ಇಟಲಿಯಲ್ಲಿ ಗುರುದ್ವಾರದ ಹೊರಗೆ ಇಬ್ಬರು ಸಿಖ್ಖರ ಗುಂಡಿಕ್ಕಿ ಹತ್ಯೆ

ಹಳೆ ದ್ವೇಷದ ಹಿನ್ನೆಲೆಯಲ್ಲಿ ಭಾರತೀಯ ಮೂಲದವರಿಂದಲೇ ಕೊಲೆ ನಡೆದಿರುವ ಶಂಕೆ

ರೋಮ್ (ಇಟಲಿ) – ಇಟಲಿಯ ಕೋವೊ ಎಂಬಲ್ಲಿ ಗುರುದ್ವಾರದ ಹೊರಗೆ ಅಪರಿಚಿತರು ಗುಂಡಿನ ದಾಳಿ ನಡೆಸಿ, ಗುರುದ್ವಾರದ ರಾಜಿಂದರ್ ಸಿಂಗ್ (೪೮ ವರ್ಷ) ಮತ್ತು ಗುರಮೀತ್ ಸಿಂಗ್ (೪೮ ವರ್ಷ) ಎಂಬ ಇಬ್ಬರು ಸೇವಕರನ್ನು ಹತ್ಯೆ ಮಾಡಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಇನ್ನೊಬ್ಬರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಿಂದ ಗುಂಡು ಹಾರಿಸಿದವರು ಭಾರತೀಯ ಮೂಲದವರೆಂದು ತಿಳಿದುಬಂದಿದೆ. ಈ ಪ್ರಕರಣವು ಆಂತರಿಕ ದ್ವೇಷಕ್ಕೆ ಸಂಬಂಧಿಸಿದೆ ಎನ್ನಲಾಗಿದೆ. ಮೃತ ಸೇವಕರು ದೀರ್ಘಕಾಲದಿಂದ ಗುರುದ್ವಾರದಲ್ಲಿ ಸೇವಕರಾಗಿ ಕೆಲಸ ಮಾಡುತ್ತಿದ್ದರು.

ಗುರುದ್ವಾರದಲ್ಲಿ ಬೈಸಾಕಿ (ಖಾಲ್ಸಾ ಪಂಥದ ಸ್ಥಾಪನಾ ದಿನ) ಅಂಗವಾಗಿ ಏಪ್ರಿಲ್ ೧೮ ರಂದು ನಗರ ಕೀರ್ತನೆಯ ಸಿದ್ಧತೆ ನಡೆಯುತ್ತಿತ್ತು. ಇಬ್ಬರು ಸೇವಕರು ರಾತ್ರಿ ೧೨ ಗಂಟೆಯ ಸುಮಾರಿಗೆ ಗುರುದ್ವಾರದಿಂದ ಹೊರಬರುತ್ತಿದ್ದಾಗ, ಕಾರಿನಲ್ಲಿ ಬಂದವರು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯ ನಂತರ ಕೋವೊದಲ್ಲಿ ನಡೆಯಬೇಕಿದ್ದ ನಗರ ಕೀರ್ತನೆಯನ್ನು ಕೂಡ ರದ್ದುಗೊಳಿಸಲಾಗಿದೆ.