಹಮಾನ್ – ಅವರು ಗಾಯಕಿ ಮಾತ್ರವಲ್ಲ, ಭಾರತೀಯ ಸಂಗೀತ ಸೃಷ್ಟಿಯ ಆತ್ಮವೂ ಆಗಿದ್ದರು. ಅವರ ಅಗಲಿಕೆಯು ಭಾರತೀಯ ಸಂಗೀತ ಪ್ರಪಂಚಕ್ಕೆ ಸಾಕಷ್ಟು ಹಾನಿ ಮಾಡಿದೆ.

ಗಣ್ಯರ ಪ್ರತಿಕ್ರಿಯೆಗಳು

ಪ್ರಧಾನಿ ನರೇಂದ್ರ ಮೋದಿ – ಯಾರ ಕಂಠದಿಂದ ಮಾತೆ ಸರಸ್ವತಿಯ ಆಶೀರ್ವಾದ ಎಲ್ಲರಿಗೆ ಸಿಗುತ್ತಿತ್ತು, ಆ ಲತಾಜಿ ಬ್ರಹ್ಮಲೋಕದ ಪ್ರವಾಸಕ್ಕೆ ಹೋಗಿದ್ದಾರೆ. ಲತಾಜಿ ಅನೇಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಜಗತ್ತಿನ ಮೂಲೆ ಮೂಲೆಯಲ್ಲೂ ನಿಮಗೆ ಲತಾ ಅವರ ಧ್ವನಿ ಕೇಳುತ್ತದೆ ಮತ್ತು ಅವರ ಅಭಿಮಾನಿಗಳು ಸಿಗುತ್ತಾರೆ.

ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವರಿಂದ ಶ್ರದ್ಧಾಂಜಲಿ

ಬೀಜಿಂಗ್ (ಚೀನಾ) – ಪ್ರಸ್ತುತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಚೀನಾ ಪ್ರವಾಸದಲ್ಲಿರುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಹುಸೇನ್ ಅವರು ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅವರು ಉರ್ದು ಮತ್ತು ಇಂಗ್ಲಿಷ್‍ನಲ್ಲಿ ಟ್ವೀಟ್ ಮಾಡಿದ್ದಾರೆ. ಅವರು, ‘ಲತಾ ಮಂಗೇಶ್ಕರ್ ಅವರು ಜಗತ್ತಿಗೆ ಸಂಗೀತದ ಆಸಕ್ತಿಯನ್ನು ನಿರ್ಮಿಸಿದರು. ಅನೇಕ ದಶಕಗಳ ಕಾಲ ಅಭಿಮಾನಿಗಳ ಮನವನ್ನು ಆಳಿದ ಈ ಸಂಗೀತ ಸಾಮ್ರಾಜ್ಞಿಯ ಕಂಠ ಎಂದೆಂದಿಗೂ ಜನಮನವನ್ನು ಆಳುತ್ತಿರುತ್ತದೆ.’ ಎಂದು ಹೇಳಿದರು.

ಭಾರತೀಯ ತಂಡದಿಂದ ಕಪ್ಪು ರಿಬ್ಬನ್ ಧರಿಸಿದ ಲತಾಜಿಗೆ ಶ್ರದ್ಧಾಂಜಲಿ

ಕರ್ಣಾವತಿ (ಗುಜರಾತ) – ಭಾರತ ಕ್ರಿಕೆಟ್ ತಂಡವು ಕೈಗೆ ಕಪ್ಪು ರಿಬ್ಬನ ಕಟ್ಟಿಕೊಂಡು ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಕರ್ಣಾವತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಅಂತರರಾಷ್ಟ್ರೀಯ ಪಂದ್ಯದ ಆರಂಭದಲ್ಲಿ ಭಾರತ ತಂಡದಿಂದ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಲತಾ ಮಂಗೇಶ್ಕರ್ ಮೇಲೆ ಸ್ವಾತಂತ್ರ್ಯವೀರ್ ಸಾವರ್ಕರ್ ಅವರ ಪ್ರಭಾವ !

ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನು ಯಜ್ಞ ಮಾಡಿದ ವೀರ ಸಾವರ್ಕರ್ ಅವರು ಲತಾ ಮಂಗೇಶ್ಕರ್ ಅವರ ಮೇಲೆ ಸಾಕಷ್ಟು ಪ್ರಭಾವ ಇತ್ತು. ಅದನ್ನು ಅವರು ಕಾಲಕಾಲಕ್ಕೆ ವ್ಯಕ್ತಪಡಿಸಿದ್ದರು. ವೀರ್ ಸಾವರ್ಕರ್ ಅವರನ್ನು ಟೀಕಿಸುವವರಿಗೆ ಲತಾಜಿ ಬಲವಾಗಿ ಪ್ರತ್ಯುತ್ತರ ನೀಡಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಅವರು, `ಸ್ವಾತಂತ್ರ್ಯವೀರ್ ಸಾವರ್ಕರ್ ವಿರುದ್ಧ ಮಾತನಾಡುತ್ತಿರುವವರಿಗೆ ವೀರ್ ಸಾವರ್ಕರ್ ಅವರ ದೇಶಭಕ್ತಿ ಮತ್ತು ಸ್ವಾಭಿಮಾನದ ಬಗ್ಗೆ ತಿಳಿದಿಲ್ಲ’, ಎಂದು ಹೇಳಿದ್ದರು. ಸ್ವಾತಂತ್ರ್ಯವೀರ್ ಸಾವರ್ಕರ್ ಅವರ ಜಯಂತಿ ಕುರಿತು ಟ್ವೀಟ್ ಮಾಡುವಾಗ, `ನಾನು ಅವರ ಹೇಳಿಕೆಗೆ ಮತ್ತು ದೇಶಪ್ರೇಮಕ್ಕೆ ವಂದಿಸುತ್ತೇನೆ. ವೀರ್ ಸಾವರ್ಕರ್ ಮತ್ತು ಮಂಗೇಶ್ಕರ್ ಕುಟುಂಬ ನಿಕಟ ಸಂಬಂಧವನ್ನು ಹೊಂದಿತ್ತು. ಆದ್ದರಿಂದಲೇ ವೀರ ಸಾವರ್ಕರ್ ನನ್ನ ತಂದೆಗಾಗಿ `ಸಂನ್ಯಾಸ ಖಡ್ಗ’ ಈ ನಾಟಕವನ್ನು ಬರೆದಿದ್ದರು.’ ಎಂದು ಹೇಳಿದರು.

ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ – ವೀರ್ ಸಾವರ್ಕರ್ ಅಥವಾ ಮಾನ್ಯ ಬಾಳಾಸಾಹೇಬ್ ಠಾಕ್ರೆ ! ಭಾರತರತ್ನ ಗಾನಸಾಮ್ರಾಜ್ಞಿ ಲತಾಜಿ ಅವರು ತಮ್ಮ `ಸೆಕ್ಯುಲರ್’ ನಿಲುವನ್ನು ಪ್ರದರ್ಶಿಸದೆ ದಿಟ್ಟತನದಿಂದ ಹಿಂದುತ್ವದ ವೇದಿಕೆಯಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಿದರು ! ಸ್ವ. ಲತಾಜಿ ಅವರ ಚರಣಗಳಲ್ಲಿ ವಂದನೆಗಳು ! ಇದು ಲತಾಜಿ ಅವರ ಸ್ಪಷ್ಟ ನಿಲುವು ! ‘ಯಾರು ವೀರ್ ಸಾವರ್ಕರ್ ವಿರುದ್ಧ ಮಾತನಾಡುತ್ತಿದ್ದರೋ, ಅವರಿಗೆ ಸಾವರ್ಕರ್ ಅವರ ದೇಶಭಕ್ತಿ ಮತ್ತು ಸ್ವಾಭಿಮಾನದ ಬಗ್ಗೆ ತಿಳಿದಿಲ್ಲ’, ಎಂದು ಲತಾಜಿ ಹೇಳಿದರು.

ಶಿವಾಜಿ ಪಾರ್ಕ್‍ನಲ್ಲಿ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ !

ಲತಾ ಮಂಗೇಶ್ಕರ್ ಅವರ ನಿವಾಸ `ಪ್ರಭುಕುಂಜ್’ ದಿಂದ ಅವರ ಪಾರ್ಥಿವ ಶರೀರವನ್ನು ಪೆಡರ್ ರಸ್ತೆ, ವರಳಿ ನಾಕಾ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಶಿವಾಜಿ ಪಾರ್ಕ್‍ಗೆ ತರಲಾಯಿತು. ಈ ವೇಳೆ ಅವರನ್ನು ವಂದಿಸಲು ರಸ್ತೆಯ ಎರಡೂ ಬದಿಯಲ್ಲಿ ಸಾವಿರಾರು ಜನರು ಜಮಾಯಿಸಿದ್ದು, ಸಹಸ್ರಾರು ಜನರು ಸ್ವಯಂ ಪ್ರೇರಿತವಾಗಿ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಅವರ ಮನೆ ಬಳಿ ಪೊಲೀಸರು ಹಾಗೂ ಸೇನೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಪುರೋಹಿತರು ಅವರೇ ಲತಾಜಿ ರವರ ಪಾರ್ಥಿವ ಶರೀರದ ಮೇಲೆ ಅಂತ್ಯಸಂಸ್ಕಾರ ಮಾಡಿದರು. ಈ ವೇಳೆ ಭಗವದ್ಗೀತೆಯ 14ನೇ ಅಧ್ಯಾಯವನ್ನು ಪಠಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಪಾರ್ಕ್‍ಗೆ ಹೋಗಿ ಲತಾಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಭಾರತರತ್ನ ಸಚಿನ್ ತೆಂಡೂಲ್ಕರ್, ಗಾಯಕ ಶಂಕರ್ ಮಹದೇವನ್, ನಟ ಶಾರುಖ್ ಖಾನ್, ಅಮೀರ್ ಖಾನ್, ನಿರ್ದೇಶಕ ಅಶೋಕ್ ಪಂಡಿತ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮಂಗೇಶ್ಕರ್ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಲತಾ ಮಂಗೇಶ್ಕರ್ ಅವರನ್ನು ಭಾರತದ ಎಲ್ಲಾ ಮೂರು ಸೇನಾ ಪಡೆಯಿಂದ ನಮನ ಸಲ್ಲಿಸಲಾಯಿತು.