ಮಹಿಳೆಯರನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅವಮಾನವನ್ನಾದರೂ ಮಾಡಬೇಡಿ! – ‘ಎಂಗೇಜ್ಡ್ 2’ ರಿಯಾಲಿಟಿ ಶೋ ಆಯೋಜಕರಿಗೆ ಹಿಂದೂ ಜನಜಾಗೃತಿ ಸಮಿತಿ ತರಾಟೆ

ಕ್ರಮ ಕೈಗೊಳ್ಳುವುದಾಗಿ ಗೃಹರಾಜ್ಯ ಸಚಿವರ ಭರವಸೆ!

‘ರಿಯಾಲಿಟಿ ಶೋ’ ವಿರುದ್ಧ ಗೃಹರಾಜ್ಯ ಸಚಿವ ಯೋಗೇಶ್ ಕದಂ (ಬಲಗಡೆ) ಅವರಿಗೆ ಮನವಿ ಸಲ್ಲಿಸುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತೀಶ ಸೋನಾರ್

ಮುಂಬಯಿ – ಜಿಯೋ ಹಾಟ್‌ಸ್ಟಾರ್ ಓಟಿಟಿ (ಓವರ್ ದಿ ಟಾಪ್) ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತಿರುವ ‘ಎಂಗೇಜ್ಡ್ 2 ರೋಕಾ ಯಾ ಧೋಕಾ’ ಎಂಬ ‘ರಿಯಾಲಿಟಿ ಶೋ’ನಲ್ಲಿ (ಯಾವುದೇ ಸ್ಕ್ರಿಪ್ಟ್ ಇಲ್ಲದೆ ತಯಾರಿಸಲಾದ ಕಾರ್ಯಕ್ರಮ) ತೋರಿಸಲಾಗುತ್ತಿರುವ ಅಶ್ಲೀಲತೆ ಮತ್ತು ಮಹಿಳೆಯರ ವಿಡಂಬನೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಮುಖ್ಯಮಂತ್ರಿ ಮತ್ತು ಗೃಹರಾಜ್ಯ ಸಚಿವರಿಗೆ ಮನವಿ ಸಲ್ಲಿಸಿದೆ. ರಿಯಾಲಿಟಿ ಶೋ ಮೇಲೆ ತಕ್ಷಣ ನಿಷೇಧ ಹೇರಬೇಕು ಮತ್ತು ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವಾಗ, ಇಂತಹ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಅಶ್ಲೀಲವಾಗಿ ಪ್ರಸ್ತುತಪಡಿಸುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಇದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮಹಿಳೆಯರನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅವಮಾನವನ್ನಾದರೂ ಮಾಡಬೇಡಿ ಎಂದು ರಿಯಾಲಿಟಿ ಶೋ ಆಯೋಜಕರಿಗೆ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಕು. ಪ್ರಿಯಾಂಕಾ ಲೋಣೆ ಎಚ್ಚರಿಸಿದ್ದಾರೆ. ಸಮಿತಿಯ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹರಾಜ್ಯ ಸಚಿವ ಯೋಗೇಶ್ ಕದಂ ಅವರು, “ಈ ಪ್ರಕರಣದಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು, ಹಾಗೆಯೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಂಸ್ಕೃತಿಕ ಇಲಾಖೆಗೂ ತಿಳಿಸಲಾಗುವುದು” ಎಂದು ಭರವಸೆ ನೀಡಿದರು. ಡಿಜಿಟಲ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಸರಕಾರವು ‘ಸಾಂಸ್ಕೃತಿಕ ಮೇಲ್ವಿಚಾರಣಾ ಸಮಿತಿ’ಯನ್ನು ರಚಿಸಬೇಕು. ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಸ್ತ್ರೀ-ಗೌರವದ ಪರಂಪರೆಯನ್ನು ಕಾಪಾಡಲು ಇಂತಹ ವಿಕೃತ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಮಿತಿಯು ಎಚ್ಚರಿಸಿದೆ. ’24 ಗಂಟೆಗಳ ಒಳಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿಯು ಗೃಹರಾಜ್ಯ ಸಚಿವರ ಬಳಿ ಆಗ್ರಹಿಸಿದೆ.

ಮನವಿಯಲ್ಲಿ…

1. ‘ರಿಯಾಲಿಟಿ ಶೋ’ನಲ್ಲಿ ‘ಲ್ಯಾಪ್ ಡ್ಯಾನ್ಸ್’ (ತೊಡೆಯ ಮೇಲೆ ಕುಳಿತು ನೃತ್ಯ ಮಾಡುವುದು), ‘ಮಡ್ ಟಾಸ್ಕ್’ (ಕೆಸರು ಹಚ್ಚುವುದು) ಮತ್ತು ‘ಐಸ್ ಕ್ಯೂಬ್ ಟಾಸ್ಕ್’ (ಮಂಜುಗಡ್ಡೆಯ ತುಂಡುಗಳೊಂದಿಗೆ ಆಟವಾಡುವುದು) ನಂತಹ ಅತ್ಯಂತ ಕೆಳಮಟ್ಟದ ಕೃತ್ಯಗಳ ಮೂಲಕ ಮಹಿಳೆಯರನ್ನು ವಸ್ತುವಿನಂತೆ ಬಳಸಲಾಗುತ್ತಿದೆ.

2. ಬಾಯಿಂದ ಮಹಿಳೆಯರ ಬಟ್ಟೆಯನ್ನು ತೆಗೆಯುವುದು, ಸಾರ್ವಜನಿಕವಾಗಿ ಮಹಿಳೆಯರನ್ನು ಕೈಯಿಂದ ಮುಟ್ಟಿ ಸ್ನಾನ ಮಾಡಿಸುವುದು, ಮೈಗೆ ಕೆಸರು ಹಚ್ಚುವುದು ಮುಂತಾದ ಕೃತ್ಯಗಳು ಕಾನೂನಿನ ಬಹಿರಂಗ ಉಲ್ಲಂಘನೆಯಾಗಿವೆ. ಇಂತಹ ಕೃತ್ಯಗಳಿಂದ ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ಸ್ವೈರಚಾರವನ್ನು ತಡೆಯುವುದು ಕಾಲದ ಅವಶ್ಯಕತೆಯಾಗಿದೆ.

ಅಶ್ಲೀಲ ಸಾಹಿತ್ಯದ ಮೇಲೆ ಕಾಯಂ ನಿರ್ಬಂಧ ಹೇರಲು ಪ್ರಯತ್ನಿಸುವುದಾಗಿ ಜನಪ್ರತಿನಿಧಿಗಳ ಭರವಸೆ

ವಿಷಯದ ಗಂಭೀರತೆಯನ್ನು ಅರಿತು ಭಾಜಪದ ಶಾಸಕಿ ಸೌ. ಚಿತ್ರಾ ವಾಘ್ ಮತ್ತು ಶಿವಸೇನೆಯ ಶಾಸಕಿ ಡಾ. ಮನೀಷಾ ಕಾಯಂದೆ ಅವರೂ ಈ ಪ್ರಕರಣದ ಬಗ್ಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ವಿಧಾನಮಂಡಲದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ‘ಇಂತಹ ಅಶ್ಲೀಲ ಸಾಹಿತ್ಯದ ಮೇಲೆ ಕಾಯಂ ನಿರ್ಬಂಧ ಹೇರಲು ಪ್ರಯತ್ನಿಸಲಾಗುವುದು’ ಎಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಈ ರೀತಿಯಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಅವಮಾನಿಸುವ ಕಾರ್ಯಕ್ರಮಗಳ ಬಗ್ಗೆ ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಸಂಘಟನೆಗಳು ಯಾಕೆ ಸುಮ್ಮನಿವೆ? ಇದರಿಂದ ಮಹಿಳಾ ಹಕ್ಕು ಎಂಬುದು ಕೇವಲ ಒಂದು ತೋರಿಸಿಕೊಡುವಿಕೆಯೆ ಎಂದು ತಿಳಿಯಬೇಕೇ?
  • ಸರಕಾರವು ವಾಸ್ತವವಾಗಿ ಇಂತಹ ಕಾರ್ಯಕ್ರಮಗಳ ಮೇಲೆ ಸ್ವತಃ ಕ್ರಮ ಕೈಗೊಳ್ಳಬೇಕು!