ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಗೋರಕ್ಷಣೆಗಾಗಿ ‘ಗೋ-ಎಲ್‌ಎಕ್ಸ್’ ಎಂಬ ಹೆಸರಿನ ಜಾಲತಾಣ ಆರಂಭಿಸಲಿದ್ದಾರೆ !

ಜಾಲತಾಣದ ಮೂಲಕ ನಡೆಯಲಿದೆ ಹಸುಗಳ ಖರೀದಿ ಮತ್ತು ಮಾರಾಟ

ವಾರಾಣಸಿ (ಉತ್ತರ ಪ್ರದೇಶ) – ದ್ವಾರಕಾ ಮತ್ತು ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಹಸುಗಳ ಖರೀದಿ ಮತ್ತು ಮಾರಾಟಕ್ಕಾಗಿ ‘ಗೋ-ಎಲ್‌ಎಕ್ಸ್’ ಹೆಸರಿನ ಜಾಲತಾಣವೊಂದನ್ನು ನಿರ್ಮಿಸಲು ನಿರ್ಧರಿಸಿದ್ದಾರೆ.

ಗೋರಕ್ಷಕರು ಹಸುಗಳನ್ನು ಖರೀದಿಸಬಹುದು !

ಶಂಕರಾಚಾರ್ಯರು ಮಾತನಾಡಿ, ಹಸುಗಳನ್ನು ಮಾರಾಟ ಮಾಡಲು ಬಯಸುವ ಪಶುಪಾಲಕರು ಅಥವಾ ವ್ಯಾಪಾರಿಗಳು ಈ ಜಾಲತಾಣದಲ್ಲಿ ಜಾಹೀರಾತು ನೀಡಬಹುದು. ಯಾವುದೇ ಹಿಂದೂ ತನ್ನ ಹಸುವನ್ನು ಮಾರಾಟ ಮಾಡಲು ಬಯಸಿದರೆ, ಅದನ್ನು ನನಗೆ ಮಾರಾಟ ಮಾಡಲಿ. ನಾವು ಹಸುಗಳನ್ನು ಖರೀದಿಸಲು ಸಿದ್ಧರಿದ್ದೇವೆ. ನಾವು ಹಸುಗಳನ್ನು ಕತ್ತರಿಸಲು ಬಿಡುವುದಿಲ್ಲ ಮತ್ತು ಯಾವುದೇ ಗೋಹಂತಕರಿಗೂ ಹಸುವನ್ನು ಖರೀದಿಸಲು ಬಿಡುವುದಿಲ್ಲ. ನಾವು ಹಸುಗಳನ್ನು ಖರೀದಿಸಿ ಅವುಗಳ ಸೇವೆ ಮಾಡುತ್ತೇವೆ. ಗೋರಕ್ಷಣೆಗೆ ಸಮರ್ಪಿಸಿಕೊಂಡಿರುವ ಇತರ ಜನರೂ ಸಹ ಆ ಹಸುಗಳನ್ನು ಖರೀದಿಸಿ ಅವುಗಳ ಸೇವೆ ಮಾಡಬಹುದು ಎಂದರು.

ಜಾಲತಾಣವನ್ನು ಆರಂಭಿಸುವ ಉದ್ದೇಶ,

ಹಸುಗಳನ್ನು ಆನ್‌ ಲೈನ್ ಮೂಲಕ ಖರೀದಿಸುವ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಶಂಕರಾಚಾರ್ಯರು, ಸಾಮಾಜಿಕ ಮಾಧ್ಯಮಗಳು ಮತ್ತು ಕೆಲವು ಸುದ್ದಿ ಮಾಧ್ಯಮಗಳ ಮೂಲಕ ಹರಡಲಾಗುತ್ತಿರುವ ವಿಷಯವೆಂದರೆ, ಒಂದು ವೇಳೆ ಮುಸ್ಲಿಮರು ಹಸುಗಳನ್ನು ಖರೀದಿಸುವುದನ್ನು ನಿಲ್ಲಿಸಿದರೆ ಅಥವಾ ಗೋಮಾಂಸ ತಿನ್ನುವುದನ್ನು ಬಿಟ್ಟರೆ, ಹಿಂದೂ ಪಶುಪಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಬಿಂಬಿಸಲಾಗುತ್ತಿದೆ. ಹಾಲು ಕೊಡುವುದನ್ನು ನಿಲ್ಲಿಸಿರುವ ಅಥವಾ ಕಸಾಯಿಖಾನೆಗೆ ಮಾರಾಟ ಮಾಡಲು ಇಟ್ಟಿರುವ ಹಸುಗಳನ್ನು ನಾವು ಖರೀದಿಸುತ್ತೇವೆ. ಯಾವುದೇ ನಿಜವಾದ ಹಿಂದೂ ತನ್ನ ಹಸುವನ್ನು ಕತ್ತರಿಸಲು ಮಾರಾಟ ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯಲ್ಲಿ ನಿಜವಾದ ಹಿಂದುತ್ವವಿದ್ದರೆ, ಅವನು ಎಂದಿಗೂ ಹಸುವನ್ನು ಕಸಾಯಿಯ ಕೈಗೆ ಒಪ್ಪಿಸುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಹಸುಗಳು ಕಸಾಯಿಖಾನೆಗೆ ಹೋಗುವುದನ್ನು ತಡೆಯುವುದೇ ‘ಗೋ-ಎಲ್‌ಎಕ್ಸ್’ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಈ ವೇದಿಕೆಯು ‘ಒಎಲ್‌ಎಕ್ಸ್’ ( ಆನ್‌ ಲೈನ್‌ ನಲ್ಲಿ ವಸ್ತುಗಳ ಖರೀದಿ-ಮಾರಾಟ ಮಾಡುವ ಜಾಲತಾಣ) ಮಾದರಿಯಲ್ಲೇ ಕೆಲಸ ಮಾಡಲಿದೆ” ಎಂದು ಹೇಳಿದರು.

ಮುಸ್ಲಿಮರಿಂದ ಗೋಹತ್ಯೆ ನಿಷೇಧಕ್ಕೆ ಬೆಂಬಲ,

ಭಾರತದಲ್ಲಿ ಗೋಹತ್ಯೆ ನಿಷೇಧವನ್ನು ಮುಸ್ಲಿಂ ಸಮುದಾಯವೂ ಬೆಂಬಲಿಸುತ್ತಿದೆ ಎಂದು ಶಂಕರಾಚಾರ್ಯರು ತಿಳಿಸಿದರು. ಮುಸ್ಲಿಂ ಸಮುದಾಯದ ಅನೇಕ ಜನರು ನಮ್ಮೊಂದಿಗಿದ್ದಾರೆ. ‘ಇಸ್ಲಾಂನಲ್ಲಿ ಗೋಮಾಂಸ ಸೇವಿಸುವುದು ಯಾವುದೇ ಕಡ್ಡಾಯ ಧಾರ್ಮಿಕ ಕರ್ತವ್ಯವಲ್ಲ’ ಎಂಬುದನ್ನು ಮುಸ್ಲಿಮರು ಒಪ್ಪಿಕೊಂಡಿದ್ದಾರೆ. ನಾವು ಅಂತಹ ಜನರನ್ನು ಸ್ವಾಗತಿಸುತ್ತೇವೆ. ದೇಶದಲ್ಲಿ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ನಿಂತರೆ, ಇದರಿಂದ ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಸದ್ಭಾವನೆಗೆ ಹೆಚ್ಚಿನ ಬಲ ಸಿಗುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

  • ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋಹತ್ಯೆಗಳು ನಡೆಯುತ್ತಲೇ ಇರುವುದರಿಂದ, ಶಂಕರಾಚಾರ್ಯರೇ ಗೋಹತ್ಯೆ ತಡೆಯಲು ಪ್ರಯತ್ನಿಸಬೇಕಾಗಿ ಬಂದಿರುವುದು ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ!
  • ದೇಶದಲ್ಲಿ ಗೋಹತ್ಯೆಯನ್ನು ಶಾಶ್ವತವಾಗಿ ತಡೆಗಟ್ಟಲು ಧರ್ಮಾಚರಣೆ ಮಾಡುವ ಆಡಳಿತಗಾರರಿರುವ ಹಿಂದೂ ರಾಷ್ಟ್ರವೇ ಬೇಕು!