‘ನೇಪಾಳದ ಬಳಕೆಯನ್ನು ಯಾವುದೇ ನೆರೆಹೊರೆಯ ದೇಶದ ವಿರುದ್ಧ ಮಾಡಲು ಬಿಡುವುದಿಲ್ಲ!’

ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಹೇಳಿಕೆ

ಕಾಠ್ಮಂಡು (ನೇಪಾಳ) – ಭಾರತ ಮತ್ತು ಚೀನಾ ಈ ಎರಡೂ ದೇಶಗಳೊಂದಿಗೆ ಪ್ರಾಮಾಣಿಕ ಮತ್ತು ಸಮತೋಲಿತ ಸಂಬಂಧವನ್ನು ಇಟ್ಟುಕೊಳ್ಳುವುದು ನಮ್ಮ ನಿಲುವಾಗಿದೆ. ಒಂದು ಶಕ್ತಿಯನ್ನು ಮತ್ತೊಂದರ ವಿರುದ್ಧ ನಿಲ್ಲಿಸುವುದಿಲ್ಲ. ನೇಪಾಳವನ್ನು ಯಾವುದೇ ನೆರೆಯ ದೇಶದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ. ತಲೆಮಾರುಗಳಿಂದ ನಾವು ಇಲ್ಲೇ ಇರುತ್ತೇವೆ. ನೆರೆಯ ದೇಶಗಳೂ ಇಲ್ಲೇ ಇರುತ್ತವೆ ಮತ್ತು ನಾವು ಇಲ್ಲೇ ಇರುತ್ತೇವೆ, ಎಂದು ನೇಪಾಳದ ಮಾಜಿ ಪ್ರಧಾನಿ ಮತ್ತು ‘ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್’ನ ಕೆ.ಪಿ. ಶರ್ಮಾ ಓಲಿ ಅವರು ಹೇಳಿದ್ದಾರೆ. ಮಾರ್ಚ್ ೫ ರಂದು ದೇಶದಲ್ಲಿ ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.

೧. ನೇಪಾಳದಲ್ಲಿ ಚುನಾವಣೆಗೆ ಮೊದಲು ೪ ಬಾರಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದ ಓಲಿ ಅವರು ಭಾರತ ಮತ್ತು ಚೀನಾ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ನಿಲುವನ್ನು ವ್ಯಕ್ತಪಡಿಸಿದರು.

೨. ಕಳೆದ ವರ್ಷ ನೇಪಾಳದಲ್ಲಿ ನಡೆದ ಯುವಕರ ಬೃಹತ್ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಾ, ‘ಇದು ನೇಪಾಳವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿತ್ತು’ ಎಂದು ಆರೋಪಿಸಿದರು. ಈ ಆಂದೋಲನದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಅವರು ಸೂಚಿಸಿದರು. ಅಲ್ಲದೆ ಈ ಆಂದೋಲನವನ್ನು ಕ್ರಿಮಿನಲ್ ಪ್ರವೃತ್ತಿಯ ವ್ಯಕ್ತಿಗಳು ತಮ್ಮ ಹತೋಟಿಗೆ ತೆಗೆದುಕೊಂಡಿದ್ದರು, ಹೀಗೂ ಅವರು ಹೇಳಿದರು.

೩. ‘ಚುನಾವಣೆಯಲ್ಲಿ ವಿದೇಶಿ ಹಣ ಬರುತ್ತಿದೆಯೇ? ಮತ್ತು ಹೊರಗಿನಿಂದ ಒತ್ತಡ ಹೇರಲಾಗುತ್ತಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಅಂತಹ ಚರ್ಚೆಗಳು ನಡೆಯುತ್ತಿರುವುದನ್ನು ಅವರು ಒಪ್ಪಿಕೊಂಡರು; ಆದರೆ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ಹೇಳಿದರು. ‘ನಿಖರವಾದ ಸಾಕ್ಷ್ಯ ಸಿಗದ ಹೊರತು ನಾನು ಯಾವುದೇ ಹೇಳಿಕೆ ನೀಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ಸಾಮ್ಯವಾದಿ ಪಕ್ಷದ ಅಧ್ಯಕ್ಷರಾಗಿರುವ ಓಲಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಚೀನಾದ ತಾಳಕ್ಕೆ ತಕ್ಕಂತೆ ಕುಣಿದು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು ಮತ್ತು ನೇಪಾಳಿ ಜನರಲ್ಲಿ ಭಾರತ ವಿರೋಧಿ ವಿಷವನ್ನು ಬಿತ್ತಿದ್ದರು. ಆದ್ದರಿಂದ ಓಲಿ ಅವರು ಕೇವಲ ತಮ್ಮ ಸ್ವಂತದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ಭಾರತೀಯ ಜನರಿಗೆ ತಿಳಿದಿದೆ!