​ಭಿತ್ತಿಪತ್ರ ಅಂಟಿಸಿದ ಮಹಿಳಾ ಅಧಿಕಾರಿಯ ವರ್ಗಾವಣೆ! – ನವಿ ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ

  • ಸಣ್ಣ ಮಕ್ಕಳಿಗೆ ಗೋಮಾಂಸ ತಿನ್ನಲು ಸಲಹೆ ನೀಡುವ ಭಿತ್ತಿಪತ್ರ ಅಂಟಿಸಿದ ಪ್ರಕರಣ

  • ​ಪ್ರಕರಣದ ತನಿಖೆ ನಡೆಸಿ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ

ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಕೈಲಾಸ ಶಿಂದೆ

​ನವಿ ಮುಂಬಯಿ – ಸಣ್ಣ ಮಕ್ಕಳಿಗೆ ‘ಗೋಮಾಂಸ’ ಆಹಾರ ನೀಡುವಂತೆ ಸಲಹೆ ನೀಡುವ ಭಿತ್ತಿಪತ್ರವನ್ನು ನವಿ ಮುಂಬಯಿ ಮಹಾನಗರ ಪಾಲಿಕೆಯ ವಾಶಿ ಆಸ್ಪತ್ರೆಯಲ್ಲಿ ಅಂಟಿಸಿದ್ದ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಕೈಲಾಸ ಶಿಂದೆ ತಿಳಿಸಿದ್ದಾರೆ. ‘ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸಿ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದರು.

​1. ಸಣ್ಣ ಮಕ್ಕಳಿಗೆ ಆಹಾರದಲ್ಲಿ ‘ಗೋಮಾಂಸ’ ನೀಡಬೇಕೆಂಬ ಭಿತ್ತಿಪತ್ರವನ್ನು ವಾಶಿ ಆಸ್ಪತ್ರೆಯಲ್ಲಿ ಅಂಟಿಸಲಾಗಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಿದ್ದರೂ ದೋಷಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಕಾರಣ, ಬಜರಂಗದಳದ ವತಿಯಿಂದ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯಲ್ಲಿ ಜನಾಕ್ರೋಶ ಆಂದೋಲನ ನಡೆಸಲಾಯಿತು.

​2. ನಗರ ಸೇವಕರಾದ ನಿಶಾಂತ ಭಗತ ಅವರು ಗಮನಸೆಳೆಯುವ ಸೂಚನೆಯ ಮೂಲಕ ಈ ವಿಷಯವನ್ನು ಮಹಾನಗರ ಪಾಲಿಕೆಯ ಮಹಾಸಭೆಯ ಸದನದಲ್ಲಿ ಮಂಡಿಸಿದರು. ‘ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಜವಾಬ್ದಾರರಾದ ವ್ಯಕ್ತಿಗಳ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಒತ್ತಾಯಿಸಿದರು.

​3. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರು ಮಹಾಸಭೆಯ ಸಭಾಂಗಣದ ಕೆಳಗೆ ಕುಳಿತು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ‘ಸರಕಾರಿ ಕಟ್ಟಡದಲ್ಲಿ ಇಂತಹ ಫಲಕಗಳನ್ನು ಹಾಕುವುದು ಗಂಭೀರ ವಿಷಯವಾಗಿದೆ’ ಎಂದು ಕಾರ್ಯಕರ್ತರು ಈ ಕುರಿತು ಆಯುಕ್ತರಿಗೆ ದೂರು ನೀಡಿದಾಗ, ಅವರು ‘ಇದು ಸಣ್ಣ ತಪ್ಪು, ಈ ವಿಷಯವನ್ನು ಕೈಬಿಡಿ’ ಎಂದು ಸಲಹೆ ನೀಡಿದ್ದರು ಎಂದು ಆರೋಪಿಸಲಾಯಿತು. ಈ ಪ್ರಕರಣದಲ್ಲಿ ಆಯುಕ್ತರು ಕ್ಷಮೆಯಾಚಿಸಬೇಕು, ಹಾಗೆಯೇ ‘ಸಂಬಂಧಿತ ಪ್ರಕರಣದ ತನಿಖೆ ನಡೆಸಿ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಭಗತ್ ಆಗ್ರಹಿಸಿದರು.

​4. ಸಭಾ ನಾಯಕ ಸಾಗರ ನಾಯಿಕ ಅವರು ಮಹಾನಗರ ಪಾಲಿಕೆಯ ವತಿಯಿಂದ ‘ಈ ಪ್ರಕರಣದಲ್ಲಿ ದೂರು ದಾಖಲಿಸಬೇಕು’ ಎಂದು ಸೂಚಿಸಿದರು. ಅಪರ್ಣಾ ಗವತೆ ಅವರು ತಮ್ಮ ವಾರ್ಡಿನ ಸಾಠೇನಗರ, ಸಂಜಯ ಗಾಂಧಿನಗರಗಳಲ್ಲಿ ಗೋಮಾಂಸ ಮಾರಾಟವಾಗುತ್ತಿದೆ ಎಂದು ತಿಳಿಸಿದರು. ಈ ಪ್ರಕರಣದ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಯಿತು.

​5. ಆಯುಕ್ತ ಡಾ. ಕೈಲಾಸ ಶಿಂದೆ ಮಾತನಾಡಿ, ನಾನು ಇದು ಸಣ್ಣ ತಪ್ಪು, ವಿಷಯವನ್ನು ಕೈಬಿಡಿ ಎಂಬ ಹೇಳಿಕೆ ನೀಡಿಲ್ಲ. ಸರಕಾರಿ ಕಟ್ಟಡದಲ್ಲಿ ಇಂತಹ ಭಿತ್ತಿಪತ್ರವನ್ನು ಅಂಟಿಸುವುದು ಯೋಗ್ಯವಲ್ಲ. ಎಲ್ಲರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಈ ವಿಷಯದ ಗಾಂಭೀರ್ಯತೆಯನ್ನು ಅರಿತು ತಕ್ಷಣ ಸಂಬಂಧಿತ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸಿ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ವರ್ಗಾವಣೆ ಮಾಡುವುದರಿಂದ ಏನಾಗುತ್ತದೆ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇಂತಹವರನ್ನು ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಬೇಕು!