ಪರಾತ್ಪರ ಗುರುದೇವರ ೭೮ ನೇ ಜನ್ಮದಿನದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರಿಗೆ ಬಂದ ಅನುಭೂತಿಗಳು

ದಿನಾಂಕ ೧೩.೫.೨೦೨೦ ಮತ್ತು ೧೫.೫.೨೦೨೦ ರಂದು ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ೭೮ ನೇ ಜನ್ಮದಿನದ ನಿಮಿತ್ತ ಸಾಧಕರು ಅವರವರ ಮನೆಯಲ್ಲಿ ಕುಳಿತು ‘ಆನ್‌ಲೈನ್ ಭಾವಸತ್ಸಂಗದ ಮೂಲಕ ಕೃತಜ್ಞತೆ ಸಲ್ಲಿಸಿದರು. ಆ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಗುರುದೇವರ ಅಸ್ತಿತ್ವದ ಅರಿವಾಗಿ ಭಾವಜಾಗೃತಿಯಾಗುವುದು

ಗುರುಗಳ ೭೮ ನೇ ಜನ್ಮದಿನ ಕಾರ್ಯಕ್ರಮದ ದಿನದಂದು ನಮ್ಮ ಮನೆಯ ಕೋಣೆಯ ವಾತಾವರಣ ತುಂಬಾ ಬದಲಾದಂತೆ ಅನಿಸಿತು. ಗುರುದೇವರ ಅಸ್ತಿತ್ತ್ವದ ಅರಿವಾಗುತ್ತಿತ್ತು. ಭಾವಜಾಗೃತಿಯಾಗುತ್ತಿತ್ತು. ಕಾರ್ಯಕ್ರಮ ಮುಗಿದ ಬಳಿಕ ಗುರುದೇವರ ಭಾವಚಿತ್ರ ಇಟ್ಟ ಕುರ್ಚಿಯ ಹತ್ತಿರ ಹೋಗಿ ನಮಸ್ಕಾರ ಮಾಡಿದೆ ಆಗ ಅವರು ‘ನಿನ್ನ ಹೃದಯದಲ್ಲಿ ವಿರಾಜಮಾನನಾಗಿದ್ದಾನೆ ಎಂದು ಹೇಳಿದಂತೆ ಆಯಿತು. – ಸೌ. ಗೌರಿ ಆಚಾರ್ಯ, ಮಂಗಳೂರು.

ಕಾರ್ಯಕ್ರಮ ನೋಡಿದ ಮೇಲೆ ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಹೆಚ್ಚಾಗುವುದು !

ಗುರುದೇವರ ಜನ್ಮದಿನ ಕಾರ್ಯಕ್ರಮದ ಪ್ರಾರಂಭದಲ್ಲಿ ತುಂಬಾ ಮೈ-ಕೈ ನೋವಾಗುತ್ತಿತ್ತು ಮತ್ತು ನಿದ್ದೆ ಬರುತ್ತಿತ್ತು. ಆದರೆ ಕಾರ್ಯಕ್ರಮದ ನೋಡುತ್ತಾ ಸ್ವಲ್ಪ ಹೊತ್ತಿನಲ್ಲಿ ಮೈ-ಕೈ ನೋವು ಸಂಪೂರ್ಣ ಕಡಿಮೆಯಾಯಿತು. ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಹೆಚ್ಚಾಯಿತು. ಮನಸ್ಸು ಆನಂದಮಯವಾಗಿತ್ತು. –  ಸೌ. ಯೋಗಿನಿ ಪೊಳಲಿ.

ವಿಚಾರಗಳು ಕಡಿಮೆಯಾಗಿ ಸತತ ನಾಮಜಪವಾಗುವುದು ಮತ್ತು ದೇಹವು ಹಗುರವಾದಂತೆ ಅನಿಸುವುದು !

ಕಾರ್ಯಕ್ರಮವನ್ನು ನೋಡಿದಾಗ ಪರಮಪೂಜ್ಯ ಗುರುದೇವರು ನಮ್ಮನ್ನು ಭಾವಲೋಕಕ್ಕೆ ಕರೆದುಕೊಂಡು ಹೋಗಿ ಭಾವಾವಸ್ಥೆಯನ್ನು ದೊರಕಿಸಿಕೊಟ್ಟರು. ಆಜ್ಞಾಚಕ್ರದಲ್ಲಿ ತಂಪಾದ ಅನುಭೂತಿಯಾಯಿತು. ವಿಚಾರಗಳು ಕಡಿಮೆಯಾಗಿ ಸತತ ನಾಮಜಪ ಆಗುತ್ತಿತ್ತು. ದೇಹವು ಹಗುರವಾದಂತೆ ಅನಿಸಿತು. –  ಸೌ. ವೇದಾವತಿ, ಮಂಗಳೂರು.

ಸತ್ಸಂಗ ನಡೆಯುತ್ತಿರುವಾಗ ಸುಗಂಧ ಬರುವುದು !

ಮೊದಲನೇ ದಿನದ ಕಾರ್ಯಕ್ರಮದಲ್ಲಿ ಸತ್ಸಂಗ ಆಗುತ್ತಿರುವಾಗ ಸುಗಂಧ ಬರುತ್ತಿತ್ತು. – ಶ್ರೀಮತಿ ಮಾಲಿನಿ ಹೆಗ್ಡೆ, ಮಂಗಳೂರು

ಕಾರ್ಯಕ್ರಮದ ಸಮಯದಲ್ಲಿ ಮನೆಯು ತುಂಬಾ ಸಾತ್ತ್ವಿಕ ಅನಿಸುವುದು ಹಾಗೂ ಶಾಂತಿಯ ಅನುಭವವಾಗುವುದು !

ಕಾರ್ಯಕ್ರಮದ ಸಮಯದಲ್ಲಿ ಮನೆಯಲ್ಲಿ ತುಂಬಾ ಸಾತ್ತ್ವಿಕ ಹಾಗೂ ಶಾಂತಿಯ ಅನುಭವವಾಗುತ್ತಿತ್ತು. ಕಾರ್ಯಕ್ರಮ ಮುಗಿದ ನಂತರ ನಾವು ಪ್ರಸಾದ ತೆಗೆದುಕೊಳ್ಳುವಾಗ ಅದರ ಪರಿಮಳ ಮತ್ತು ರುಚಿ ಸತ್ಯನಾರಾಯಣ ಕಥೆಯಲ್ಲಿ ಸಿಗುವ ಹಾಗೆ ಇತ್ತು. ಗುರುಗಳ ಬಗ್ಗೆ ತುಂಬಾ ಕೃತಜ್ಞತೆ ಅನಿಸಿತು. – ಸೌ. ಪ್ರಮಿಳಾ ಆರ್.

ಕಾರ್ಯಕ್ರಮ ದಿನದಂದು ಆಫೀಸ್‌ನಲ್ಲಿ ಮಹತ್ವ ಕೆಲಸವಿರುವುದು, ಆಗ ಓರ್ವ ಕಕ್ಷಿದಾರರೇ ಆ ಕೆಲಸ ಮಾಡಿ ಸ್ವತಃ ದೂರವಾಣಿ ಕರೆ ಮಾಡಿ ಹೇಳುವುದು !

ಗುರುದೇವರ ಕಾರ್ಯಕ್ರಮದ ದಿನ ನಾನು ಕಛೇರಿಗೆ ರಜೆ ಮಾಡಿದ್ದೆನು. ಆ ದಿನ ಓರ್ವ ಕಕ್ಷಿದಾರರ ಮಹತ್ವದ ಒಂದು ಕೆಲಸ ಮಾಡಲು ಇತ್ತು. ಆದರೆ ಜನ್ಮದಿನ ಕಾರ್ಯಕ್ರಮ ಸೇವೆಯಲ್ಲಿ ವ್ಯಸ್ತಳಾಗಿದ್ದರಿಂದ ನನಗೆ ಆ ಕಾರ್ಯದ ಕಡೆಗೆ ಗಮನ ಕೊಡಲು ಆಗಲಿಲ್ಲ. ಆದರೆ ಗುರುದೇವರ ಕೃಪೆಯಿಂದ ಆ ಕಕ್ಷಿದಾರರೇ ಆ ಕೆಲಸವನ್ನು ಪೂರ್ಣಗೊಳಿಸಿ ನನಗೆ ಕರೆ ಮಾಡಿ ತಿಳಿಸಿದರು. ಈ ಅಪೂರ್ವ ಅನುಭೂತಿ ನೀಡಿದ ಗುರುಚರಣಗಳಲ್ಲಿ ಅನಂತಕೋಟಿ ಕೃತಜ್ಞತೆಗಳು. – ಕು. ಮಾಧವಿ ಪೈ, ಮಂಗಳೂರು.

ಕಾರ್ಯಕ್ರಮದಲ್ಲಿ ಚೈತನ್ಯದ ಅನುಭೂತಿ ಬರುವುದು ಮತ್ತು ಎಲ್ಲೆಲ್ಲೂ ಹಳದಿ ಪ್ರಕಾಶವೇ ತುಂಬಿದಂತೆ ಕಾಣಿಸುವುದು ಕಾರ್ಯಕ್ರಮ ಮುಗಿದರೂ ಅದರ ಅರಿವಾಗದಿರುವುದು !

ಹಲವು ದಿನಗಳಿಂದ ಕಾದು ಕುಳಿತ್ತಿದ್ದ ಆ ಶುಭ ಮುಹೂರ್ತವು ಬರುವಾಗ ರೋಮಾಂಚನವಾಯಿತು. ಮನೆಯಂಗಳ ಗುಡಿಸಿ ಸಾರಿಸಿ ರಂಗೋಲಿ ಹಾಕಿ ಗುರುಗಳ ಸ್ವಾಗತಕ್ಕೆ ಮನೆಯನ್ನು, ಮನವನ್ನು ಸ್ವಚ್ಛವಾಗಿರಿಸಿದೆ. ಆ ಮಹಾನ್ ಚೈತನ್ಯ ಬರುವ ಅನುಭೂತಿಯನ್ನು ಅಪಾರ ಪ್ರಮಾಣದ ಶಕ್ತಿಯಿಂದ ಪಡೆದೆ. ಎಲ್ಲೆಲ್ಲೂ ಹಳದಿ ಪ್ರಕಾಶವೇ ತುಂಬಿತ್ತು. ಕಾರ್ಯಕ್ರಮ ನೋಡುವಾಗ ನಾನು ನಾನಾಗಿ ಇರಲಿಲ್ಲ. ಕಾರ್ಯಕ್ರಮದಲ್ಲಿ ಮೈ ಮರೆತೆ. ಕಾರ್ಯಕ್ರಮ ಮುಗಿದಿದೆ ಎಂದರೂ ನನ್ನ ಅರಿವಿಗೆ ಅದು ಬಂದಿರಲಿಲ್ಲ. ಸಂತರ, ಸದ್ಗುರುಗಳ ವಿಷಯ ಮಂಡನೆಯಿಂದ ತುಂಬಾ ಕಲಿಯಲು ಸಿಕ್ಕಿತು. ಇಂತಹ ಮಹಾನ್ ಜ್ಞಾನಗುರು ಹಾಗೂ ಮೋಕ್ಷ ಗುರುಗಳನ್ನು ಪಡೆದ ನಾವೇ ಧನ್ಯರು ಎಂದು ಕೃತಜ್ಞತೆ ಅನಿಸಿತು. – ಸೌ. ಆಶಾ ಭಟ್.

ಗುಡುಗು ಮಳೆಯ ಮುನ್ಸೂಚನೆ ಇದ್ದರೂ ಕಾರ್ಯಕ್ರಮ ಮುಗಿಯುವ ತನಕ ಏನೂ ಅಡಚಣೆಯಿಲ್ಲದೇ ಪೂರ್ಣ ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗುವುದು !

ನನಗೆ ಮನೆಯಲ್ಲಿ ಸಂಚಾರಿವಾಣಿಯ ‘ರೇಂಜ್ ಸಿಗದಿದ್ದಾಗ ಪಕ್ಕದ ಗುಡ್ಡಕ್ಕೆ ಹೋಗಿ ಕಾರ್ಯಕ್ರಮ ನೋಡುತ್ತಿದ್ದೆ. ಆ ಸಂದರ್ಭದಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದ್ದರೂ ಕಾರ್ಯಕ್ರಮ ಮುಗಿಯುವ ತನಕ ಏನೂ ಅಡಚಣೆಯಿಲ್ಲದೇ ಪೂರ್ಣ ಕಾರ್ಯಕ್ರಮ ವೀಕ್ಷಿಸಲು ಆಯಿತು. – ಸೌ. ಪದ್ಮಶ್ರೀ, ಪುತ್ತೂರು