‘ಹಿಂದೂ’ ಕುರಿತ ವಿವಾದಾತ್ಮಕ ಹೇಳಿಕೆ; 11 ಮಂದಿಗೆ ಹೈಕೋರ್ಟ್‌ ಹಿನ್ನಡೆ : Hindu Remark Verdict

ಛತ್ತೀಸ್‌ಗಢ ಉಚ್ಚ ನ್ಯಾಯಾಲಯದ ತೀರ್ಪು

ರಾಯಪುರ (ಛತ್ತೀಸ್‌ಗಢ್) – ಸಾರ್ವಜನಿಕ ಸ್ಥಳದಲ್ಲಿ ಹಿಂದೂ ಎಂಬುದು ಒಂದು ನಿಂದನಾತ್ಮಕ ಪದವಾಗಿದ್ದು, ಇದರರ್ಥ ಕಳ್ಳ, ಡಕಾಯಿತ, ದರೋಡೆಕೋರ ಮತ್ತು ಗುಲಾಮ ಎಂದಾಗುತ್ತದೆ ಎಂದು ಹೇಳಿಕೆ ನೀಡಿದ್ದ ಕ್ರಿಶ್ಚಿಯನ್ ಸಂಘಟನೆಗೆ ಸೇರಿದ 11 ಜನ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ರದ್ದುಗೊಳಿಸಲು ಛತ್ತೀಸ್‌ಗಢ ಉಚ್ಚ ನ್ಯಾಯಾಲಯವು ನಿರಾಕರಿಸಿದೆ.

ನ್ಯಾಯಾಲಯವು, ಈ ಪ್ರಕರಣದಲ್ಲಿ ಸಂಪೂರ್ಣ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಬಹುದಾದಂತಹ ಪ್ರಶ್ನೆಗಳು ಒಳಗೊಂಡಿವೆ ಎಂದು ಹೇಳಿದೆ. ಆರಂಭಿಕ ಹಂತದಲ್ಲಿ ಇದನ್ನು ನಿರ್ಧರಿಸಲು ಸಾಧ್ಯವಿಲ್ಲ, ಆದ್ದರಿಂದ ಮೊಕದ್ದಮೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಪ್ರಕರಣವು 2024ರ ಫೆಬ್ರವರಿಯಲ್ಲಿ ನಡೆದಿತ್ತು. ಆಗ ಛತ್ತೀಸ್‌ಗಢದ ಜಶ್‌ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹಿಂದೂ ಧರ್ಮದ ವಿರುದ್ಧ ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿತ್ತು. ಈ ಸಭೆಯನ್ನು ಭಾರತ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಕ್ರಿಶ್ಚಿಯನ್ ಮೋರ್ಚಾ ಸಂಘಟನೆಗಳು ಆಯೋಜಿಸಿದ್ದವು.