ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!

1 ವಿಷಯಕ್ಕೆ 6 ಸಾವಿರ ರೂಪಾಯಿ ನೀಡಿದರೆ ಪದವಿ ತೇರ್ಗಡೆ ಪ್ರಮಾಣಪತ್ರ ಲಭ್ಯ !

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ

ಬಳ್ಳಾರಿ – ಇಲ್ಲಿನ ಪ್ರತಿಷ್ಠಿತ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ದೊಡ್ಡ ದಂಧೆ (ರಾಕೆಟ್) ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಈ ‘ಪಾಸ್ ಮಾಡುವ ಧಂಧೆ’ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಒಂದು ವಿಷಯಕ್ಕೆ 6 ಸಾವಿರ ರೂಪಾಯಿ ವಸೂಲಿ ಮಾಡಿ ಅವರನ್ನು ಅಕ್ರಮವಾಗಿ ತೇರ್ಗಡೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ಯುನಿವರ್ಸಿಟಿ ಕಂಪ್ಯೂಟರ್ ಮೇಂಟೆನೆನ್ಸ್ ಸೆಲ್’ (ಯು.ಸಿ.ಎಂ.ಸಿ.) ಈ ವಿಭಾಗದ ಉದ್ಯೋಗಿಗಳೇ ಈ ‘ರಾಕೆಟ್’ನ ಮುಖ್ಯ ಸೂತ್ರಧಾರರಾಗಿದ್ದಾರೆ. ಈ ವಿಭಾಗದ ರಿಯಾಜ್ ಮತ್ತು ವೆಂಕಟೇಶ್ ಎಂಬ ಉದ್ಯೋಗಿಗಳು ವಿದ್ಯಾರ್ಥಿಗಳೊಂದಿಗೆ ಹಣದ ವ್ಯವಹಾರದ ಕುರಿತು ನಡೆಸಿದ ಸಂಭಾಷಣೆಯ ಧ್ವನಿಮುದ್ರಣ (ಆಡಿಯೋ ಕ್ಲಿಪ್) ಬಹಿರಂಗವಾಗಿದೆ.

ಎಬಿವಿಪಿಯಿಂದ ಪ್ರತಿಭಟನೆ!

ವಿಶ್ವವಿದ್ಯಾಲಯದ ಈ ಭ್ರಷ್ಟಾಚಾರವನ್ನು ಖಂಡಿಸಿ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ (ಎಬಿವಿಪಿ) ಸಂಘಟನೆಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸಂಪಾದಕೀಯ ನಿಲುವು

  • ವಿಶ್ವವಿದ್ಯಾಲಯದ ಶಿಕ್ಷಕರಾಗಲಿ ಅಥವಾ ಇತರ ಉದ್ಯೋಗಿಗಳಾಗಲಿ ಉನ್ನತ ಶಿಕ್ಷಣ ಪಡೆದವರಾಗಿರುತ್ತಾರೆ, ಅವರಿಗೆ ಬಹಳ ಸಂಬಳ ಸಿಗುತ್ತಿರುತ್ತದೆ, ಆದರೂ ಅವರು ಭ್ರಷ್ಟಾಚಾರದ ಮಾರ್ಗವನ್ನು ಅನುಸರಿಸುತ್ತಾರೆ. ಈ ಭ್ರಷ್ಟಾಚಾರವನ್ನು ಕೊನೆಗಾಣಿಸಲು ದೋಷಿಗಳಿಗೆ ಕಠಿಣ ಶಿಕ್ಷೆಯಾಗಬೇಕು!
  • ಇಂತಹ ವಿದ್ಯಾವಂತರಿಗೆ ಅವರ ವಿದ್ಯಾರ್ಥಿ ದೆಸೆಯಲ್ಲಿ ಧರ್ಮಶಿಕ್ಷಣ ಮತ್ತು ನೈತಿಕ ಮೌಲ್ಯಗಳನ್ನು ಕಲಿಸದಿರುವುದರ ಪರಿಣಾಮವೇ ಇದಾಗಿದೆ!