ಆಶಾ ಭೋಸಲೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಕ್ಕೆ ಪಾಕ್ ಸರಕಾರದ ಕೆಂಗಣ್ಣು !

ಪಾಕಿಸ್ತಾನದ ಸುದ್ದಿವಾಹಿನಿ ‘ಜಿಯೋ ನ್ಯೂಸ್ ಉರ್ದು’ಗೆ ನೋಟಿಸ್ ಜಾರಿ

ಇಸ್ಲಾಮಾಬಾದ (ಪಾಕಿಸ್ತಾನ) – ಸ್ವರ ಸಾಮ್ರಾಜ್ಞಿ ಆಶಾ ಭೋಸಲೆ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಕುರಿತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಪಾಕಿಸ್ತಾನದ ಕೆಲವು ಸುದ್ದಿವಾಹಿನಿಗಳಿಗೆ ಪಾಕಿಸ್ತಾನ ಸರಕಾರವು ವಿರೋಧ ವ್ಯಕ್ತಪಡಿಸಿದೆ. ಪಾಕ್ ಸರಕಾರದ ‘ಪಾಕಿಸ್ತಾನ್ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ’ (ಪಾಕಿಸ್ತಾನದ ಸುದ್ದಿವಾಹಿನಿಗಳನ್ನು ನಿಯಂತ್ರಿಸುವ ಸರಕಾರಿ ಸಂಸ್ಥೆ) ‘ಜಿಯೋ ನ್ಯೂಸ್ ಉರ್ದು’ಗೆ ‘ಕಾರಣ ಕೇಳಿ ನೋಟಿಸ್’ ನೀಡಿದೆ. ಈ ವಾಹಿನಿಯು ಆಶಾ ಭೋಸಲೆ ಅವರಿಗೆ ಸುದೀರ್ಘವಾಗಿ ಶ್ರದ್ಧಾಂಜಲಿ ಸಲ್ಲಿಸಿತ್ತು ಮತ್ತು ಅವರ ಹಾಡುಗಳನ್ನು ಪ್ರಸಾರ ಮಾಡಿತ್ತು.

ಪಾಕ್ ಸರಕಾರದ ಈ ನಿಲುವನ್ನು ವಿರೋಧಿಸಿದ ‘ಜಿಯೋ ನ್ಯೂಸ್’ನ ವ್ಯವಸ್ಥಾಪಕ ನಿರ್ದೇಶಕ ಅಜಹರ್ ಅಬ್ಬಾಸ್ ಅವರು, ಒಬ್ಬ ಪ್ರಸಿದ್ಧ ಕಲಾವಿದರ ನಿಧನದ ಸುದ್ದಿಯನ್ನು ನೀಡುವಾಗ ಅವರ ಕಾರ್ಯ ಮತ್ತು ಕೊಡುಗೆಗಳ ಬಗ್ಗೆ ಅವಲೋಕನ ಮಾಡುವುದು ಪತ್ರಿಕೋದ್ಯಮದ ಒಂದು ಪ್ರಮಾಣಿತ ಮತ್ತು ಸಾಮಾನ್ಯ ಪದ್ಧತಿಯಾಗಿದೆ. ಜ್ಞಾನದಂತೆ ಕಲೆಯೂ ಸಹ ಮಾನವೀಯತೆಯ ಒಂದು ಹಂಚಿಕೆಯ ಪರಂಪರೆಯಾಗಿದೆ ಮತ್ತು ಅದನ್ನು ಯಾವುದೇ ಗಡಿಗಳಲ್ಲಿ ಬಂಧಿಸಬಾರದು. ಯುದ್ಧ ಮತ್ತು ಸಂಘರ್ಷದ ಸಮಯದಲ್ಲಿ ಕಲೆ ಮತ್ತು ಕಲಾವಿದರು ಬಲಿಯಾಗಬಾರದು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಲೆಯನ್ನು ರಾಜಕೀಯದಿಂದ ದೂರವಿಡಿ ಎಂದು ಬೋಧಿಸುವ ಹಾಗೂ ಪಾಕಿಸ್ತಾನಿ ಕಲಾವಿದರ ಕಾರ್ಯಕ್ರಮಗಳನ್ನು ಭಾರತದಲ್ಲಿ ನಡೆಸಲು ಅನುವು ಮಾಡಿಕೊಡದ ಹಿಂದುತ್ವನಿಷ್ಠರ ವಿರುದ್ಧ ವಿಷಕಾರುವ ಭಾರತದ ಕಲಾಭಿಮಾನಿಗಳು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ?