ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್‌ನಿಂದ ಇಳಿಸಿದ ಕಂಡಕ್ಟರ್! : Transport Minister Bus Incident

ಸಾರಿಗೆ ಸಚಿವರು ತಮ್ಮ ಗುರುತನ್ನು ಬಹಿರಂಗಪಡಿಸದೆ ಅನಿರೀಕ್ಷಿತವಾಗಿ ಬಸ್‌ನಲ್ಲಿ ಪ್ರಯಾಣಿಸಿದರು

ಬೆಂಗಳೂರು – ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಜುಲೈ 11ರ ರಾತ್ರಿ ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಯ ಮಾರ್ಗದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು. ಅವರು ಬಸ್ ಹತ್ತಿ ನಿರ್ವಾಹಕರ ಬಳಿ 2 ಟಿಕೆಟ್ ಕೇಳಿದರು. ಪ್ರಯಾಣ ದರಕ್ಕಾಗಿ ಸಚಿವರು ಬಸ್ ನಿರ್ವಾಹಕರಿಗೆ 100 ರೂಪಾಯಿ ನೋಟು ನೀಡಿದರು. ಅದಕ್ಕೆ ನಿರ್ವಾಹಕರು ಚಿಲ್ಲರೆ ಹಣಕ್ಕಾಗಿ ಕೇಳಿದರು. ಸಚಿವರು ಚಿಲ್ಲರೆ ಇಲ್ಲ ಎಂದು ಹೇಳಿದಾಗ, ನಿರ್ವಾಹಕರು ಅಸಭ್ಯವಾಗಿ ‘ಚಿಲ್ಲರೆ ಕೊಡಲು ಸಾಧ್ಯವಾಗದಿದ್ದರೆ ಬಸ್‌ನಿಂದ ಇಳಿಯಿರಿ’ ಎಂದು ಹೇಳಿದರು. ಸಚಿವರು ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಚಾಲಕ ಮತ್ತು ನಿರ್ವಾಹಕರಿಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಯಾವುದೇ ವಾದ ಮಾಡದೆ ಸಚಿವರು ಶಾಂತವಾಗಿ ಬಸ್‌ನಿಂದ ಕೆಳಗೆ ಇಳಿದರು; ಆದರೆ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿ, ನಂತರ ಈ ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸಲಾಯಿತು. (ಇಂತಹ ಎಷ್ಟು ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುತ್ತೀರಿ? – ಸಂಪಾದಕರು)

2 ಗಂಟೆಗಳ ಅವಧಿಯಲ್ಲಿ ಸಚಿವ ಸುರೇಶ್ ಅವರು 10ಕ್ಕೂ ಹೆಚ್ಚು ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸಿದರು. ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಖರೀದಿಸಿದರು, ಸಹಪ್ರಯಾಣಿಕರೊಂದಿಗೆ ಸಂಭಾಷಣೆ ನಡೆಸಿದರು ಮತ್ತು ಬಸ್ ಸೇವೆಯ ಕುರಿತು ಜನರ ಅಭಿಪ್ರಾಯಗಳನ್ನು ತಿಳಿದುಕೊಂಡರು.

ಬಿಎಂಟಿಸಿ ಬಸ್‌ನಲ್ಲಿದ್ದ ಒಬ್ಬ ಪ್ರಯಾಣಿಕರು ಬಸ್ ನಿಲ್ಲಿಸಲು ಸೂಚನೆ ನೀಡಿದರೂ, ಬಸ್ ಚಾಲಕ ಆ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ. ಈ ನಿರ್ಲಕ್ಷ್ಯವನ್ನು ಕಂಡು ಸಚಿವರು ಆ ಬಸ್‌ನ ಚಾಲಕ ಮತ್ತು ನಿರ್ವಾಹಕರನ್ನು ತಕ್ಷಣ ಅಮಾನತುಗೊಳಿಸಿದರು.

ಆಟೋ ಚಾಲಕನ ವಂಚನೆ ಮತ್ತು ಸಚಿವರ ಎಚ್ಚರಿಕೆ!

ಆಟೋದ ಮೀಟರ್‌ನಲ್ಲಿ 30 ರೂಪಾಯಿ ದರ ತೋರಿಸುತ್ತಿದ್ದರೂ, ಆಟೋ ಚಾಲಕ 36 ರೂಪಾಯಿ ಕೇಳುತ್ತಿದ್ದನು. ಸಚಿವರು ಈ ಬಗ್ಗೆ ವಿಚಾರಿಸಿದಾಗ ಚಾಲಕ ‘ಮೀಟರ್ ಅನ್ನು ನಂತರ ಸರಿಪಡಿಸಿಕೊಳ್ಳುತ್ತೇನೆ’ ಎಂದು ಹಾರಿಕೆಯ ಉತ್ತರ ನೀಡಿದನು. ಈ ಮೋಸವನ್ನು ನೋಡಿ ಅವರು ಆಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡರು ಮತ್ತು ಎಚ್ಚರಿಕೆ ನೀಡಿದರು. (ಹೆಚ್ಚಿನ ಆಟೋ ಚಾಲಕರು ಇಂತಹ ವಂಚನೆ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದ್ದರೂ, ಯಾವುದೇ ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ಇದೇ ವಾಸ್ತವ! – ಸಂಪಾದಕರು)

ಸಂಪಾದಕೀಯ ನಿಲುವು

ನಿರ್ವಾಹಕರ ಬಳಿ ಚಿಲ್ಲರೆ ಹಣ ಇಲ್ಲದಿರುವುದು ಇಡೀ ದೇಶದ ಸಮಸ್ಯೆಯಾಗಿದೆ. ಇದಕ್ಕೆ ಯಾವುದೇ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ಇದುವರೆಗೆ ಯಾವುದೇ ಪರಿಹಾರ ಕಂಡುಕೊಂಡಿಲ್ಲ, ಇದೇ ವಾಸ್ತವ!