ಇಸ್ಲಾಮಿಕ್ ಹಬ್ಬಗಳ ಸಮಯದಲ್ಲಿ ಹಸು ಮತ್ತು ಕರುಗಳ ಹತ್ಯೆಯಾಗದಂತೆ ಜಾಗ್ರತೆ ವಹಿಸಿ! : Madras High Court

ಮದ್ರಾಸ್ ಉಚ್ಚ ನ್ಯಾಯಾಲಯದ ತಮಿಳುನಾಡು ಸರಕಾರಕ್ಕೆ ಆದೇಶ

ಚೆನ್ನೈ (ತಮಿಳುನಾಡು) – ಬಕ್ರೀದ್ ಅಥವಾ ಇಸ್ಲಾಮಿಕ್ ಹಬ್ಬಗಳ ದಿನದಂದು ಯಾವುದೇ ಕಾರಣಕ್ಕೂ ಹಸುಗಳು ಅಥವಾ ಕರುಗಳ ವಧೆಯಾಗದಂತೆ ಜಾಗ್ರತೆ ವಹಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಮೇ 27 ರಂದು ತಮಿಳುನಾಡು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಗೋಹತ್ಯೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ ದಾಖಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಾಲಯವು ರಾಜ್ಯದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿತು.

1. ಹಿಂದೂ ಮಕ್ಕಲ್‌ ಕಚ್ಚಿ (ಹಿಂದೂ ಜನತಾ ಪಕ್ಷ) ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಅವರು ಮೇ 18 ರಂದು ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ, ಅದನ್ನು ತಡೆಯಲು ಮತ್ತು ಹಸುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಮನವಿ ಸಲ್ಲಿಸಿದ್ದರು. ಆದಾಗ್ಯೂ ಅಧಿಕಾರಿಗಳು ಆ ಮನವಿಯನ್ನು ಪರಿಗಣಿಸಿಲ್ಲ ಎಂದು ಅರ್ಜಿದಾರರು ದೂರು ನೀಡಿದ್ದರು.

2. ನ್ಯಾಯಾಲಯವು, ನಾವು ಈ ‘ರಿಟ್ ಅರ್ಜಿಯನ್ನು’ ಸ್ವೀಕರಿಸುತ್ತೇವೆ ಮತ್ತು ಬಕ್ರೀದ್ ಹಬ್ಬದ ದಿನದಂದು ಅಥವಾ ಇನ್ಯಾವುದೇ ದಿನದಂದು ಹಸುಗಳು ಮತ್ತು ಕರುಗಳ ವಧೆಯಾಗದಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿತು. ಈ ಆದೇಶದ ಉಲ್ಲಂಘನೆಯಾಗದಂತೆ ಖಚಿತಪಡಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಬೇಕು.

3. ಸಂವಿಧಾನದ ವಿಧಿ 48 ರ ಪ್ರಕಾರ ರಾಜ್ಯ ಸರಕಾರವು ಹಸುಗಳು, ಕರುಗಳು ಮತ್ತು ಇತರ ಹಾಲು ಕೊಡುವ ಹಾಗೂ ಕೃಷಿ ಪ್ರಾಣಿಗಳ ವಧೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವು ನೆನಪಿಸಿತು.

4. ಸಂವಿಧಾನ ಸಭೆಯ ಚರ್ಚೆಯನ್ನು ಉಲ್ಲೇಖಿಸಿದ ಪೀಠವು, ಭಾರತೀಯ ಸಂಸ್ಕೃತಿಯಲ್ಲಿ ಹಸು ಪೂಜನೀಯ ಪ್ರಾಣಿಯಾಗಿದೆ. ಗೋರಕ್ಷಣೆಯು ಮ. ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ವಿಷಯವಾಗಿತ್ತು ಮತ್ತು ಇಸ್ಲಾಮಿಕ್ ಆಡಳಿತದಲ್ಲೂ ಗೋಹತ್ಯೆಗೆ ನಿಷೇಧವಿತ್ತು, ಎಂದು ನಮೂದಿಸಿದೆ. ಬಕ್ರೀದ್ ನಿಮಿತ್ತ ಗೋಹತ್ಯೆ ಮಾಡುವುದು ಮುಸ್ಲಿಮರಿಗೆ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

5. ‘ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ, 1958’ ರ ಸೆಕ್ಷನ್ 4 ರ ಪ್ರಕಾರ ಕೇವಲ 10 ವರ್ಷಗಳಿಗಿಂತ ಹೆಚ್ಚು ವಯಸ್ಸಿನ ಮತ್ತು ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥವಾಗಿರುವ ಪ್ರಾಣಿಗಳ ವಧೆಗೆ ಮಾತ್ರ ಅನುಮತಿ ನೀಡಬಹುದು ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ ಇದಕ್ಕಾಗಿ ಅಧಿಕಾರಿಗಳಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಹಾಲು ಉತ್ಪಾದನೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲು ರಾಜ್ಯ ಸರಕಾರವು ಗೋಹತ್ಯೆಯನ್ನು ನಿಷೇಧಿಸಿ ಹೊರಡಿಸಿದ್ದ ಕಾರ್ಯಾಂಗದ ಆದೇಶವನ್ನು ನ್ಯಾಯಾಲಯವು ಎತ್ತಿಹಿಡಿದಿದೆ.

ಸಂಪಾದಕೀಯ ನಿಲುವು

ಇದನ್ನು ಸರಕಾರಕ್ಕೆ ಹೇಳಬೇಕಾಗಿ ಬರುವುದೇ? ಸರಕಾರಕ್ಕೆ ಸ್ವತಃ ತಿಳಿಯುವುದಿಲ್ಲವೇ?