ಒಡಿಶಾದ ಕಾಳಾಹಂಡಿ ಜಿಲ್ಲೆಯಲ್ಲಿ 136 ಜನರಿಂದ ಹಿಂದೂ ಧರ್ಮಕ್ಕೆ ಮರುಪ್ರವೇಶ

ಮಾರ್ಗದರ್ಶನ ನೀಡುತ್ತಿರುವ ಶ್ರೀ. ಪ್ರಬಲ ಪ್ರತಾಪ ಸಿಂಹ ಜುದೇವ, ಜೊತೆಗೆ ಅನ್ಯ ಗಣ್ಯರು

ಭುವನೇಶ್ವರ (ಒಡಿಶಾ) – ಕಾಳಾಹಂಡಿ ಜಿಲ್ಲೆಯ ಬಿರಿಮುಹಾನ್ ಎಂಬ ದುರ್ಗಮ ಅರಣ್ಯವಾಸಿ ಗ್ರಾಮದಲ್ಲಿ, ಈ ಹಿಂದೆ ಮತಾಂತರಗೊಂಡಿದ್ದ 136 ಜನರು ಇತ್ತೀಚೆಗೆ ತಮ್ಮ ಪೂರ್ವಜರ ಸನಾತನ ಹಿಂದೂ ಧರ್ಮಕ್ಕೆ ಮರುಪ್ರವೇಶ ಮಾಡಿದರು. ‘ಧರ್ಮ ಜಾಗರಣ ಸಮನ್ವಯ ವಿಭಾಗ, ಒಡಿಶಾ’ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳು, ಮಂತ್ರೋಚ್ಚಾರಣೆ ಮತ್ತು ಪಾದಪ್ರಕ್ಷಾಲನೆ (ಕಾಲು ತೊಳೆಯುವಿಕೆ) ಮಾಡುವ ಮೂಲಕ ಅವರನ್ನು ಹಿಂದೂ ಧರ್ಮಕ್ಕೆ ಸ್ವಾಗತಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ‘ಘರ್ ವಾಪಸಿ’ (ಹಿಂದೂ ಧರ್ಮಕ್ಕೆ ಮರುಪ್ರವೇಶ) ಚಳವಳಿಯ ಅಖಿಲ ಭಾರತ ಪ್ರಮುಖರಾದ ಶ್ರೀ. ಪ್ರಬಲ ಪ್ರತಾಪ ಸಿಂಹ ಜುದೇವ್ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಇಂದು ನಾವು ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ. ಅವರು ಒಡಿಶಾದ ಆದಿವಾಸಿ ಬಹುಸಂಖ್ಯಾತ ಫುಲ್ಬಾನಿ (ಕಂಧಮಾಲ್) ಜಿಲ್ಲೆಯಲ್ಲಿ ಸನಾತನ ನಂಬಿಕೆಯಿಂದ ದೂರವಾಗಿದ್ದ ಅರಣ್ಯವಾಸಿ ಸಮುದಾಯಗಳನ್ನು ಮತ್ತೆ ಹಿಂದೂ ಧರ್ಮದ ಪ್ರವಾಹಕ್ಕೆ ತರಲು ಅಪಾರ ಶ್ರಮ ವಹಿಸಿದ್ದರು; ಆದರೆ ಆಗಸ್ಟ್ 2008 ರಲ್ಲಿ ‘ಮತಾಂತರ ಮಾಫಿಯಾ’ ಸಂಚು ರೂಪಿಸಿ ಅವರನ್ನು ಹತ್ಯೆ ಮಾಡಿತು. ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಆದರ್ಶಗಳು ಮತ್ತು ಕಾರ್ಯವನ್ನು ನಾವು ಸದಾ ಜೀವಂತವಾಗಿಡುತ್ತೇವೆ,” ಎಂದು ಶ್ರೀ. ಜುದೇವ್ ಅವರು ನಿರ್ಧಾರ ವ್ಯಕ್ತಪಡಿಸಿದರು. ಕಾಳಾಹಂಡಿ ಪ್ರದೇಶವು ಮತಾಂತರದ ಒಂದು ಪ್ರಮುಖ ಕೇಂದ್ರವಾಗಿ ಉಳಿದಿದೆ. ರಾಷ್ಟ್ರವಿರೋಧಿ ಶಕ್ತಿಗಳು ಸ್ಥಳೀಯ ಆದಿವಾಸಿ ಸಮುದಾಯಗಳ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯ ದುರುಪಯೋಗಪಡಿಸಿಕೊಂಡು ದೀರ್ಘಕಾಲದಿಂದ ಮತಾಂತರದ ಕಾರ್ಯವನ್ನು ನಡೆಸುತ್ತಿವೆ. ಈ ‘ಘರ್ ವಾಪಸಿ’ ಕಾರ್ಯಕ್ರಮವನ್ನು ಈ ಇಡೀ ಪ್ರದೇಶದಲ್ಲಿ ಅತ್ಯಂತ ಮಹತ್ವದ ಘಟನೆ ಎಂದು ಪರಿಗಣಿಸಲಾಗಿದೆ.

ಆದಿವಾಸಿ ಮಹಿಳೆಯ ಕಾಲು ತೊಳೆಯುತ್ತಿರುವ ಶ್ರೀ. ಪ್ರಬಲ ಪ್ರತಾಪ ಸಿಂಹ ಜುದೇವ

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮಿ ಜನಕಾನಂದ ಗಿರಿ ಮಹಾರಾಜ್, ಸನ್ಯಾಸಿ ಕುಂಜದೇವ್ ಮನಿಷಿ, ಧರ್ಮ ಜಾಗರಣದ ಪ್ರಾದೇಶಿಕ ಮುಖ್ಯಸ್ಥ ವಿನಯ್ ಕುಮಾರ್ ಭುಯ್ಯಾ, ಒಡಿಶಾ ರಾಜ್ಯ ಮುಖ್ಯಸ್ಥ ವೀರ್ ವಿಕ್ರಮ್ ಆಚಾರ್ಯ, ಸಂತೋಷ್ ಕುಮಾರ್ ಪಾಂಡಾ, ಪ್ರಕಾಶ್ ಚಂದ್ರ ಠಾಕೂರ್, ಆರ್ಯ ಸಮಾಜದ ಕಪಿಲದೇವ್ ಶಾಸ್ತ್ರಿ, ಸನಾತನಿ ಯೋಧ ವಿವೇಕ್ ಅರ್ಗವಾಲ್, ಸಮೀರ್ ಕುಲಕರ್ಣಿ, ಸತೀಶ್ ಮಿಶ್ರಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.