ಇಸ್ಲಾಮಿಕ್ ದೇಶಗಳಲ್ಲಿಯೂ ರಸ್ತೆಗಳಲ್ಲಿ ನಮಾಜ್ ಮಾಡಲು ಅನುಮತಿಯಿಲ್ಲ! – ಸುನೀಲ ಅಂಬೇಕರ, ರಾಷ್ಟ್ರೀಯ ಸ್ವಯಂಸೇವಕ ಸಂಘ – Namaz On Roads

ಚೆನ್ನೈ – ಇಸ್ಲಾಮಿಕ್ ದೇಶಗಳಲ್ಲಿಯೂ ರಸ್ತೆಗಳಲ್ಲಿ ನಮಾಜ್ ಮಾಡಲು ಅನುಮತಿ ನೀಡಲಾಗುವುದಿಲ್ಲ. ಅಲ್ಲಿ ನಮಾಜ್‌ಗಾಗಿ ನಿರ್ದಿಷ್ಟ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ‘ಯಾವುದೇ ಸರಕಾರವು ರಸ್ತೆ ಮೇಲಿನ ನಮಾಜ್ ಮೇಲೆ ನಿರ್ಬಂಧ ಹೇರಿದಾಗ, ಅದನ್ನು ಧಾರ್ಮಿಕ ನಿರ್ಬಂಧ ಎಂದು ನೋಡದೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೈಗೊಂಡ ನಿರ್ಧಾರ ಎಂದು ನೋಡಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಸುನೀಲ ಅಂಬೇಕರ ಅವರು ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ರಸ್ತೆ ಮೇಲಿನ ನಮಾಜ್ ಅಥವಾ ಗಂಗಾ ನದಿಯಲ್ಲಿನ ಇಫ್ತಾರ್ ಪಾರ್ಟಿಗಳ ಮೇಲಿನ ಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಶ್ರೀ. ಅಂಬೇಕರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

೧. ಚಾರ್‌ಧಾಮ ದೇವಸ್ಥಾನಗಳಲ್ಲಿನ ‘ಸನಾತನಿ’ ಪ್ರತಿಜ್ಞಾಪತ್ರದ ಕುರಿತು ಮಾತನಾಡುತ್ತಾ, ಯಾವುದೇ ಪ್ರಾರ್ಥನಾ ಮಂದಿರದ ವ್ಯವಸ್ಥೆಯು ಆ ಧರ್ಮದ ಮೇಲೆ ಶ್ರದ್ಧೆಯುಳ್ಳವರಿಗಾಗಿ ಮಾಡಲಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಯಾರಿಗಾದರೂ ಈ ವ್ಯವಸ್ಥೆಗಳು ಸರಿಯಿಲ್ಲ ಎಂದು ಅನಿಸಿದರೆ, ಅವರು ಧ್ವನಿ ಎತ್ತಬಹುದು ಮತ್ತು ಅದಕ್ಕಾಗಿ ಮಾಧ್ಯಮಗಳು ಲಭ್ಯವಿವೆ ಎಂದು ಹೇಳಿದರು.

೨. ಪಶ್ಚಿಮ ಏಷ್ಯಾದ ಯುದ್ಧದ ಕುರಿತು ಮಾತನಾಡುತ್ತಾ, ಇದು ವಿರೋಧ ಪಕ್ಷಗಳು ಸರಕಾರಕ್ಕೆ ಬೆಂಬಲ ನೀಡುವ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಿಂತ ರಾಷ್ಟ್ರ ಹಿತಾಸಕ್ತಿಗೆ ಆದ್ಯತೆ ನೀಡುವ ಸಮಯವಾಗಿದೆ. ಯುದ್ಧವು ಸತ್ಯ ಮತ್ತು ಲೋಕಕಲ್ಯಾಣಕ್ಕಾಗಿ ನಡೆಯಬೇಕೇ ಹೊರತು ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ. ಭಾರತವು ಇದೇ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ನಮೂದಿಸಿದರು.

೩. ಜನಸಂಖ್ಯಾ ಬದಲಾವಣೆಯ ಕುರಿತು ಪ್ರತಿಕ್ರಿಯಿಸುತ್ತಾ ಅವರು ಇತಿಹಾಸದ ಉಲ್ಲೇಖ ನೀಡಿದರು. ಕೆಲವು ಜನರಿಗೆ ತಮ್ಮ ಉಪಾಸನಾ ಪದ್ಧತಿ ಬದಲಾಗಿದ್ದರೂ, ತಮ್ಮ ಪೂರ್ವಜರು ಮತ್ತು ಇತಿಹಾಸ ಒಂದೇ ಎಂಬುದು ಅರ್ಥವಾಗುತ್ತದೆ. ಆದರೆ ಒಂದು ವರ್ಗದವರಿಗೆ ತಮ್ಮ ಸಂಪ್ರದಾಯ ಬದಲಾಗಿರುವುದರಿಂದ ಈ ದೇಶವು ಈಗ ತಮ್ಮದಾಗಿ ಉಳಿದಿಲ್ಲ ಎಂದು ಅನಿಸುತ್ತದೆ. ಇದೇ ಮಾನಸಿಕತೆಯಿಂದಾಗಿ ಭಾರತದ ವಿಭಜನೆಯಾಯಿತು ಎಂದು ಹೇಳಿದರು.

೪. ಶ್ರೀ. ಅಂಬೇಕರ ಅವರು ‘ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ) ಮತ್ತು ‘ರಾಷ್ಟ್ರೀಯ ನಾಗರಿಕರ ನೋಂದಣಿ’ (ಎನ್‌ಆರ್‌ಸಿ) ಪ್ರಕ್ರಿಯೆಯನ್ನು ಬೆಂಬಲಿಸಿದರು. ಇದು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು ರಾಷ್ಟ್ರ ಹಿತಾಸಕ್ತಿಯನ್ನು ರಕ್ಷಿಸಲು ಇದೆ ಎಂದು ಅವರು ಸ್ಪಷ್ಟಪಡಿಸಿದರು. ಅಕ್ರಮ ನುಸುಳುಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಯಾರಾದರೂ ತಪ್ಪಾಗಿ ಹೊರಗುಳಿದಿದ್ದರೆ ತಿದ್ದುಪಡಿಗಾಗಿ ವ್ಯವಸ್ಥೆ ಲಭ್ಯವಿದೆ ಎಂದೂ ಅವರು ಹೇಳಿದರು.

೫. ‘ನೆರೆಯ ದೇಶಗಳ (ನೇಪಾಳ, ಬಾಂಗ್ಲಾದೇಶ) ಯುವಕರು ಬೀದಿಗೆ ಇಳಿಯುತ್ತಿರುವಾಗ ಭಾರತದ ಯುವಕರು ಏಕೆ ಹಾಗೆ ಮಾಡುತ್ತಿಲ್ಲ?’ ಎಂಬ ಪ್ರಶ್ನೆಗೆ, ಭಾರತದ ಯುವಕರು ಅತ್ಯಂತ ಮಹತ್ವಾಕಾಂಕ್ಷಿಗಳಾಗಿದ್ದಾರೆ. ಸರಕಾರವು ತಮ್ಮ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಅವರಿಗೆ ಅನಿಸುತ್ತದೆ. ಅವರು ಸಂವಿಧಾನವನ್ನು ಗೌರವಿಸುತ್ತಾರೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡುತ್ತಾರೆ ಎಂದು ಉತ್ತರಿಸಿದರು.

೬. ೨೦೨೫ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ೧೦೦ ವರ್ಷಗಳನ್ನು ಪೂರೈಸಿದೆ. ಈ ಕುರಿತು ಮಾಹಿತಿ ನೀಡುತ್ತಾ ಶ್ರೀ. ಅಂಬೇಕರ ಅವರು, ಪ್ರಸ್ತುತ ಪ್ರತಿದಿನ ಸುಮಾರು ೮೮ ಸಾವಿರ ಶಾಖೆಗಳು ನಡೆಯುತ್ತಿವೆ, ಇದರಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ಏಕತೆ, ಅಭಿವೃದ್ಧಿ ಮತ್ತು ಸುರಕ್ಷತೆಯ ತತ್ವಗಳ ಮೇಲೆ ೧೦೦ ವರ್ಷಗಳ ಹಿಂದೆ ಸಂಘವನ್ನು ಸ್ಥಾಪಿಸಲಾಗಿತ್ತು ಎಂದು ಸಂಘದ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದರು.​