ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಂದ ಉತ್ತರ ಕೇಳಿದ ಸುಪ್ರೀಂ ಕೋರ್ಟ್! Haryana Minor Rape Case

  • ಗುರುಗ್ರಾಮದಲ್ಲಿ 4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ

  • ಪೊಲೀಸರು ಮಾಡಿದ ತನಿಖೆಯ ಬಗ್ಗೆ ಅಸಮಾಧಾನ!

ಗುರುಗ್ರಾಮ (ಹರಿಯಾಣ) – ಹರಿಯಾಣದ 4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆದಿದೆ. ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ಅಥವಾ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಹರಿಯಾಣ ಸರಕಾರ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಮಾರ್ಚ್ 25 ರಂದು ಗುರುಗ್ರಾಮದ ಪೊಲೀಸ್ ಕಮಿಷನರ್ ಮತ್ತು ತನಿಖಾಧಿಕಾರಿಗಳು ಎಲ್ಲಾ ದಾಖಲೆಗಳೊಂದಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಿದೆ. 4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ನಡೆಸಿದ ಕಥಿತ ತನಿಖೆಯ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ. ಇದರೊಂದಿಗೆ, ಗುರುಗ್ರಾಮದ ಜಿಲ್ಲಾ ನ್ಯಾಯಾಧೀಶರಿಗೂ ಪ್ರಮುಖ ನಿರ್ದೇಶನಗಳನ್ನು ನೀಡಲಾಗಿದ್ದು, ಪ್ರಕರಣವನ್ನು ಅಸೂಕ್ಷ್ಮವಾಗಿ ನಿರ್ವಹಿಸಿದ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಅವರಿಂದ ವಿವರಣೆ ಪಡೆಯುವಂತೆ ಸೂಚಿಸಲಾಗಿದೆ.

ಏನಿದು ಪ್ರಕರಣ?

ಮಾರ್ಚ್ 20 ರಂದು, ಗುರುಗ್ರಾಮದ 4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣವನ್ನು ಸಿಬಿಐ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿತು. ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಅವರು ಈ ವಿಷಯವನ್ನು ತುರ್ತಾಗಿ ಪ್ರಸ್ತಾಪಿಸಿದ್ದನ್ನು ಗಮನಿಸಿದ ನ್ಯಾಯಾಲಯವು, ಮಾರ್ಚ್ 23 ರಂದು ವಿಚಾರಣೆ ನಿಗದಿಪಡಿಸಿತ್ತು. ನ್ಯಾಯವಾದಿ ರೋಹಟಗಿ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಾ, ಆ ಬಾಲಕಿಯು ಮ್ಯಾಜಿಸ್ಟ್ರೇಟ್ ಎದುರು ಆ ಭೀಕರ ಘಟನೆಯ ಬಗ್ಗೆ ವಿವರವಾದ ಹೇಳಿಕೆ ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಯಾರನ್ನೂ ಬಂಧಿಸಲಾಗಿಲ್ಲ. ಘಟನಾ ಸ್ಥಳವನ್ನು ಸೀಲ್ ಮಾಡಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿಲ್ಲ. ಮನೆಯ ಕೆಲಸಗಾರರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಹರಿಯಾಣ ಡಿಜಿಪಿಯವರಿಂದ ಉತ್ತರ ಕೇಳಿದೆ.

ಸಂಪಾದಕೀಯ ನಿಲುವು

ಪೊಲೀಸರು ಇಂತಹ ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಸದಿದ್ದರೆ, ಪೊಲೀಸ್ ಪಡೆ ಎಂಬ ‘ಬಿಳಿ ಆನೆ’ಯನ್ನು ಸಾಕುವುದು ಏಕೆ?