ಗಂಗಾನದಿಯಲ್ಲಿ ರೋಗಕಾರಕ ‘ಕೋಲಿಫಾರ್ಮ್’ ಬ್ಯಾಕ್ಟೀರಿಯಾಗಳ ಪ್ರಮಾಣ 32 ಪಟ್ಟು ಹೆಚ್ಚಳ! – CAG Report

  • ಆಡಳಿತಾತ್ಮಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವ ‘ಕ್ಯಾಗ್’ ವರದಿ

  • ‘ನಮಾಮಿ ಗಂಗೆ’ ಯೋಜನೆಯ ಶೇ. 16% ರಷ್ಟು ನಿಧಿಯಷ್ಟೇ ಪರಿಣಾಮಕಾರಿ ಬಳಕೆ.

  • ಶೇ. 32% ರಷ್ಟು ಕೊಳಚೆ ನೀರನ್ನು ಸಂಸ್ಕರಿಸದೆಯೇ ನೇರವಾಗಿ ಗಂಗಾನದಿಗೆ ಬಿಡಲಾಗುತ್ತಿದೆ.

ಗೈರ್ಸೇನ್ (ಉತ್ತರಾಖಂಡ್) – ಹಿಂದೂಗಳಿಗೆ ಅತ್ಯಂತ ಪೂಜನೀಯವಾಗಿರುವ ಗಂಗಾನದಿಯ ಶುದ್ಧೀಕರಣಕ್ಕಾಗಿ ‘ನಮಾಮಿ ಗಂಗೆ’ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದರೂ, ಈ ನದಿಯು ಭಾರೀ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವುದು ಕಂಡುಬಂದಿದೆ. ದೇವಪ್ರಯಾಗದಿಂದ ಹರಿದ್ವಾರದವರೆಗಿನ ಗಂಗಾ ನದಿಯ ನೀರಿನ ಸ್ಥಿತಿಗತಿಯ ಕುರಿತಾದ ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲಕರ (ಸಿಎಜಿ – ‘ಕ್ಯಾಗ್’) ವರದಿಯು ಈಗ ಹೊರಬಂದಿದೆ. ಈ ವರದಿಯ ಪ್ರಕಾರ, ಗಂಗಾ ನದಿಯಲ್ಲಿ ರೋಗ ಹರಡಲು ಕಾರಣವಾಗುವ ‘ಕೋಲಿಫಾರ್ಮ್’ ಬ್ಯಾಕ್ಟೀರಿಯಾಗಳ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ 32 ಪಟ್ಟು ಹೆಚ್ಚಿರುವುದು ಪತ್ತೆಯಾಗಿದೆ. ಇದಲ್ಲದೆ, ಅನೇಕ ಕೊಳಚೆ ನೀರು ಸಂಸ್ಕರಣಾ ಘಟಕಗಳು (STP) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂಬುದು ತಿಳಿದುಬಂದಿದೆ. 2018 ರಿಂದ 2023 ರ ಅವಧಿಯಲ್ಲಿ ಉತ್ತರಾಖಂಡದಲ್ಲಿ ‘ನಮಾಮಿ ಗಂಗೆ’ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸುವಾಗ ಈ ಲೆಕ್ಕಪರಿಶೋಧನೆ ನಡೆಸಲಾಗಿದೆ.

ವರದಿಯ ಪ್ರಮುಖ ಅಂಶಗಳು !

ಅಂದಾಜು ಶೇ. 32% ರಷ್ಟು ಕೊಳಚೆ ನೀರನ್ನು ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸದೆಯೇ ನೇರವಾಗಿ ಗಂಗೆಗೆ ಬಿಡಲಾಗುತ್ತಿದೆ.

ಗಂಗಾ ನದಿಯ ದಡದಲ್ಲಿರುವ ನಗರಗಳಲ್ಲಿ ಈ ಯೋಜನೆಯ ಅನೇಕ ಅಂಶಗಳನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ.

ಯೋಜನೆಯಡಿ ಕೈಗೊಳ್ಳಲಾದ ವೃಕ್ಷಾರೋಪಣ (ಸಸಿ ನೆಡುವ) ಕಾರ್ಯಗಳಲ್ಲೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಯೋಜನೆಗೆ ನಿಗದಿಪಡಿಸಿದ ಒಟ್ಟು ವೆಚ್ಚದಲ್ಲಿ ಕೇವಲ ಶೇ. 16% ರಷ್ಟು ಹಣವನ್ನು ಮಾತ್ರ ಪರಿಣಾಮಕಾರಿಯಾಗಿ ಬಳಸಲಾಗಿದೆ.

ಕಲುಷಿತ ನೀರು ಮತ್ತು ಕಳಪೆ ನೈರ್ಮಲ್ಯದಿಂದಾಗಿ ಅತಿಸಾರ, ಭೇದಿ, ‘ಹೆಪಟೈಟಿಸ್ ಎ’, ಟೈಫಾಯಿಡ್ ಮತ್ತು ಪೋಲಿಯೊದಂತಹ ಅನೇಕ ಗಂಭೀರ ಕಾಯಿಲೆಗಳು ಹರಡುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

  • ಆಡಳಿತ ಯಂತ್ರಕ್ಕೆ ಇದು ನಾಚಿಕೆಗೇಡಿನ ಸಂಗತಿ! ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ದೇವನದಿ ಗಂಗೆಯ ಶುದ್ಧೀಕರಣ ಪ್ರಕ್ರಿಯೆಯ ಕಾಲಮಿತಿಯನ್ನು 100 ಕೋಟಿ ಹಿಂದೂಗಳಿಗೆ ತಿಳಿಸಬೇಕು !
  • ಈ ರೀತಿ ಸಂಸ್ಕರಿಸದ ಕೊಳಚೆ ನೀರನ್ನು ಗಂಗಾನದಿಗೆ ಬಿಡುತ್ತಿರುವ ಸಂಸ್ಥೆಗಳಿಗೆ ಸರಕಾರ ಏಕೆ ಬೀಗ ಹಾಕುತ್ತಿಲ್ಲ? ಮಹಾನಗರ ಪಾಲಿಕೆಗಳಂತಹ ಸ್ಥಳೀಯ ಆಡಳಿತ ಸಂಸ್ಥೆಗಳಿಂದಲೇ ಇಂತಹ ತಪ್ಪುಗಳಾಗುತ್ತಿದ್ದರೆ, ಸರಕಾರ ಅಂಥವರಿಗೂ ತಕ್ಕ ಪಾಠ ಕಲಿಸಬೇಕು !
  • ದೇವನದಿ ಗಂಗೆಯ ಈ ಸ್ಥಿತಿಗೆ 100 ಕೋಟಿ ಹಿಂದೂಗಳೂ ಕೂಡ ಅಷ್ಟೇ ಜವಾಬ್ದಾರರು! ಹಿಂದೂಗಳು ಈಗಲಾದರೂ ಸರಕಾರದ ಮೇಲೆ ಒತ್ತಡ ಹೇರಿ ಗಂಗಾನದಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಬೇಕು !
  • ಇಡೀ ಮಾನವಕುಲವನ್ನು ಪವಿತ್ರಗೊಳಿಸಿ ಪಾಪಮುಕ್ತಗೊಳಿಸುವ ಗಂಗಾನದಿಯನ್ನೇ ಅಶುದ್ಧಗೊಳಿಸುವವರು ಮಹಾಪಾಪಿಗಳೇ ಆಗಿದ್ದಾರೆ. ಅಂತಹವರ ಪಾಪ ಎಂದಿಗೂ ತೊಳೆದು ಹೋಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು !