ಯಾರಿಗೆ ಪರೀಕ್ಷೆ ಮಾಡಬೇಕಾಗಿದೆಯೋ ಅವರು ದರ್ಬಾರಿಗೆ ಬರಬೇಕು ! – ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ

ಅಧರ್ಮವನ್ನು ಪ್ರೋತ್ಸಾಹಿಸುವ ಶ್ಯಾಮ್ ಮಾನವ್ ಅವರು ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ ಸವಾಲು ಹಾಕಿದ ಪ್ರಕರಣ

ನಾಗಪುರ – ಬಾಗೇಶ್ವರ್ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಪವಾಡಗಳಿಗೆ ಸವಾಲು ಹಾಕುತ್ತಾ ‘ಅಖಿಲ ಭಾರತೀಯ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ’ಯು ಬಹುಮಾನದ ಮೊತ್ತವನ್ನು 30 ಲಕ್ಷ ರೂಪಾಯಿಗಳಿಂದ 80 ಲಕ್ಷ ರೂಪಾಯಿಗಳಿಗೆ ಏರಿಸಿದೆ. ಸಮಿತಿಯ ಸಂಚಾಲಕ ಶ್ಯಾಮ್ ಮಾನವ್ ಈ ಸವಾಲನ್ನು ನೀಡಿದ್ದು, ಅದಕ್ಕೆ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಯಾರಿಗೆ ಪರೀಕ್ಷೆ ಮಾಡಬೇಕಾಗಿದೆಯೋ ಅವರು ದರ್ಬಾರಿಗೆ ಬರಬೇಕು ಎಂದು ಪ್ರತ್ಯುತ್ತರ ನೀಡಿದ್ದಾರೆ. ಶ್ಯಾಮ್ ಮಾನವ್ ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸವಾಲಿನ ಷರತ್ತುಗಳ ಮಾಹಿತಿಯನ್ನು ನೀಡಿದ್ದಾರೆ.

ಶ್ಯಾಮ್ ಮಾನವ್ ಅವರು ನೀಡಿದ ಸವಾಲಿನ ಷರತ್ತುಗಳು !

1. ಈ ಪರೀಕ್ಷೆಯು ಕೇವಲ ನಾಗಪುರದ ಪತ್ರಕಾರ್ ಭವನದಲ್ಲಿ ಮಾತ್ರ ನಡೆಯಬಹುದಾಗಿದೆ.

2. ಒಂದು ಪಂಚ ಸಮಿತಿಯನ್ನು ಸ್ಥಾಪಿಸಲಾಗುವುದು. ಇದಕ್ಕೆ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸಮ್ಮತಿಯೂ ಇರಬೇಕು. ಪರೀಕ್ಷೆಯ ಸಮಯದಲ್ಲಿ ಅವರ ಮತ್ತು ಅಲ್ಲಿ ಉಪಸ್ಥಿತರಿರುವ ಇತರ ಜನರ ಮೊಬೈಲ್ ಫೋನ್‌ಗಳನ್ನು ಸೀಲ್ ಮಾಡಲಾಗುವುದು.

3. ಮಹಾರಾಜರ ಮುಂದೆ ಅನಿರೀಕ್ಷಿತವಾಗಿ 10 ಅಪರಿಚಿತ ವ್ಯಕ್ತಿಗಳನ್ನು ತರಲಾಗುವುದು. ಮಹಾರಾಜರು ಆ ವ್ಯಕ್ತಿಗಳ ಹೆಸರು, ಅವರ ತಂದೆಯ ಹೆಸರು, ಉಪನಾಮ ಮತ್ತು ಮೊಬೈಲ್ ಸಂಖ್ಯೆಯನ್ನು ಹೇಳಬೇಕಾಗುತ್ತದೆ, ಹಾಗೆಯೇ ಹತ್ತಿರವಿರುವ 10 ವಸ್ತುಗಳನ್ನು ತಮ್ಮ ದಿವ್ಯ ದೃಷ್ಟಿಯಿಂದ ಗುರುತಿಸಬೇಕಾಗುತ್ತದೆ.

4. ಅವರು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾದರೆ, 5 ದಿನಗಳ ನಂತರ ಹೊಸ ಜನರೊಂದಿಗೆ ಇದೇ ಪ್ರಕ್ರಿಯೆಯನ್ನು ಮತ್ತೆ ಮಾಡಲಾಗುವುದು. ಎರಡೂ ಬಾರಿ ಶೇಕಡಾ 90 ರಷ್ಟು ನಿಖರವಾದ ಫಲಿತಾಂಶ ಬಂದರೆ ಅವರಿಗೆ 80 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು.

ಅಖಿಲ ಭಾರತೀಯ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯ ತರ್ಕವೇನೆಂದರೆ, ದರ್ಬಾರಿನಲ್ಲಿ ಮಾಹಿತಿ ಕಲೆಹಾಕಲು ಗುಪ್ತ ಮಾರ್ಗಗಳಿರಬಹುದು. ಅವುಗಳನ್ನು ನಿಯಂತ್ರಿಸುವುದು ಕಷ್ಟ. ಮಹಾರಾಜರು ತಮ್ಮನ್ನು ತಾವು ಸಾಬೀತುಪಡಿಸಿದರೆ, ನಾನು ಅವರ ಪಾದಗಳಿಗೆ ನಮಸ್ಕರಿಸುತ್ತೇನೆ, ನನ್ನ ಸಂಸ್ಥೆಯನ್ನು ಮುಚ್ಚುತ್ತೇನೆ ಮತ್ತು ಅವರ ಭಕ್ತನಾಗುತ್ತೇನೆ. ಮಹಾರಾಜರು ಸವಾಲನ್ನು ಸ್ವೀಕರಿಸುವುದಿಲ್ಲ. ನಿಷ್ಪಕ್ಷಪಾತ ಸವಾಲಿನಲ್ಲಿ ಭಾಗವಹಿಸಿದರೆ ತಮ್ಮ ದಂಧೆ ಬಂದ್ ಆಗುತ್ತದೆ ಎಂದು ಅವರಿಗೆ ತಿಳಿದಿದೆ. ಇದರಿಂದಾಗಿ ಅವರು ಓಡಿಹೋದರು. ಅವರ ಕಾರ್ಯಗಳು ಬೂಟಾಟಿಕೆಯಿಂದ ಕೂಡಿವೆ, ಎಂದು ಹೇಳಿದರು.

ನಾವು ಜಾದೂಗಾರರಲ್ಲ, ಇದು ಈಶ್ವರಿ ಪ್ರೇರಣೆ ! – ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ

ಈ ಸವಾಲಿಗೆ ಉತ್ತರಿಸುತ್ತಾ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು, ‘ನಾವು ಜಾದೂಗಾರರಲ್ಲ. ನಮಗೆ ಈಶ್ವರ ಯಾವ ಪ್ರೇರಣೆ ನೀಡುತ್ತಾನೋ, ಅದರಂತೆ ನಾವು ಜನರಿಗೆ ಮಾರ್ಗದರ್ಶನ ನೀಡುತ್ತೇವೆ,” ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂ ಸಂತರ ಕಾರ್ಯಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಎತ್ತಿ ಅವರ ಮಾನಹಾನಿ ಮಾಡುವ ಈ ಪ್ರಯತ್ನ ನಾಸ್ತಿಕರ ವೈಚಾರಿಕ ಮಾಲಿನ್ಯವೇ ಸರಿ !
  • ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ದರ್ಬಾರಿಗೆ ಬಂದು ಸತ್ಯ ತಿಳಿದುಕೊಳ್ಳದೆ ತಮ್ಮದೇ ಷರತ್ತುಗಳನ್ನು ವಿಧಿಸಿ ಅವರನ್ನು ತೊಂದರೆಗೆ ಸಿಲುಕಿಸುವ ಶ್ಯಾಮ್ ಮಾನವ್ ಅವರ ಈ ಪ್ರಯತ್ನ ವಿಫಲವಾಗಲಿದೆ ಎಂದು ಭಕ್ತರು ಭಾವಿಸುತ್ತಾರೆ !