ಆಡಳಿತದ ನಿರ್ಲಕ್ಷ್ಯದಿಂದ ಹೆದ್ದಾರಿಗಳು ಅಪಾಯಕಾರಿ ಮಾರ್ಗಗಳಾಗಬಾರದು! – ಸರ್ವೋಚ್ಚ ನ್ಯಾಯಾಲಯ – Supreme Court National Highways

ಹೆದ್ದಾರಿ ಅಪಘಾತಗಳಲ್ಲಿನ ಮರಣ ಪ್ರಮಾಣ ಶೇ. ೩೦ ರಷ್ಟು!

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ರಸ್ತೆ ಸುರಕ್ಷತೆಗಾಗಿ ದೇಶವ್ಯಾಪಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ರಸ್ತೆ ಮತ್ತು ಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. “ಆಡಳಿತದ ನಿರ್ಲಕ್ಷ್ಯತೆ ಅಥವಾ ಮೂಲಸೌಕರ್ಯಗಳ ಕೊರತೆಯಿಂದಾಗಿ ಎಕ್ಸ್‌ಪ್ರೆಸ್‌ವೇಗಳು ಅಪಾಯಕಾರಿ ಮಾರ್ಗಗಳಾಗಬಾರದು” ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಹೇಳಿದೆ. ಕಳೆದ ವರ್ಷ ನವೆಂಬರ್ ೨ ರಂದು ರಾಜಸ್ಥಾನದ ಫಲೋದಿಯಲ್ಲಿ ಮತ್ತು ನವೆಂಬರ್ ೩ ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಅಪಘಾತಗಳಲ್ಲಿ ೩೪ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಕುರಿತು ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅರ್ಜಿಯನ್ನು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಯುತ್ತಿದೆ.

೧. ನ್ಯಾಯಾಲಯವು, ದೇಶದ ಒಟ್ಟು ರಸ್ತೆಗಳ ಉದ್ದದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪ್ರಮಾಣ ಕೇವಲ ಶೇ. ೨ ರಷ್ಟಿದೆ; ಆದರೆ ಅಲ್ಲಿ ನಡೆಯುವ ರಸ್ತೆ ಅಪಘಾತಗಳ ಮರಣ ಪ್ರಮಾಣವು ಸುಮಾರು ಶೇ. ೩೦ ರಷ್ಟಿದೆ ಎಂದು ಹೇಳಿದೆ.

೨. ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಥವಾ ಅದರ ಪಕ್ಕದ ರಸ್ತೆಗಳಲ್ಲಿ ಯಾವುದೇ ಭಾರೀ ಅಥವಾ ವಾಣಿಜ್ಯ ವಾಹನಗಳನ್ನು ನಿಲ್ಲಿಸಬಾರದು ಎಂದು ನ್ಯಾಯಾಲಯವು ತನ್ನ ನಿರ್ದೇಶನಗಳಲ್ಲಿ ಸೂಚಿಸಿದೆ. ಕೇವಲ ನಿಗದಿಪಡಿಸಿದ ವಾಹನ ನಿಲುಗಡೆ ತಾಣಗಳು, ವಿಶ್ರಾಂತಿ ಗೃಹಗಳು ಅಥವಾ ಮಾರ್ಗ ಮಧ್ಯದ ಸೌಲಭ್ಯಗಳಿರುವ ಸ್ಥಳಗಳಲ್ಲಿ ಮಾತ್ರ ಈ ವಾಹನಗಳನ್ನು ನಿಲ್ಲಿಸಬೇಕು. ಅಲ್ಲದೆ, ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ, ರಾಜ್ಯ ಪೊಲೀಸರಿಗೆ ತಕ್ಷಣದ ಎಚ್ಚರಿಕೆ ರವಾನೆ, ಜಿಪಿಎಸ್, ಸಮಯದ ದಾಖಲೆ ಇರುವ ಛಾಯಾಚಿತ್ರದ ಪುರಾವೆ ಮತ್ತು ಏಕೀಕೃತ ಇ-ಚಲನ್ ವ್ಯವಸ್ಥೆಯ ಮೂಲಕ ಈ ನಿರ್ದೇಶನಗಳನ್ನು ಜಾರಿಗೊಳಿಸಬೇಕು ಎಂದು ನ್ಯಾಯಾಲಯವು ತಿಳಿಸಿದೆ.

ಸರಕಾರಿ ಸಂಸ್ಥೆಗಳ ಸಾಮೂಹಿಕ ವೈಫಲ್ಯ!

ರಸ್ತೆ ಬದಿಯ ಅಕ್ರಮ ಪಾರ್ಕಿಂಗ್ ಅಥವಾ ಪದೇ ಪದೇ ಅಪಘಾತವಾಗುವ ಜಾಗಗಳಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಿದ್ದರೂ, ಇವುಗಳಿಂದ ಒಬ್ಬ ವ್ಯಕ್ತಿ ಜೀವ ಕಳೆದುಕೊಳ್ಳುತ್ತಾನೆ ಎಂದರೆ ಅದು ಸರ್ಕಾರಿ ಸಂಸ್ಥೆಗಳ ಒಟ್ಟಾರೆ ಸೋಲು. ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಸಂವಿಧಾನದ ವಿಧಿ ೨೧ ರ ಅಡಿಯಲ್ಲಿ ಬದುಕುವ ಹಕ್ಕು ಎಂದರೆ ಕೇವಲ ಪ್ರಾಣಾಂತಿಕ ಅಪರಾಧಗಳಿಂದ ರಕ್ಷಣೆ ಪಡೆಯುವುದು ಮಾತ್ರವಲ್ಲ, ಬದಲಾಗಿ ಮಾನವ ಜೀವವನ್ನು ರಕ್ಷಿಸುವ ಮತ್ತು ಅದಕ್ಕೆ ಮಹತ್ವ ನೀಡುವ ಸುರಕ್ಷಿತ ವಾತಾವರಣವನ್ನು ನಿರ್ಮಿಸುವುದು ಸರಕಾರದ ಜವಾಬ್ದಾರಿಯಾಗಿದೆ.

ಸಂಪಾದಕೀಯ ನಿಲುವು

ಆಡಳಿತದ ನಿರ್ಲಕ್ಷ್ಯ ತೋರಿದವರಿಗೆ ಹೆದ್ದಾರಿಯಲ್ಲಿಯೇ ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಉದಾಸೀನತೆ ದೂರವಾಗುತ್ತದೆ ಎಂದು ಜನಸಾಮಾನ್ಯರಿಗೆ ಅನಿಸುತ್ತಿದೆ!