ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಎಚ್ಚರಿಕೆ

ಬಿಜನೌರ್ (ಉತ್ತರಪ್ರದೇಶ) – ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯು ಯಾವಾಗಲೂ ಧರ್ಮದ ರಕ್ಷಣೆಯ ಸಂದೇಶವನ್ನು ನೀಡುತ್ತದೆ. ‘ಯಾರು ಧರ್ಮವನ್ನು ರಕ್ಷಿಸುತ್ತಾರೋ, ಧರ್ಮವು ಅವರನ್ನು ರಕ್ಷಿಸುತ್ತದೆ.’ ಧರ್ಮವನ್ನು ರಕ್ಷಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಮತ್ತು ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ (ರಾಮಾಯಣದ ಅಸುರರು) ವ್ಯಕ್ತಿಗಳಿದ್ದರೆ, ಶಸ್ತ್ರ ಎತ್ತಬೇಕಾದ ಸಮಯವೂ ಬರಬಹುದು ಎಂದು ಯೋಗಿ ಆದಿತ್ಯನಾಥ ಅವರು ಇಲ್ಲಿ ಮಾರ್ಗದರ್ಶನ ಮಾಡಿದರು. ಪಾಕಿಸ್ತಾನದಿಂದ ಬಂದಿರುವ ನಿರಾಶ್ರಿತ ಹಿಂದೂ ಕುಟುಂಬಗಳಿಗೆ ಭೂಮಿಯ ಮಾಲೀಕತ್ವದ ಹಕ್ಕನ್ನು ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸ್ನೇಹದ ಹೆಸರಿನಲ್ಲಿ ಚಾಕು ಇರಿಯುವ ಘಟನೆಗಳನ್ನು ಸಹಿಸುವುದಿಲ್ಲ !

ಗಾಜಿಯಾಬಾದ್ ನ ಬಹುಚರ್ಚಿತ ‘ಸೂರ್ಯ ಚೌಹಾಣ್ ಹತ್ಯಾಕಾಂಡ’ವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಯವರು, ಸ್ನೇಹದ ಹೆಸರಿನಲ್ಲಿ ಚಾಕು ಇರಿಯುವುದನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಗಾಜಿಯಾಬಾದ್ ನ ಈ ಘಟನೆಯು ಸಮಾಜವನ್ನು ಬೆಚ್ಚಿಬೀಳಿಸಿದೆ ಮತ್ತು ಯಾರಾದರೂ ತಮ್ಮ ಮಕ್ಕಳಿಗೆ ಸರಿಯಾದ ದಿಕ್ಕು ತೋರಿಸಲು ಸಾಧ್ಯವಾಗದಿದ್ದರೆ, ಅದು ಅವರ ದೊಡ್ಡ ತಪ್ಪಾಗಿದೆ. ಸರಕಾರದ ಸಹಾನುಭೂತಿ ಯಾವಾಗಲೂ ಸಾಮಾನ್ಯ ಮತ್ತು ಕಾನೂನನ್ನು ಪಾಲಿಸುವ ನಾಗರಿಕರೊಂದಿಗಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯೊಂದಿಗೆ ಆಟವಾಡುವವರ ವಿರುದ್ಧ ಸರಕಾರ ಕಠಿಣ ನಿಲುವು ತಳೆಯಲಿದೆ ಹಾಗೂ ಇಂತಹ ಘಟನೆಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸುವುದಿಲ್ಲ ಎಂದರು.

ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲು ಒತ್ತಾಯಿಸುವವರು ಅದನ್ನು ಕೇವಲ ಪ್ರಾಣಿಯಾಗಿ ನೋಡುತ್ತಾರೆ !

ಗೋವಂಶ ಸಂರಕ್ಷಣೆಯ ವಿಷಯದ ಕುರಿತು ಮಾತನಾಡಿದ ಮುಖ್ಯಮಂತ್ರಿಯವರು, ಕೆಲವು ಜನರು ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲು ಒತ್ತಾಯಿಸುತ್ತಾರೆ; ಆದರೆ ಗೋವನ್ನು ಕೇವಲ ‘ಪ್ರಾಣಿ’ ಎಂದು ಸಂಬೋಧಿಸುತ್ತಾರೆ. ಭಾರತದಲ್ಲಿ ಗೋಮಾತೆಯ ಬಗೆಗಿನ ಶ್ರದ್ಧೆ ಮತ್ತು ಗೌರವದ ಸಂಪ್ರದಾಯವು ಶತಮಾನಗಳಷ್ಟು ಹಳೆಯದಾಗಿದೆ. ಉತ್ತರಪ್ರದೇಶದಲ್ಲಿ ಗೋಹತ್ಯೆಯ ವಿರುದ್ಧ ಕಠಿಣ ಕಾನೂನು ಜಾರಿಯಲ್ಲಿದ್ದು, ಸರಕಾರವು ಈ ವಿಷಯದಲ್ಲಿ ಯಾವುದೇ ಸಡಿಲಿಕೆ ಸಹಿಸುವುದಿಲ್ಲವೆಂದು ಅವರು ಮತ್ತೊಮ್ಮೆ ದೃಢವಾಗಿ ಹೇಳಿದರು.