ಮಾಲ್ಡಾ (ಬಂಗಾಲ) ಗಡಿ: ವಲಸಿಗರನ್ನು ವಾಪಸ್ ಕಳುಹಿಸುವಾಗ ಬಾಂಗ್ಲಾದೇಶೀಯರಿಂದ ವಿರೋಧ

ಮಾಲ್ಡಾ (ಬಂಗಾಳ) – ಮಾಲ್ಡಾ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಬಾಂಗ್ಲಾದೇಶ ಗಡಿಯ ಸುಕದೇವ್‌ಪುರ ಪ್ರದೇಶದಲ್ಲಿ ಜೂನ್ 20ರ ಮುಂಜಾನೆ ಕಾನೂನುಬಾಹಿರವಾಗಿ ಭಾರತದ ಗಡಿಯೊಳಗೆ ನುಗ್ಗಿದ್ದ ಬಾಂಗ್ಲಾದೇಶಿ ವಲಸಿಗರನ್ನು ಮರಳಿ ಅವರ ದೇಶಕ್ಕೆ ಕಳುಹಿಸುವ (ಪುಶ್‌ಬ್ಯಾಕ್) ಪ್ರಕ್ರಿಯೆ ನಡೆಯುತ್ತಿದ್ದಾಗ ಉದ್ವಿಗ್ನತೆ ಉಂಟಾಗಿದೆ. ಬಾಂಗ್ಲಾದೇಶದ ಗಡಿ ಭಾಗದಲ್ಲಿ ನೂರಾರು ಜನರ ಗುಂಪು ಜಮಾಯಿಸಿತು. ಬಾಂಗ್ಲಾದೇಶಿ ಜನರು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಇಡೀ ಪ್ರದೇಶವು ರಣರಂಗವಾಗಿ ಮಾರ್ಪಟ್ಟಿತು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯಲು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಹಿರಿಯ ಅಧಿಕಾರಿಗಳು ತಕ್ಷಣ ಹೆಚ್ಚುವರಿ ಪಡೆ ಕರೆಸಿದರು ಮತ್ತು ಮುಳ್ಳುತಂತಿಯ ಗಡಿಯ ಬಳಿ ಸೈನಿಕರ ಬಂದೋಬಸ್ತನ್ನು ದುಪ್ಪಟ್ಟುಗೊಳಿಸಿದರು.

1, 200 ಮೀಟರ್ ತೆರೆದ ಗಡಿಯೇ ತಲೆನೋವು

ಸುಕದೇವ್‌ಪುರದಲ್ಲಿ 1, 200 ಮೀಟರ್‌ನಷ್ಟು ಪ್ರದೇಶದಲ್ಲಿ ಮುಳ್ಳುತಂತಿಯ ಬೇಲಿಯೇ ಇಲ್ಲ. ಈ ತೆರೆದ ಮತ್ತು ಬೇಲಿ ಇಲ್ಲದ ಗಡಿಯು ದೀರ್ಘಕಾಲದಿಂದ ದೇಶದ ಭದ್ರತೆಗೆ ಅತ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ. ಈ ಮಾರ್ಗದಲ್ಲಿ ವಿವಾದ ಉಂಟಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇದೇ ಗಡಿಯ ಲಾಭ ಪಡೆದು ಬಾಂಗ್ಲಾದೇಶದ ನಾಗರಿಕರು ಭಾರತದ ಗಡಿಯೊಳಗೆ ನುಗ್ಗಿದ್ದಷ್ಟೇ ಅಲ್ಲದೆ, ಭಾರತೀಯ ರೈತರ ಹೊಲಗಳಲ್ಲಿದ್ದ ಬೆಳೆಯನ್ನು ಕಟಾವು ಮಾಡಿ ತಮ್ಮೊಂದಿಗೆ ಕೊಂಡೊಯ್ದಿದ್ದರು. ಈ ವಿಷಯವಾಗಿ ಹಲವು ವಾರಗಳ ಕಾಲ ಎರಡೂ ಕಡೆಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. ಇತ್ತೀಚಿನ ಘಟನೆಯ ನಂತರ ಇಡೀ ಗಡಿ ಪ್ರದೇಶದಲ್ಲಿ ಹೈ ಅಲರ್ಟ್ (ಅತಿ ಜಾಗರೂಕತೆ) ಘೋಷಿಸಲಾಗಿದೆ.

ಸುಕದೇವ್‌ಪುರ ಗಡಿಯಲ್ಲಿ ಬೇಲಿ ಇಲ್ಲದಿರುವುದು ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಿದಂತೆ! – ಬಿಜೆಪಿ ಸಂಸದ ಖಗೇನ್ ಮುರ್ಮು

ಈ ಘಟನೆಯ ಕುರಿತು ಬಿಜೆಪಿ ಸಂಸದ ಖಗೇನ್ ಮುರ್ಮು ಮಾತನಾಡಿ, “ಇದು ಅತ್ಯಂತ ಕಳವಳಕಾರಿ ಪರಿಸ್ಥಿತಿಯಾಗಿದೆ. ಸುಕದೇವ್‌ಪುರ ಗಡಿಯಲ್ಲಿ ಬೇಲಿ ಇಲ್ಲದಿರುವುದು ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಿದಂತೆ. ನಾವು ಈ 1,200 ಮೀಟರ್ ವ್ಯಾಪ್ತಿಯಲ್ಲಿ ಬೇಲಿ ಹಾಕುವಂತೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪದೇ ಪದೇ ಒತ್ತಾಯಿಸುತ್ತಿದ್ದೇವೆ. ವಲಸಿಗರ ಈ ದುಸ್ಸಾಹಸವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ತಮ್ಮ ಸ್ವಂತ ಮನೆಗಳಲ್ಲೇ ಸಾಮಾನ್ಯ ನಾಗರಿಕರು ಅಸುರಕ್ಷಿತರಾಗಿದ್ದಾರೆ! – ಬಿಜೆಪಿ ಶಾಸಕ ರಾಜು ಕರ್ಮಕರ್

ಸ್ಥಳೀಯ ಬಿಜೆಪಿ ಶಾಸಕ ರಾಜು ಕರ್ಮಕರ್ ಈ ಬಗ್ಗೆ ಮಾತನಾಡಿ, “ನಮ್ಮ ಭಾಗದ ರೈತರು ಮತ್ತು ಸಾಮಾನ್ಯ ನಾಗರಿಕರು ತಮ್ಮ ಸ್ವಂತ ಮನೆಗಳಲ್ಲೇ ಅಸುರಕ್ಷಿತ ಭಾವನೆ ಎದುರಿಸುತ್ತಿದ್ದಾರೆ. ಕಾನೂನುಬಾಹಿರ ವಲಸಿಗರು ಬರುತ್ತಾರೆ, ಗದ್ದಲ ಮಾಡುತ್ತಾರೆ ಮತ್ತು ನಮ್ಮ ಜನರನ್ನು ಹೆದರಿಸುತ್ತಾರೆ. ಈಗ ನಡೆದ ಘಟನೆ ಕಾನೂನು ಮತ್ತು ಸುವ್ಯವಸ್ಥೆಗೆ ಎದುರಾಗಿರುವ ನೇರ ಸವಾಲಾಗಿದೆ. ಗಡಿ ಗ್ರಾಮಗಳಿಗೆ ಭದ್ರತಾ ಕವಚ ನೀಡಬೇಕು ಮತ್ತು ಈ ಸೂಕ್ಷ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಾವು ಆಡಳಿತ ಮಂಡಳಿಯನ್ನು ಒತ್ತಾಯಿಸುತ್ತೇವೆ” ಎಂದರು.

ಸಂಪಾದಕೀಯ ನಿಲುವು

ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ವಲಸಿಗರನ್ನು ಹದ್ದುಬಸ್ತಿನಲ್ಲಿಡಲು ಭಾರತ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ!