ಫೆನಿ (ಬಾಂಗ್ಲಾದೇಶ) ಜಿಲ್ಲೆಯಲ್ಲಿ ಅಪ್ರಾಪ್ತ ಹಿಂದೂ ಬಾಲಕನ ಹತ್ಯೆ!

  • ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ!

  • ಈ ದಾಳಿ ಪೂರ್ವಯೋಜಿತ! – ಬಾಲಕನ ಕುಟುಂಬಸ್ಥರ ಆರೋಪ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿದ್ದು, ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆ. ಇಲ್ಲಿನ ಫೆನಿ ಜಿಲ್ಲೆಯ ಲಾಲ್ ಪೋಲ್ ಪ್ರದೇಶದಲ್ಲಿ 16 ವರ್ಷದ ಸಂತು ಕುಮಾರ ಸಾಹಾ ಎಂಬ ಹಿಂದೂ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಿಯಾಜಿ ಪೆಟ್ರೋಲ್ ಪಂಪ್ ಬಳಿ ಸಂತು ತನ್ನ ಸಹಪ್ರಯಾಣಿಕರಿಗಾಗಿ ರಿಕ್ಷಾದಲ್ಲಿ ಕಾಯುತ್ತಿದ್ದನು. ಆ ಸಮಯದಲ್ಲಿ ಕೆಲವು ಜಿಹಾದಿಗಳು ಅವನ ವಾಹನವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಸಂತು ಇದನ್ನು ವಿರೋಧಿಸಿದ್ದರಿಂದ ಜಿಹಾದಿಗಳು ರಿಕ್ಷಾವನ್ನು ಹೆದ್ದಾರಿಯ ಸೇತುವೆಯ ಹತ್ತಿರಕ್ಕೆ ಕೊಂಡೊಯ್ದರು. ಅಲ್ಲಿ ವೇಗವಾಗಿ ಬರುತ್ತಿದ್ದ ವಾಹನವೊಂದು ಸಂತುವಿಗೆ ಡಿಕ್ಕಿ ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟನು. ಇಫ್ತಾರ್ ಸಮಯದಲ್ಲಿಯೂ ಸಂತುವನ್ನು ಗುರಿಪಡಿಸಲಾಗಿತ್ತು ಮತ್ತು ಈ ದಾಳಿಯು ಪೂರ್ವಯೋಜಿತವಾಗಿತ್ತು ಎಂದು ಅವನ ಕುಟುಂಬದವರು ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಹಿಂದೂಗಳ ಮೇಲೆ ಬಾಂಬ್ ಎಸೆಯಲಾಗಿತ್ತು. ಸ್ಫೋಟದಿಂದಾಗಿ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಅನೇಕರು ಪ್ರಾಣ ಉಳಿಸಿಕೊಳ್ಳಲು ಓಡಬೇಕಾಯಿತು ಮತ್ತು ಕೆಲವರು ಗಾಯಗೊಂಡರು.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರು ಅಲ್ಲಿನ ಹಿಂದೂಗಳ ಮೇಲಿನ ದಾಳಿಗಳು ಧಾರ್ಮಿಕವಲ್ಲ, ಬದಲಿಗೆ ರಾಜಕೀಯ ಸ್ವರೂಪದ್ದು ಎಂದು ಪ್ರತಿಪಾದಿಸಿದ್ದರು. ಆದರೆ ಅವರ ಈ ವಾದ ಎಷ್ಟು ಸುಳ್ಳು ಮತ್ತು ಆಧಾರರಹಿತ ಎಂಬುದು ಚುನಾವಣೆಗಳ ನಂತರವೂ ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಹತ್ಯೆಗಳಿಂದ ಸ್ಪಷ್ಟವಾಗುತ್ತದೆ. ಈ ವಿಷಯದಲ್ಲಿ ಈಗ ಭಾರತವು ರೆಹಮಾನ್ ಅವರನ್ನು ಪ್ರಶ್ನಿಸಬೇಕು!
  • ಅಮೆರಿಕದ ಹಸ್ತಕ್ಷೇಪ ಹೊಂದಿದ್ದ ಅಂದಿನ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಇರಲಿ ಅಥವಾ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಇಂದಿನ ಸರಕಾರವಿರಲಿ, ಹಿಂದೂಗಳ ಮೇಲಿನ ದಾಳಿಯ ಸಮಸ್ಯೆ ಎರಡೂ ಅಧಿಕಾರಾವಧಿಗಳಲ್ಲಿ ಒಂದೇ ತೆರನಾಗಿದೆ. ಇದರಿಂದ ಬಾಂಗ್ಲಾದೇಶವು ಹಿಂದೂಗಳಿಗೆ ನರಕ ಸದೃಶವಾಗಿದೆ ಎಂಬುದು ಮನವರಿಕೆಯಾಗುತ್ತದೆ!