ನೀತಿ ಆಯೋಗದ ವರದಿ
ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ವಲಯದ ವೇಗವಾದ ಬೆಳವಣಿಗೆಯಿಂದ ಗುಣಮಟ್ಟದ ಮೇಲೆ ಪರಿಣಾಮ!

ನವ ದೆಹಲಿ – ಯಾವುದೇ ದೇಶದ ಆರ್ಥಿಕತೆ ಮತ್ತು ಅದರ ಭವಿಷ್ಯವು ಶಿಕ್ಷಣ ಕ್ಷೇತ್ರದ ಮೂಲಸೌಕರ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರಸ್ತುತ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ರಚನಾತ್ಮಕ ಬದಲಾವಣೆ ಕಂಡುಬರುತ್ತಿದೆ. ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಕಳೆದ ೨ ದಶಕಗಳಲ್ಲಿ ಭಾರತೀಯ ಪಾಲಕರ ಒಲವು ಸರಕಾರಿ ಶಾಲೆಗಳ ಬದಲಿಗೆ ಖಾಸಗಿ ಶಾಲೆಗಳತ್ತ ವೇಗವಾಗಿ ಹೆಚ್ಚಿದೆ; ಆದರೆ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ವಲಯದ ಈ ವೇಗವಾದ ಬೆಳವಣಿಗೆಯಿಂದ ಗುಣಮಟ್ಟ, ಸಮಾನತೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅನೇಕ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಇದರಲ್ಲಿ ಹೇಳಲಾಗಿದೆ.
ನೀತಿ ಆಯೋಗದ ವರದಿಯ ಅಂಕಿಅಂಶಗಳ ಪ್ರಕಾರ, ಕಳೆದ ೨ ದಶಕಗಳಲ್ಲಿ ಸರಕಾರಿ ಶಾಲೆಗಳ ಪ್ರವೇಶಾತಿಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ೨೦೦೫ ರಲ್ಲಿ ಶೇ. ೭೧ ರಷ್ಟು ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ೨೦೨೪-೨೫ ರಲ್ಲಿ ಈ ಅಂಕಿಅಂಶವು ಕೇವಲ ಶೇ. ೪೯.೨೪ ಕ್ಕೆ ಇಳಿದಿದೆ. ಇದಕ್ಕೆ ವಿರುದ್ಧವಾಗಿ, ಈಗ ಮಾಧ್ಯಮಿಕ ಶಿಕ್ಷಣದ ಹಂತದಲ್ಲಿ ಶೇ. ೪೪.೦೧ ರಷ್ಟು ಸಂಸ್ಥೆಗಳು ಖಾಸಗಿ ಶಾಲೆಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸರಕಾರಿ ಶಾಲೆಗಳಿಗೆ ಹೋಲಿಸಿದರೆ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಲು ಕಾರಣ
ಈ ಬದಲಾವಣೆಯು ಪ್ರಮುಖವಾಗಿ ಒಂದು ವಿಚಾರದಿಂದ ಪ್ರೇರಿತವಾಗಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ, ಕಠಿಣ ಶಿಸ್ತು ಮತ್ತು ಭವಿಷ್ಯದಲ್ಲಿ ಉದ್ಯೋಗದ ಹೆಚ್ಚಿನ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ಪಾಲಕರು ಅಭಿಪ್ರಾಯಪಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರು ಖಾಸಗಿ ಸಂಸ್ಥೆಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಖಾಸಗಿ ಶಾಲೆಗಳಲ್ಲಿನ ಶಿಕ್ಷಣ ಮತ್ತು ಸೌಲಭ್ಯಗಳ ಗುಣಮಟ್ಟ ಕಳಪೆ !
ಪಾಲಕರ ನಿರೀಕ್ಷೆಗಳು ಯಾವಾಗಲೂ ವಾಸ್ತವದ ಫಲಿತಾಂಶಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ವರದಿಯು ಎಚ್ಚರಿಸುತ್ತದೆ. ಕಡಿಮೆ ಶುಲ್ಕವಿರುವ ಖಾಸಗಿ ಶಾಲೆಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ, ಅಲ್ಲಿ ೫ ನೇ ತರಗತಿಯ ಶೇ. ೩೫ ರಷ್ಟು ವಿದ್ಯಾರ್ಥಿಗಳಿಗೆ ೨ ನೇ ತರಗತಿಯ ಪುಸ್ತಕವನ್ನೂ ಓದಲು ಸಾಧ್ಯವಾಗುತ್ತಿಲ್ಲ, ಇನ್ನು ಶೇ. ೬೦ ರಷ್ಟು ವಿದ್ಯಾರ್ಥಿಗಳಿಗೆ ಭಾಗಾಕಾರದ ಸರಳ ಲೆಕ್ಕಗಳನ್ನು ಬಿಡಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಇಂತಹ ಅನೇಕ ಶಾಲೆಗಳು ‘ಶಿಕ್ಷಣದ ಹಕ್ಕು’ ಕಾಯಿದೆಯ ಮೂಲಭೂತ ಮಾನದಂಡಗಳನ್ನು ಪೂರೈಸುತ್ತಿಲ್ಲ ಮತ್ತು ಅಲ್ಲಿ ಶೌಚಾಲಯ, ಆಟದ ಮೈದಾನ ಹಾಗೂ ಕುಡಿಯುವ ಸ್ವಚ್ಛ ನೀರಿನಂತಹ ಅಗತ್ಯ ಸೌಲಭ್ಯಗಳ ಕೊರತೆಯಿದೆ. ಈ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯು ಅನೇಕ ಬಾರಿ ಅನೌಪಚಾರಿಕವಾಗಿರುತ್ತದೆ ಮತ್ತು ಅವರು ಕಡಿಮೆ ವೇತನ ಹಾಗೂ ಉದ್ಯೋಗದ ಭದ್ರತೆಯಿಲ್ಲದೆ ಕೆಲಸ ಮಾಡಬೇಕಾಗುತ್ತದೆ, ಇದು ನೇರವಾಗಿ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಶಾಲೆಗಳಲ್ಲಿ ಶಿಕ್ಷಕರ ಕೊರತೆ
ದೇಶಾದ್ಯಂತ ಸುಮಾರು ೧೪ ಲಕ್ಷ ಶಾಲೆಗಳಲ್ಲಿ ಸುಮಾರು ೧ ಕೋಟಿ ೧ ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ-ಶಿಕ್ಷಕರ ಅನುಪಾತದಲ್ಲಿ ಸುಧಾರಣೆಯಾಗಿದ್ದರೂ ಸಹ, ಗ್ರಾಮೀಣ ಮತ್ತು ಹಿಂದುಳಿದ ಭಾಗಗಳಲ್ಲಿ ಶಿಕ್ಷಕರ ದೊಡ್ಡ ಕೊರತೆ ಹಾಗೂ ಅವರು ಕೆಲಸ ಬಿಡುವ ಪ್ರಮಾಣವು ಬಹಳ ಹೆಚ್ಚಿದೆ. ವರದಿಯು ‘ಏಕ-ಶಿಕ್ಷಕ ಶಾಲೆ’ಯನ್ನು ಅತಿದೊಡ್ಡ ಆತಂಕವೆಂದು ಪರಿಗಣಿಸಿದೆ. ಪ್ರಸ್ತುತ ೧ ಲಕ್ಷಕ್ಕೂ ಹೆಚ್ಚು ಶಾಲೆಗಳು (ಒಟ್ಟು ಶಾಲೆಗಳ ಶೇ. ೭ ಕ್ಕಿಂತ ಹೆಚ್ಚು) ಕೇವಲ ಒಬ್ಬ ಶಿಕ್ಷಕರ ಭರವಸೆಯ ಮೇಲೆ ನಡೆಯುತ್ತಿವೆ, ಇದರಿಂದಾಗಿ ವಿದ್ಯಾರ್ಥಿಗಳಿಗೆ ಕಲಿಕೆಯ ಅರ್ಥಪೂರ್ಣ ಅವಕಾಶಗಳು ಸಿಗುತ್ತಿಲ್ಲ. ಹಾಗೆಯೇ ಶಿಕ್ಷಕರ ಅಯೋಗ್ಯ ನೇಮಕಾತಿ, ಕಠಿಣ ಕೆಲಸದ ಪರಿಸ್ಥಿತಿ, ಆಡಳಿತಾತ್ಮಕ ಹೊರೆ ಮತ್ತು ವಿಷಯದ ಬಗ್ಗೆ ಸಾಕಷ್ಟು ಜ್ಞಾನವಿಲ್ಲದಿರುವಂತಹ ಅನೇಕ ಸವಾಲುಗಳು ಅಸ್ತಿತ್ವದಲ್ಲಿವೆ.
ಶಿಕ್ಷಣವನ್ನು ಭವಿಷ್ಯಕ್ಕಾಗಿ ಪೂರಕವಾಗಿಸುವ ಪ್ರಯತ್ನ
ತಾಂತ್ರಿಕ ಕೌಶಲ್ಯಗಳನ್ನು ಉತ್ತೇಜಿಸಲು, ಶಿಕ್ಷಣ ಸಚಿವಾಲಯವು ಅಕ್ಟೋಬರ್ ೨೦೨೫ ರಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟೇಶನಲ್ ಥಿಂಕಿಂಗ್ ಅನ್ನು ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಅಡಿಯಲ್ಲಿ ೩ ನೇ ತರಗತಿಯಿಂದ ಕಡ್ಡಾಯ ಕೌಶಲ್ಯವಾಗಿ ಕಲಿಸಲಾಗುವುದು ಎಂದು ಘೋಷಿಸಿದೆ. ಸಿ.ಬಿ.ಎಸ್.ಇ. (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ) ಮತ್ತು ಎನ್.ಸಿ.ಆರ್.ಟಿ. (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಇದರ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಿವೆ. ಆದಾಗ್ಯೂ, ಮೂಲಸೌಕರ್ಯಗಳ ಕೊರತೆ ಮತ್ತು ಶಿಕ್ಷಕರು ಸಂಪೂರ್ಣವಾಗಿ ಸಿದ್ಧರಿಲ್ಲದ ಕಾರಣ ಈ ಹೊಸ ವಿಷಯಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಒಂದು ದೊಡ್ಡ ಸವಾಲಾಗಬಹುದು ಎಂದು ವರದಿಯು ಒಪ್ಪಿಕೊಂಡಿದೆ.
ಶಿಕ್ಷಣ ಕ್ಷೇತ್ರದ ಈ ಬದಲಾವಣೆಯು ಪಾಲಕರ ಉತ್ತಮ ಶಿಕ್ಷಣದ ಆಕಾಂಕ್ಷೆಗಳ ಫಲಿತಾಂಶವಾಗಿದೆ; ಆದರೆ ಕೇವಲ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗುವುದು ಯಶಸ್ಸಿನ ಖಚಿತತೆಯಲ್ಲ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು, ನೀತಿ ನಿರೂಪಕರು ನಿಯಂತ್ರಣ, ಶಿಕ್ಷಕರ ತರಬೇತಿ ಮತ್ತು ಮೂಲಸೌಕರ್ಯಗಳಲ್ಲಿನ ಕೊರತೆಗಳತ್ತ ತುರ್ತಾಗಿ ಗಮನಹರಿಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!