ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ

ನವದೆಹಲಿ – ಒಮಾನ್ ಗಲ್ಫ್‌ನಲ್ಲಿ (ಒಮಾನ್ ಕೊಲ್ಲಿ) ವ್ಯಾಪಾರಿ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಿರುವುದು ಕಂಡುಬರುತ್ತಿದೆ. ಭಾರತೀಯ ನಾವಿಕರ ಸಾವಿಗೆ ಭಾರತವು ತೀವ್ರ ಪ್ರತಿರೋಧ ಮತ್ತು ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ಆರಂಭವಾಗಿವೆ. ಇದರೊಂದಿಗೆ, ಭಾರತೀಯ ನಾವಿಕರಿದ್ದ ಇತರ ಎರಡು ಹಡಗುಗಳನ್ನೂ ಅಮೆರಿಕ ಗುರಿಯಾಗಿಸಿಕೊಂಡಿರುವುದಕ್ಕೆ ಭಾರತವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಡಾ. ಜೈಶಂಕರ್ ಅವರಿಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ಖಡಕ್ ಸಂದೇಶ !

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ (ವಿದೇಶಾಂಗ ಸಚಿವ) ಮಾರ್ಕೊ ರೂಬಿಯೋ ಅವರಿಗೆ ದೂರವಾಣಿ ಕರೆ ಮಾಡಿ, ಭಾರತೀಯ ನಾವಿಕರ ಸಾವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯ ನಂತರ, ಭಾರತವು ಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳನ್ನು ಎರಡು ಬಾರಿ ಕರೆಸಿ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಂದುವರೆದ ಅಮೆರಿಕದ ದರ್ಪ !

ಈ ವಿಷಯದ ಕುರಿತು ಅಮೆರಿಕ ತನ್ನ ನಿಲುವನ್ನು ಪುನರುಚ್ಚರಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಚಲಿಸುವ ಎಲ್ಲಾ ವ್ಯಾಪಾರಿ ಹಡಗುಗಳು ಅಮೆರಿಕನ್ ಮಿಲಿಟರಿಯ ಆದೇಶಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ವಲಯದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಲು ಅಮೆರಿಕನ್ ಮಿಲಿಟರಿ ಕಾರ್ಯನಿರ್ವಹಿಸುತ್ತಿದ್ದು, ದಿಗ್ಬಂಧನದ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಮುಖ್ಯ ಉಪ ವಕ್ತಾರ ಟಾಮಿ ಪಿಗಾಟ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಭಾರತ !

ಈ ಘಟನೆಗಳ ನಂತರ, ಭಾರತವು ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ (ಯುನೈಟೆಡ್ ನೇಷನ್ಸ್) ಪ್ರಸ್ತಾಪಿಸಿ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಹಡಗುಗಳ ಮೇಲಿನ ದಾಳಿಗೆ ಇರಾನ್ ಕಾರಣ ಎಂದು ದೂಷಿಸಿದ್ದಾರೆ. ಇರಾನ್‌ನ ಡ್ರೋನ್‌ಗಳ ಮೂಲಕ ಭಾರತೀಯ ಹಡಗುಗಳನ್ನು ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ; ಆದರೆ ಇರಾನ್ ಈ ಆರೋಪವನ್ನು ತಳ್ಳಿಹಾಕಿದೆ.