ಜಾತ್ಯಾತೀತ ನ್ಯಾಯಾಲಯವು ಯಾವುದೇ ಧಾರ್ಮಿಕ ಪದ್ಧತಿಯನ್ನು ಸುಲಭವಾಗಿ ಮೂಢನಂಬಿಕೆ ಎಂದು ನಿರ್ಧರಿಸಲು ಸಾಧ್ಯವಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ವಾದ !

ನವ ದೆಹಲಿ – ಒಂದು ಜಾತ್ಯಾತೀತ ನ್ಯಾಯಾಲಯವು ಯಾವುದೇ ಧಾರ್ಮಿಕ ಪದ್ಧತಿಯನ್ನು ಸುಲಭವಾಗಿ ಮೂಢನಂಬಿಕೆ ಎಂದು ನಿರ್ಧರಿಸಲು ಸಾಧ್ಯವಿಲ್ಲ; ಏಕೆಂದರೆ ಅಂತಹ ವಿಷಯವನ್ನು ನಿರ್ಧರಿಸುವ ಕೌಶಲ್ಯ ಅವರ ಬಳಿ ಇರುವುದಿಲ್ಲ. ನಾಗಾಲ್ಯಾಂಡ್ ನ ಯಾವುದೋ ಒಂದು ಸಮುದಾಯಕ್ಕೆ ಯಾವ ವಿಷಯವು ಧಾರ್ಮಿಕ ಎಂದು ನಂಬಲಾಗುತ್ತದೆಯೋ, ಅದು ನನಗೆ ಮೂಢನಂಬಿಕೆ ಎನಿಸಬಹುದು. ನಮ್ಮ ಸಮಾಜವು ಬಹಳ ವೈವಿಧ್ಯಮಯವಾಗಿದೆ, ಇದರಲ್ಲಿ ವಿವಿಧ ಜನರು, ಧರ್ಮಗಳು ಮತ್ತು ನಂಬಿಕೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಅಂತಹ ನಿರ್ಧಾರ ತೆಗೆದುಕೊಳ್ಳುವುದು ಅಪಾಯಕಾರಿಯಾಗಬಹುದು ಎಂದು ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ನಡೆಯುವ ತಾರತಮ್ಯದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಕೇರಳದ ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ.

ಮೆಹ್ತಾ ಅವರ ವಾದದ ಮೇಲೆ ನ್ಯಾಯಮೂರ್ತಿ ಅಮಾನ್ ಉಲ್ಲಾ ಅವರು ಪ್ರತಿಕ್ರಿಯಿಸಿ, ಶ್ರೀ ಮೆಹ್ತಾ ಅವರೇ, ನೀವು ಈ ಪ್ರಕರಣವನ್ನು ಅತ್ಯಂತ ಸುಲಭವಾಗಿ ವಿವರಿಸಿದ್ದೀರಿ. ‘ಮೂಢನಂಬಿಕೆ ಎಂದು ಯಾವುದನ್ನು ಕರೆಯುತ್ತಾರೆ?’, ಎಂಬುದನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ನ್ಯಾಯಾಂಗ ಪುನರ್ವಿಮರ್ಶೆಯ ಅಧಿಕಾರವಿದೆ. ಅದರ ನಂತರ ಅದರ ಮೇಲೆ ಕಾನೂನು ಮಾಡುವುದು ಅಥವಾ ಕ್ರಮ ಕೈಗೊಳ್ಳುವುದು ಶಾಸಕಾಂಗದ ಕೆಲಸವಾಗಿರಬಹುದು; ಆದರೆ ‘ಕೇವಲ ಶಾಸಕಾಂಗದ್ದೇ ಅಂತಿಮ ನಿರ್ಧಾರವಾಗಿರುತ್ತದೆ’, ಎಂದು ಹೇಳಲು ಬರುವುದಿಲ್ಲ, ಎಂದರು.

ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ನಡೆಯುವ ತಾರತಮ್ಯಕ್ಕೆ ಸಂಬಂಧಿಸಿದಂತೆ 2018 ರಲ್ಲಿ, 5 ನ್ಯಾಯಾಧೀಶರ ಪೀಠವು ನಾಲ್ವರ ವಿರೋಧ ಮತ್ತು ಓರ್ವರ ಪರ ಬಹುಮತದೊಂದಿಗೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿತ್ತು. ಇದರ ನಂತರ ಅನೇಕ ಪುನರ್ವಿಮರ್ಶೆ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಏಪ್ರಿಲ್ 7 ರಿಂದ 50 ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ನ್ಯಾಯಾಲಯದಲ್ಲಿ ಪುನರ್ವಿಮರ್ಶೆಯ ಅರ್ಜಿದಾರರು ಮತ್ತು ಅವರಿಗೆ ಬೆಂಬಲ ನೀಡುವವರು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ವಾದ ಮಂಡಿಸಲಿದ್ದಾರೆ, ಹಾಗೂ ವಿರೋಧಿಸುವವರು ಏಪ್ರಿಲ್ 14 ರಿಂದ ಏಪ್ರಿಲ್ 16 ರವರೆಗೆ ತಮ್ಮ ವಾದಗಳನ್ನು ಮಂಡಿಸಲಿದ್ದಾರೆ.