ಸೋನಮ್ ವಾಂಗ್‌ಚುಕ್ ಅವರು ಉಪವಾಸ ಮುಕ್ತಾಯ !

ಸರಕಾರದ ಕಡೆಯಿಂದ 3 ಲಿಖಿತ ಭರವಸೆಗಳು ದೊರೆತ ನಂತರ ನಿರ್ಧಾರ!

ನವ ದೆಹಲಿ – ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ಪ್ರತಿಭಟನೆಯ 26 ನೇ ದಿನವಾದ ಜುಲೈ 23 ರ ಮಧ್ಯರಾತ್ರಿ 12.30 ಕ್ಕೆ ಅಂತಿಮವಾಗಿ ಉಪವಾಸವನ್ನು ಮುಕ್ತಾಯಗೊಳಿಸಿದರು. ವಾಂಗ್‌ಚುಕ್ ಅವರು ಮಾಹಿತಿ ನೀಡಿ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್, ಹಾಗೆಯೇ ಲಡಾಖ್‌ನ ಹಿರಿಯ ನಾಯಕರು ನನ್ನನ್ನು ಭೇಟಿಯಾಗಲು ಬಂದಿದ್ದರು. ಕಳೆದ 2 ದಿನಗಳಿಂದ ನನ್ನ ಹಾಗೂ ಸರಕಾರದ ನಡುವೆ ಚರ್ಚೆ ನಡೆಯುತ್ತಿತ್ತು. ನಾನು ಸರಕಾರದ ಬಳಿ ಲಿಖಿತ ಭರವಸೆಗಳನ್ನು ಕೇಳಿದ್ದೆ. ಸರಕಾರವು ನನ್ನ ಬೇಡಿಕೆಗಳ ಕುರಿತು ಲಿಖಿತ ಭರವಸೆಗಳನ್ನು ನೀಡಿತು. ಇದರಿಂದ ನಾನು ಉಪವಾಸವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಂಡೆ ಎಂದು ತಿಳಿಸಿದರು.

ಸರಕಾರವು ನೀಡಿದ 3 ಪ್ರಮುಖ ಲಿಖಿತ ಶರತ್ತುಗಳು!

ಸೋನಮ್ ವಾಂಗ್‌ಚುಕ್ ಅವರು ಮಾತನಾಡಿ, ಸರಕಾರವು ಕೆಳಗಿನ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಒಪ್ಪಿಕೊಂಡಿದೆ ಅದರಲ್ಲಿ :

1. ಜಂತರ್‌ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ ಅಥವಾ ಜುಲೈ 20 ರಂದು ‘ಸಂಸತ್ ಮೋರ್ಚಾ’ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಯುವಕರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಅಥವಾ ಪ್ರಕರಣ ದಾಖಲಿಸುವುದಿಲ್ಲ. (ಒಂದು ವೇಳೆ ಅವರು ವಿದ್ಯಾರ್ಥಿಗಳಲ್ಲದಿದ್ದರೆ ಮತ್ತು ಹಿಂಸಾಚಾರ ನಡೆಸಿದ್ದರೆ, ಅವರ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು? ಸಂವಿಧಾನದ ಉಲ್ಲೇಖ ಮಾಡುವ ವಾಂಗ್‌ಚುಕ್ ಅವರೇ ಇಂತಹ ಬೇಡಿಕೆಯನ್ನು ಇಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸುತ್ತಿದ್ದಾರೆ! – ಸಂಪಾದಕರು)

2. ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆಯಿಂದಾಗಿ ಜೀವ ಕಳೆದುಕೊಂಡ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಲಿದೆ.

3. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ, ಈ ಸಂಪೂರ್ಣ ವಿಷಯದ ಕುರಿತು, ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆಗಳ ಕುರಿತು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸರಕಾರದ ಜವಾಬ್ದಾರಿಯ ಕುರಿತು ಸಂಸತ್ತಿನಲ್ಲಿ ವಿಸ್ತೃತ ಚರ್ಚೆ ನಡೆಸಲಾಗುತ್ತದೆ.